ಓಮಿಕ್ರಾನ್ ರೂಪಾಂತರಿಯಿಂದ ಮೂರನೇ ಅಲೆ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಬರುವ ದಿನಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಿಬಿಎಂಪಿ ಬೆಂಗಳೂರಿನ ಮಟ್ಟಕ್ಕೆ ನಗರದಲ್ಲಿ ಕೇಸ್ ಹೆಚ್ಚಳವಾಗದಂತೆ ತಡೆಯಲು ಹಲವು ತಂತ್ರವನ್ನು ರೂಪಿಸಿದೆ.
ಹೈ ರಿಸ್ಕ್ ದೇಶಗಳಿಂದ ಬರುವವರ ಮೇಲೆ ಬಿಬಿಎಂಪಿ ಕಣ್ಣು
ಕರೋನಾದ ಹೊಸ ರೂಪಾಂತರಿ ಮೂರನೇ ಅಲೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈಗಾಗಲೇ ಇಡೀ ರಾಜ್ಯದಲ್ಲಿ 19 ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಪೈಕಿ 10 ಪ್ರಕರಣ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಕರ್ನಾಟಕದ ಮಟ್ಟಿಗೆ ಕೊರೋನಾಗೆ ಹೆಚ್ಚು ಅನುಭವಿಸಿದ್ದು ರಾಜಧಾನಿ ಬೆಂಗಳೂರು. ಹೀಗಾಗಿ ಅಕಸ್ಮಾತ್ ಮೂರನೇ ಅಲೆ ಬಂದರೂ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಹೀಗಾಗಿ ಈಗಿಂದೀಗಲೇ ಬೆಂಗಳೂರಿನಲ್ಲಿ ಬೇಕಾದ ಸಿದ್ಧತೆಗಳನ್ನು ನಡೆಸಲು ಪಾಲಿಕೆ ಶ್ರಮಿಸುತ್ತಿದೆ. ಈ ಹಿನ್ನೆಲೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಳವಾದರೆ ನಗರಕ್ಕೆ ಇದರಿಂದ ಭಾರಿ ಹೊಡೆತವಾಗಬಾರದು ಎಂಬ ನೆಲೆಗಟ್ಟಿನಲ್ಲಿ ಹೊಸ ತಂತ್ರವನ್ನು ರೂಪಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿರುವ ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್ ಗಳ ಮಾಹಿತಿಯನ್ನು ಬಿಬಿಎಂಪಿ ಸಂಗ್ರಹಿಸುತ್ತಿದೆ.
ಓಮಿಕ್ರಾನ್ ಹೆಚ್ಚಾದರೆ ಏರ್ಪೋರ್ಟ್ ಸುತ್ತಮುತ್ತಲೇ ಕ್ವಾರಂಟೈನ್
ಈಗಾಗಲೇ ರಾಜ್ಯಕ್ಕೆ ಓಮೈಕ್ರಾನ್ ಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರದಿಂದ ಖಡಕ್ ಸೂಚನೆಯೂ ಬಂದಿದೆ. ಈ ನಡುವೆ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಫುಲ್ ಅಲರ್ಟ್ ಆಗಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ಕಣ್ಗಾವಲು ಸೃಷ್ಟಿಸಲು ಪಾಲಿಕೆ ನಿರ್ಧರಿಸಿದೆ. ದೇವನಹಳ್ಳಿ ಮತ್ತು ಏರ್ಪೋರ್ಟ್ ಸುತ್ತ ಮುತ್ತ ಇರುವ ಹೋಟೆಲ್, ಲಾಡ್ಜ್, ರೆಸಾರ್ಟ್ ಗಳ ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏರ್ಪೋರ್ಟ್ ಸುತ್ತಮುತ್ತ ಬರುವ ಎಲ್ಲಾ ರೆಸಾರ್ಟ್, ಹೋಟೆಲ್ ಗಳ ಮಾಹಿತಿ ಸಂಗ್ರಹಿಸಿದ ಬಳಿಕ, ಅಕಸ್ಮಾತ್ ಕೇಸ್ ಹೆಚ್ಚಳವಾದರೆ ನಗರದ ಬದಲು ಏರ್ಪೋರ್ಟ್ ಸುತ್ತಮುತ್ತಲೇ ಸೋಂಕಿತರಿಗೆ ಕ್ವಾರಂಟೈನ್ ವ್ಯವಸ್ಥೆ ಏರ್ಪಾಡು ಮಾಡುವ ಲೆಕ್ಕಾಚಾರ ಪಾಲಿಕೆಯದ್ದು.

22 ದಿನಗಳಲ್ಲಿ ನಗರಕ್ಕೆ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಆಗಮನ
ಪ್ರತಿ ದಿನ ನಗರಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3-4 ಹೈ ರಿಸ್ಕ್ ದೇಶಗಳಿಂದ ವಿಮಾನ ಆಗಮಿಸುತ್ತಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 22ರ ವರೆಗೆ WHO ಗುರುತಿಸಿದ ಹೈ ರಿಸ್ಕ್ ದೇಶದಿಂದ ಸರಿ ಸುಮಾರು ಒಂದು ಲಕ್ಷ ಮಂದಿ ಬೆಂಗಳೂರಿಗೆ ಬಂದಿದ್ದಾರೆ. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಬಹುದು. ಹೀಗೆ ನಗರಕ್ಕೆ ಆಗಮಿಸುವವರಿಗೆ ರಾಜಧಾನಿಗೆ ಎಂಟ್ರಿ ಕೊಡದೆ ಅಲ್ಲೇ ಏರ್ಪೋರ್ಟ್ ಸುತ್ತಮುತ್ತಲೇ ಕ್ವಾರಂಟೈನ್ ವ್ಯವಸ್ಥೆ ಮಾಡಿದರೆ ಉತ್ತಮ ಎಂಬ ನಿರ್ಧಾರ ಪಾಲಿಕೆಯದ್ದು.