ಚುನಾವಣಾ ಫಲಿತಾಂಶ ಪ್ರಕಟವಾದ ವೇಳೆ ಶ್ರೀಲಂಕಾ ಪ್ರವಾಸದಲ್ಲಿದ್ದ ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಧಿಕಾರ ಕಳೆದುಕೊಂಡ ಎಂ.ಕೆ. ಸ್ಟಾಲಿನ್ ಅವರಿಗೆ ಸಾಂತ್ವನ ಸೂಚಿಸಿ, ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪರೋಕ್ಷವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.
“ಶೀಘ್ರದಲ್ಲೇ ನಮಗೂ ಅಚ್ಚೇ ದಿನ್ ಬರಲಿದೆ” ಎಂಬ ಅಣ್ಣಾಮಲೈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದ್ದು, ಭವಿಷ್ಯದ ರಾಜಕೀಯ ಸಮೀಕರಣಗಳ ಬಗ್ಗೆ ಚರ್ಚೆ ಜೋರಾಗಿದೆ.
ಇದೀಗ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಮೇ 7ರಂದು ಚೆನ್ನೈನ ನೆಹರೂ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ರಾಜ್ಯದಾದ್ಯಂತ ಗಮನ ಕೇಂದ್ರೀಕೃತವಾಗಿದ್ದು, ಸಿನಿ ತಾರೆಯಿಂದ ರಾಜಕೀಯ ನಾಯಕರಾಗುತ್ತಿರುವ ವಿಜಯ್ ಗೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯಾಗಿ ಸ್ಪರ್ಧಿಸಿದ್ದರೂ, ಸೀಟು ಹಂಚಿಕೆ ವಿಚಾರದಲ್ಲಿ ಅಣ್ಣಾಮಲೈ ಮತ್ತು ಎಡಪ್ಪಾಡಿ ಪಳನಿಸ್ವಾಮಿ ನಡುವೆ ಭಿನ್ನಾಭಿಪ್ರಾಯಗಳು ಹೊರಬಿದ್ದಿದ್ದವು. ಆದಾಗ್ಯೂ ಅಣ್ಣಾಮಲೈ ರಾಜ್ಯದಾದ್ಯಂತ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸೀಮಿತವಾಗಿದ್ದ ತಮಿಳುನಾಡು ರಾಜಕೀಯಕ್ಕೆ ವಿಜಯ್ ಪ್ರವೇಶ ಹೊಸ ತಿರುವು ನೀಡಿದೆ. ವಿಜಯ್ ಗೆಲುವನ್ನು ಅಣ್ಣಾಮಲೈ ಶ್ಲಾಘಿಸಿರುವುದು ಹಾಗೂ ‘ಅಚ್ಚೇ ದಿನ್’ ಹೇಳಿಕೆ ನೀಡಿರುವುದು ಮುಂದಿನ ದಿನಗಳಲ್ಲಿ ಬಿಜೆಪಿ–ಟಿವಿಕೆ ನಡುವೆ ಹೊಸ ರಾಜಕೀಯ ಸಾಧ್ಯತೆಗಳ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.






