ಬೆಂಗಳೂರು: ಇತ್ತೀಚೆಗೆ ಆರ್ಎಸ್ಎಸ್ ಕುರಿತು ಶಾಸಕ ಶಿವಲಿಂಗೇಗೌಡ(Shivalinge Gowda) ಅವರು ಹಗುರವಾಗಿ ಮಾತನಾಡಿದ್ದು, ಸಂಘದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಇದೀಗ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್(MP Jaggesh) ಪ್ರತಿಕ್ರಿಯೆ ನೀಡಿದ್ದಾರೆ.

ಆರ್ಎಸ್ಎಸ್(RSS) ಬಗ್ಗೆ ತಪ್ಪು ತಿಳುವಳಿಕೆ ಹೊಂದಿರುವವರು ಒಮ್ಮೆ ಸಂಘಕ್ಕೆ ಭೇಟಿ ನೀಡಬೇಕು ಎಂದು ಜಗ್ಗೇಶ್ ಆಹ್ವಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಕಾಶ್ ಬೆಳವಾಡಿ ಅವರ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಪ್ರಕಾಶ್ ಬೆಳವಾಡಿ ಅವರಿಗೆ ಮೊದಲಿಗೆ ಆರ್ಎಸ್ಎಸ್ ಬಗ್ಗೆ ತಪ್ಪು ಅಭಿಪ್ರಾಯ ಇತ್ತಂತೆ. 10ನೇ ವಯಸ್ಸಿನಲ್ಲಿ ತಾಯಿ ಶಾಖೆಗೆ ಹೋಗುವಂತೆ ಹೇಳಿದರೂ ಅವರು ನಿರಾಕರಿಸಿದ್ದರು. ನಂತರ ಯುವಕರಾಗಿದ್ದಾಗ 15-20 ಆರ್ಎಸ್ಎಸ್ ಕಾರ್ಯಕರ್ತರು ಅವರ ಮನೆಗೆ ಬಂದು ಶಾಖೆಗೆ ಬರಲು ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿ ಶಾಖೆಗೆ ಹೋದ ಬಳಿಕ, ಸಂಘದ ಬಗ್ಗೆ ಇದ್ದ ತಪ್ಪು ಕಲ್ಪನೆ ಬದಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಆರ್ಎಸ್ಎಸ್ನಲ್ಲಿ ಬ್ರಾಹ್ಮಣರು ಮಾತ್ರ ಇರುತ್ತಾರೆ ಎಂಬುದು ತಪ್ಪು, ಎಲ್ಲ ಸಮುದಾಯದ ಜನರೂ ಇದ್ದಾರೆ ಮತ್ತು ಸಾಕಷ್ಟು ಜ್ಞಾನಿಗಳು ಇದ್ದಾರೆ ಎಂಬುದು ಅರಿವಾಯಿತು ಎಂದು ಪ್ರಕಾಶ್ ಬೆಳವಾಡಿ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಜಗ್ಗೇಶ್, ಇತ್ತೀಚಿಗೆ ಒಬ್ಬ ದಡ್ಡ ಶಾಸಕ ವಿಧಾನಸಭೆಯಲ್ಲಿ ಹಾಗು ಒಬ್ಬ ಅಜ್ಞಾನಿ ಶಾಸಕ ವಿಧಾನಪರಿಷತ್ನಲ್ಲಿ ಆರ್ಎಸ್ಎಸ್ ಬಗ್ಗೆ ಬಗ್ಗೆ ಲಘುವಾಗಿ ಮಾತಾಡಿದರು..ಸಂಘದ ಬಗ್ಗೆ ಹೀಗೆ ಅರಿವಿರದ ಅನೇಕರು ಇದ್ದಾರೆ. ಜೊತೆಗೆ ಕಲಾವಿದ ಪ್ರಕಾಶ್ ರಾಜ್ ಇವರಂತೆ. ಸಂಘಕ್ಕೆ ಒಮ್ಮೆ ಭೇಟಿಕೊಡಿ ಮನಸ್ಥಿತಿ ಬದಲಾಗಿ ಸಂಘದ ದೇಶ ಚಿಂತನೆ ಅರಿವಾಗುತ್ತೆ ಎಂದು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.







