ಸಂಸತ್ ಭವನದಲ್ಲಿ ಅಧಿವೇಶನ ನಡೆಯುವಾಗ ನಡೆದ ಕಲರ್ ಬಾಂಬ್ ಸ್ಫೋಟ ಪ್ರಕರಣಕ್ಕೆ 8 ದಿನಗಳಾಗಿವೆ. ಒಂದು ಕಡೆ ಆರೋಪಿಗಳ ವಿಚಾರಣೆ ನಡೀತಿದೆ. ಎನ್ಐಎ, ಐಬಿ, ದೆಹಲಿ ವಿಶೇಷ ಪೊಲೀಸರು ಕರ್ನಾಟಕ ಸೇರಿದಂತೆ ಸಂಬಂಧ ಪಟ್ಟ ಎಲ್ಲಾ ಕಡೆಯಲ್ಲೂ ತನಿಖೆ ಕೈಗೊಂಡಿದ್ದಾರೆ. ಆದರೆ ಸಂಸತ್ ಅಧಿವೇಶನದಲ್ಲಿ ಆಗಿರುವ ಭದ್ರತಾ ಲೋಪದ ಬಗ್ಎ ಪ್ರಧಾನಿ ನರೇಂದ್ರ ಮೋದಿ ಹಾಗು ಗೃಹ ಸಚಿವ ಅಮಿತ್ ಷಾ ಉತ್ತರ ಕೊಡಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಸಾಕಷ್ಟು ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ 143 ಸಂಸದರನ್ನು ಅಮಾನತು ಮಾಡಿರುವ ಆಡಳಿತ ಪಕ್ಷ ಬಿಜೆಪಿ ನೇತೃತ್ವದ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿದೆ.
ಸ್ಪೀಕರ್ ಪಕ್ಷಪಾತ ಮಾಡುತ್ತಿರುವುದು ನ್ಯಾಯವೇ..?
ಇಲ್ಲಿವರೆಗೂ 143 ಸಂಸದರನ್ನ ಅಮಾನತು ಮಾಡಿ ಲೋಕಸಭಾ ಸ್ಪೀಕರ್ ಹಾಗು ರಾಜ್ಯಸಭಾ ಸಭಾಧ್ಯಕ್ಷರು ಆದೇಶ ಮಾಡಿದ್ದಾರೆ. ದೇಶದ ಉನ್ನತ ಮಟ್ಟದ ಕಾನೂನು ರೂಪಿಸುವ ಸಂಸತ್ನಲ್ಲಿ ಆಗಿರುವ ಕಾನೂನು ಲೋಪವನ್ನು ಪ್ರರ್ಶನೆ ಮಾಡುವುದೇ ತಪ್ಪಾ..? ಎಂದು ಸಾಮಾನ್ಯ ಜನರೂ ಪ್ರಶ್ನೆ ಕೇಳುವಂತಾಗಿದೆ. ಸ್ಪೀಕರ್ ಹುದ್ದೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಸದನದ ಆಸ್ತಿಯಾಗುತ್ತಾರೆ. ಯಾವುದೇ ಪಕ್ಷಕ್ಕೆ ಸೀಮಿತವಾಗಿ ಇರುವುದಿಲ್ಲ. ಆದರೂ ಲೋಕಸಭಾ ಸ್ಪೀಕರ್ ಹಾಗು ರಾಜ್ಯಸಭಾಧ್ಯಕ್ಷರು ತೆಗೆದುಕೊಳ್ಳುತ್ತಿರುವ ನಿರ್ಧಾರ ಇಡೀ ದೇಶದ ಜನರನ್ನು ಅಚ್ಚರಿಗೆ ಗುರಿ ಮಾಡಿದೆ. ಬಿಜೆಪಿಯನ್ನು ಬೆಂಬಲಿಸುವ ಕಾರ್ಯಕರ್ತರು, ಸಂಸದರನ್ನು ಅಮಾನತು ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಬಹುದು. ಆದರೆ ಮಾತನಾಡುವುದಕ್ಕೇ ಇರುವ ಸಂಸತ್ನಲ್ಲಿ ಮಾತನಾಡದಂತೆ ಹೊರಗಿಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನಬಹುದು.
‘ದಲಿತ ಎನ್ನುವ ಕಾರಣಕ್ಕೆ ಮಾತಿಗೆ ಅವಕಾಶ ಕೊಡ್ತಿಲ್ಲ’
ದಲಿತರನ್ನು ದೇವಸ್ಥಾನದ ಒಳಗೆ ಹೋಗಲು ಅವಕಾಶ ಕೊಡಲಿಲ್ಲ ಎಂದರೆ ಕಾನೂನು ತನ್ನ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತದೆ. ಆದರೆ ಸದನದಲ್ಲಿ ದಲಿತರಿಗೆ ಅನ್ಯಾಯವಾದರೂ ಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ. ಹೀಗಾಗಿ ನ್ಯಾಯ ಸಿಗದಂತಾಗಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜು ಖರ್ಗೆ, ಸದನದೊಳಗೆ ಸಂಸದರಿಗೆ ಭದ್ರತೆ ಒದಗಿಸುವುದು ಸಭಾಪತಿ ಅವರ ಕೆಲಸ. ಆದರೆ ದಲಿತ ಎಂಬ ಕಾರಣಕ್ಕೆ ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ನಾವು ಪ್ರಶ್ನೆ ಕೇಳಲು ಹೋದರೆ, ಇಡೀ ಆಡಳಿತ ಪಕ್ಷ ಎದ್ದು ನಿಂತು ಘೋಷಣೆ ಕೂಗುತ್ತದೆ. ಇವರು ಪ್ರಜಾಪ್ರಭುತ್ವವನ್ನು ಗೇಲಿ ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಸಂಸತ್ ಭವನದ ಎದುರು ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಸೋನಿಯಾಗಾಂಧಿ, ರಾಹುಲ್ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ದಿಗ್ಗಜರು ಪ್ರತಿಭಟನೆ ನಡೆಸುತ್ತಿದ್ದಾರೆ.
ಉಪರಾಷ್ಟ್ರಪತಿ ಅಣಕಿಸಿದ್ದು ಕಂಡವರಿಗೆ ಭದ್ರತೆ ಕಾಣಲಿಲ್ಲವೇ..?
ಕಾಂಗ್ರೆಸ್ ಪ್ರತಿಭಟನೆ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಮಿಮಿಕ್ರಿ ಮಾಡಿ ಅಣಕಿಸಿದ್ದರು. ಅದನ್ನ ರಾಹುಲ್ಗಾಂಧಿ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ರಾಜ್ಯಸಭೆಯಲ್ಲಿ ಅದನ್ನೇ ದೊಡ್ಡ ವಿಚಾರವನ್ನಾಗಿ ಚರ್ಚೆ ಮಾಡಲಾಯ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಅವಮಾನಿಸಿದ್ರು. ಈಗ ಉಪರಾಷ್ಟ್ರಪತಿಯನ್ನೂ ಅವಮಾನಿಸಿದ್ದಾರೆ ಎಂದಿದ್ದಾರೆ. ಆದರೆ ಉಪರಾಷ್ಟ್ರಪತಿಗಳನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದು ತಪ್ಪೋ ಸರಿಯೋ ಅನ್ನೋದನ್ನು ಸದನದಲ್ಲೇ ತೀರ್ಮಾನ ಮಾಡಬಹುದು. ಅಥವಾ ಒಂದು ವೇಳೆ ಅವಮಾನ ಆಗಿದೆ ಎಂದಾದರೆ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆಯನ್ನೂ ಹೂಡಬಹುದು. ಆದರೆ ಸಂಸತ್ನಲ್ಲಿ ಆಗಿರುವ ಲೋಪದ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಅಲ್ಲವೇ..? ಸಂಸದರನ್ನು ಅಮಾನತು ಮಾಡಿ ವಿರೋಧ ಪಕ್ಷವೇ ಇಲ್ಲದೆ ಸದನ ಮಾಡುವುದು ಪಕ್ಷಪಾತ ಎನಿಸುವುದಿಲ್ಲವೇ..?
ಕೃಷ್ಣಮಣಿ