ತುಮಕೂರು: ಕುಣಿಗಲ್ ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಆತ್ಮಹತ್ಯೆ ಶಂಕೆ ಮೂಡಿಸಿದ್ದ ಈ ಪ್ರಕರಣದಲ್ಲಿ ಪ್ರಿಯಾಂಕಾ ಪ್ರಿಯಕರನ ಜೊತೆ ಇರುವುದಾಗಿ ಪತ್ತೆಯಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ಪ್ರಿಯಾಂಕಾ ಮದುವೆ ನಿಮಿತ್ತ ಹಾಸನ ಜಿಲ್ಲೆಯ ಬೇಲೂರಿಗೆ ಬಂದಿದ್ದರು. ಮದುವೆ ಮುಗಿಸಿಕೊಂಡು ತಾಯಿ ಮನೆಯಲ್ಲಿದ್ದ ಬಳಿಕ ವಾಪಸ್ ಊರಿಗೆ ಹೊರಟಿದ್ದರು. ಆದರೆ ನಂತರ ಆಕೆ ಕಾಣೆಯಾಗಿದ್ದಳು.
ಇದನ್ನೂ ಓದಿ: Byrati Basavaraj: ಬಿಕ್ಲು ಶಿವ ಕೊ** ಕೇಸ್:ಶಾಸಕ ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ
ಹಾಸನದ ಕಲ್ಕೆರೆ ಬಳಿ ಆಧಾರ್ ಕಾರ್ಡ್, ಚಪ್ಪಲಿ, ವ್ಯಾನಿಟಿ ಬ್ಯಾಗ್ ಹಾಗೂ ಒಳಉಡುಪು ಪತ್ತೆಯಾಗಿದ್ದರಿಂದ ಆತ್ಮಹತ್ಯೆ ಅಥವಾ ಕೊಲೆ ಶಂಕೆ ವ್ಯಕ್ತವಾಗಿತ್ತು. ಅಗ್ನಿಶಾಮಕ ದಳ ಕೆರೆಯಲ್ಲಿ ಶೋಧ ಕಾರ್ಯ ನಡೆಸಿತ್ತು. ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು.

ತನಿಖೆ ವೇಳೆ ಪ್ರಿಯಾಂಕಾ ಬೇರೆ ಸಿಮ್ ಬಳಸಿ ಪ್ರಿಯಕರ ಡೇವಿಡ್ ಜೊತೆ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ. ಒಂದೇ ಮೊಬೈಲ್ನಲ್ಲಿ ಎರಡು ಸಿಮ್ ಬಳಸುತ್ತಿದ್ದ ಮಾಹಿತಿ ಸಿಕ್ಕ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬೇಲೂರಿನಿಂದ ಬೈಕ್ನಲ್ಲಿ ಹೊರಟ ಪ್ರಿಯಾಂಕಾ ದಾರಿ ಮಧ್ಯೆ ಬಟ್ಟೆ ಬದಲಾಯಿಸಿ, ಹಳೆಯ ಬಟ್ಟೆಗಳನ್ನು ಕೆರೆ ಬಳಿ ಬಿಸಾಡಿದ್ದಳು. ಬಳಿಕ ಪ್ರಿಯಕರ ಡೇವಿಡ್ ಜೊತೆ ಕುಣಿಗಲ್ಗೆ ತೆರಳಿದ್ದಳು ಎನ್ನಲಾಗಿದೆ.

ಅಷ್ಟಕ್ಕೂ ಆಗಿದ್ದೇನು..?
ಪ್ರಿಯಾಂಕಾ ಹಾಗೂ ಡೇವಿಡ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದ್ದು, ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳೊಂದಿಗೆ ಪ್ರಿಯಾಂಕಾ ಮನೆ ಬಿಟ್ಟು ಹೊರಟಿದ್ದಳು. ಆದರೆ ಪೊಲೀಸ್ ತನಿಖೆಯಲ್ಲಿ ಎಲ್ಲವೂ ಬಯಲಾಗಿದ್ದು, ಫೆಬ್ರವರಿ 14ರ ರಾತ್ರಿ ಕುಣಿಗಲ್ನಲ್ಲಿ ಈ ಜೋಡಿ ಪತ್ತೆಯಾಗಿದೆ. ಆತ್ಮಹತ್ಯೆ, ಕೊಲೆ ಎಂಬ ಅನುಮಾನಗಳೆಲ್ಲ ತಪ್ಪೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.






