ಪಟ್ನಾ, ಏ.10:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಹಾಗಾಗಿ ಬಂಧಿತರಲ್ಲಿ ಪ್ರಮುಖನಾದ ಅಮನ್ ತಿವಾರಿ ಅಮೆರಿಕದ ಗುಪ್ತಚರ ಸಂಸ್ಥೆ CIA ಗೆ ಇಮೇಲ್ ಕಳುಹಿಸಿ, ಮೋದಿ ಅವರನ್ನು ಹತ್ಯೆ ಮಾಡುವ ಪ್ರಸ್ತಾಪ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕೃತ್ಯಕ್ಕೆ ಬದಲಾಗಿ ದೊಡ್ಡ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದು, ಯೋಜನೆ ಪೂರ್ಣಗೊಳಿಸಲು 22 ದಿನಗಳ ಅವಧಿಯನ್ನು ಕೇಳಿಕೊಂಡಿದ್ದನೆಂಬ ಮಾಹಿತಿ ಲಭ್ಯವಾಗಿದೆ.
ಈ ಇಮೇಲ್ ಕುರಿತು ಸಿಐಎ ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಮಾಹಿತಿ ನೀಡಿದ್ದು, ಸಂಬಂಧಿತ ಐಪಿ ವಿಳಾಸವನ್ನೂ ಹಂಚಿಕೊಂಡಿದೆ. ಈ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಿಹಾರದ ಬಕ್ಸರ್ ಜಿಲ್ಲೆಯ ಸಿಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮನ್ ತಿವಾರಿಯನ್ನು ಬಂಧಿಸಿದರು. ನಂತರ ಅವನ ವಿಚಾರಣೆ ಆಧರಿಸಿ ಇನ್ನಿಬ್ಬರು ಸಹಚರರನ್ನೂ ಬಂಧಿಸಲಾಗಿದೆ.

ಬಂಧಿತರ ಬಳಿಯ ಮೊಬೈಲ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಇತರೆ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಕ್ಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಂ ಆರ್ಯಾ ತಿಳಿಸಿದ್ದಾರೆ.ವಿಚಾರಣೆಯಲ್ಲಿ ಅಮನ್ ತಿವಾರಿಗೆ ಹಿಂದಿನಿಂದಲೂ ಅಪರಾಧ ಹಿನ್ನೆಲೆ ಇರುವುದೂ ಬೆಳಕಿಗೆ ಬಂದಿದೆ. 2022ರಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ನೀಡಿದ ಪ್ರಕರಣದಲ್ಲೂ ಅವನು ಬಂಧಿತನಾಗಿದ್ದ. ಅಂದು ಅಪ್ರಾಪ್ತ ವಯಸ್ಸಿನವನಾಗಿದ್ದರಿಂದ ಕಾನೂನು ಸಡಿಲಿಕೆ ದೊರೆತಿತ್ತು.

ಈ ಸಂಚಿನ ಹಿಂದೆ ಯಾವುದೇ ದೊಡ್ಡ ಜಾಲವಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಸೈಬರ್ ಕೋನದಲ್ಲೂ ತನಿಖೆ ನಡೆಯುತ್ತಿದ್ದು, ಅಂತರರಾಷ್ಟ್ರೀಯ ಸಂಪರ್ಕಗಳ ಕುರಿತೂ ಪರಿಶೀಲನೆ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






