ಮೈಸೂರು: ಬಿಗ್ಬಾಸ್ ಖ್ಯಾತಿಯ ರಜತ್ ಕಿಶನ್(Rajath kishan) ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ರಜತ್ ಕಿಶನ್ ಫೋಟೋಶೂಟ್ ನಡೆಸಿದ್ದಾರೆ. ಕಾರಿನಿಂದ ಕೆಳಗಿಳಿದು ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುತ್ತಾ, ಸಿನೆಮಾದ ಶೈಲಿಯಲ್ಲಿ ಫೋಸ್ ನೀಡಿರುವ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಅದರಲ್ಲೂ ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡದ ಆವರಣದಲ್ಲಿ ಇಂತಹ ವರ್ತನೆ ತೋರಿರುವುದು ಕಾನೂನು ಉಲ್ಲಂಘನೆಯ ಜೊತೆಗೆ, ಮೈಸೂರಿನ ಸಾಂಸ್ಕೃತಿಕ ಗೌರವಕ್ಕೆ ಧಕ್ಕೆ ತಂದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೇವಲ ರೀಲ್ಸ್ ಹಾಗೂ ಪ್ರಚಾರಕ್ಕಾಗಿ ಈ ರೀತಿಯ ವಿಡಿಯೋಗಳನ್ನು ಮಾಡಿರುವುದು ಬೇಜವಾಬ್ದಾರಿ ವರ್ತನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ತಾಣಗಳನ್ನು ಫೋಟೋಶೂಟ್ಗಾಗಿ ಬಳಸುವುದು ತಪ್ಪಲ್ಲ, ಆದರೆ ಅವುಗಳ ಘನತೆಯನ್ನು ಕಾಪಾಡಬೇಕು. ಸೆಲೆಬ್ರಿಟಿಗಳ ವರ್ತನೆ ಯುವಕರ ಮೇಲೆ ಪರಿಣಾಮ ಬೀರುತ್ತದೆ. ಜೈಲಿಗೆ ಹೋಗಿ ಬಂದರೂ ಬುದ್ಧಿ ಬಂದಿಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿರುವುದು ಬೇಜವಾಬ್ದಾರಿತನ ಎನ್ನುವ ಕಮೆಂಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಜತ್ ಕಿಶನ್ ವಿವಾದಗಳಲ್ಲಿ ಸಿಲುಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಿತ್ರೀಕರಣ ಸೆಟ್ನಲ್ಲಿ ಮಾರಕಾಸ್ತ್ರವಾದ ಮಚ್ಚು ಹಿಡಿದು ವಿಡಿಯೋಶೂಟ್ ಮಾಡಿಸಿಕೊಂಡಿದ್ದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜೈಲು ಸೇರಿ, ಬೇಲ್ ಮೇಲೆ ಬಿಡುಗಡೆಯಾಗಿದ್ದ ರಜತ್ ಇದೀಗ ಮತ್ತೊಮ್ಮೆ ವಿವಾದಾತ್ಮಕ ವರ್ತನೆಯ ಮೂಲಕ ಸುದ್ದಿಯಾಗಿದ್ದಾರೆ.






