
ಜನರ ಏಳಿಗೆಗೆ ಜಿಲ್ಲೆಯ ಹೆಸರು ಬದಲಾವಣೆ
ಕನಕಪುರದಂತೆ ಮಾಗಡಿಯೂ ನಮ್ಮ ಕ್ಷೇತ್ರ, ನಿಜವಾದ ಬಂಡೆ ಬಾಲಕೃಷ್ಣ
ಸತ್ತೇಗಾಲದಿಂದ ಮಾಗಡಿಯ 44 ಕೆರೆಗಳಿಗೆ ನೀರು ತುಂಬಿಸುವ ಯೋಜನೆ; 159 ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಮಾಗಡಿ, ಆ.29:
“ಮಾಗಡಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ದಿಗೆ ರೂ.13 ಕೋಟಿ, ರೂ.35 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಇಲಾಖೆಯಿಂದ ಕ್ಷೇತ್ರದ ಅಭಿವೃದ್ದಿಗೆ ರೂ.100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“ಮಾಗಡಿ ಯೋಜನಾ ಪ್ರಾಧಿಕಾರದಿಂದ ಗೌರಮ್ಮ ಕೆರೆ ಅಭಿವೃದ್ಧಿಗೆ ರೂ.20 ಕೋಟಿ ನೀಡಲಾಗಿದೆ. ಇ ಸ್ವತ್ತನ್ನು 1200 ಜನರಿಗೆ ವಿತರಣೆ ಮಾಡಲಾಗಿದ್ದು ಮಿಕ್ಕವರಿಗೂ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಇಂತಹ ನೂರಾರು ಕೆಲಸಗಳನ್ನು ನಿಮಗಾಗಿ ನೀಡಿದ್ದೇವೆ. ಸುಮ್ಮನಹಳ್ಳಿಯಿಂದ ತಾವರೆಕೆರೆವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ. ಇದರಿಂದ ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಲಾಭವಾಗಲಿದೆ” ಎಂದು ತಿಳಿಸಿದರು.
“ಆರೋಗ್ಯ ಕ್ಷೇತ್ರದಿಂದ ರೂ.40 ಕೋಟಿ ವೆಚ್ಚದ ಕಾಮಗಾರಿಗೆ ಆರೋಗ್ಯ ಸಚಿವರು ಮತ್ತು ನೂತನ ಬಸ್ ನಿಲ್ದಾಣ ಹಾಗೂ ಡಿಪೋ ಬಗ್ಗೆ ಸಾರಿಗೆ ಸಚಿವರು ವಾಗ್ದಾನ ನೀಡಿದ್ದಾರೆ. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕೆಲಸಗಳೇ ಸಾಕ್ಷಿ” ಎಂದರು.
ಕನಕಪುರದಂತೆ ಮಾಗಡಿಯೂ ನಮ್ಮ ಕ್ಷೇತ್ರ, ನಿಜವಾದ ಬಂಡೆ ಬಾಲಕೃಷ್ಣ

“ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ ಕೆಂಪು ಬಂಡೆ ನಿಮ್ಮ ಬಾಲಕೃಷ್ಣ. ಇವರು ಗಟ್ಟಿಯಾಗಿ ಬಂಡೆಯಂತೆ ಕುಳಿತುಕೊಂಡು ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಎಲ್ಲೇ ಹೋದರು ಕ್ಷೇತ್ರದ ಬಗ್ಗೆ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಕ್ಷೇತ್ರದ ಜನರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮಾಗಡಿ ಕ್ಷೇತ್ರ ಬಾಲಕೃಷ್ಣ ಅವರದ್ದಲ್ಲ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರ ಸ್ವಂತ ಕ್ಷೇತ್ರವಿದ್ದಂತೆ. ಕನಕಪುರದಲ್ಲಿ ಯಾವ ರೀತಿ ಕೆಲಸ ಮಾಡುತ್ತಾ ಇದ್ದೇವೋ ಅದೇ ರೀತಿ ಇಲ್ಲಿಯೂ ಕೆಲಸ ಮಾಡುತ್ತೇವೆ”ಎಂದರು.
“ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದಿದ್ದರೆ ಬದುಕಿಗೆ ಅವಮಾನ. ದೇವರು ನಮಗೆ ಕೊಟ್ಟ ಅವಕಾಶ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕ ಬಾಲಕೃಷ್ಣ ಅವರು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಈ ಐದು ಬೆರಳು ಸೇರಿ ಕೈ ಗಟ್ಟಿಯಾಯಿತು ಅದೇ ರೀತಿ ನಿಮ್ಮಿಂದ ಬಾಲಕೃಷ್ಣ ಅವರ ಕೈಗೆ ಶಕ್ತಿ ಬಂದಿದೆ. ನೀವು ಕೊಟ್ಟ ಮತಕ್ಕೆ ಅಭಿವೃದ್ದಿ ಮುಖಾಂತರ ಮರಳಿ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ನೀಡಿದ ಮತಕ್ಕಿಂತ ಹೆಚ್ಚಿನ ಮತ ನೀಡಿ 2028 ರಲ್ಲಿ ಗೆಲ್ಲಿಸಬೇಕು. ಇದೇ ನೀವು ನನಗೆ ನೀಡುವ ಸನ್ಮಾನ, ಗದೆ” ಎಂದರು.

ಜನರ ಏಳಿಗೆಗೆ ಜಿಲ್ಲೆಯ ಹೆಸರು ಬದಲಾವಣೆ
“ಜನ ಸಾಮಾನ್ಯರ ಬದುಕು ಏಳಿಗೆಯಾಗಬೇಕು, ಎಲ್ಲರ ಬದುಕಿನಲ್ಲಿ ಹೊಸ ರೂಪ ಕಾಣಬೇಕು, ಎಲ್ಲರ ಆಸ್ತಿ ಮೌಲ್ಯ ಹೆಚ್ಚಳವಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದೇವೆ. ಜನತಾದಳದ ನಾಯಕರು ದೆಹಲಿಗೆ ಹೋಗಿ ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ಬರೆಸಿದ್ದರು. ಕುಮಾರಣ್ಣ ಇದರ ವಿರುದ್ಧ ಬಂದ್ ಮಾಡಿಸಿದರು. ಆದರೂ ಸಹ ಹೆಸರು ಬದಲಾವಣೆಗಾಗಿ ನಾನು ದೊಡ್ಡ ಹೋರಾಟ ಮಾಡಿದೆ” ಎಂದು ತಿಳಿಸಿದರು.
“ಅವರ ಬದುಕನ್ನು ಏಳಿಗೆ ಮಾಡಿಕೊಳ್ಳಬೇಕು ಎಂದು ಇದೇ ಕುಮಾರಣ್ಣ ಹಾಸನದಿಂದ ಬೆಂಗಳೂರಿಗೆ ಬಂದು ಆಸ್ತಿ ತೆಗೆದುಕೊಂಡಿಲ್ಲವೇ? ರಾಮನಗರದಲ್ಲಿ ನೀವು, ನಿಮ್ಮ ತಂದೆಯವರು ರಾಜಕಾರಣ ಮಾಡಿದರೂ ನಾವು ಬೇಸರಿಸಿಕೊಳ್ಳಲಿಲ್ಲ. ನೀವು ನಿಮ್ಮ ಊರಿನಲ್ಲಿ ಆಸ್ತಿ ತೆಗೆದುಕೊಳ್ಳದೇ ಇಲ್ಲೇಕೆ ಆಸ್ತಿ ತೆಗೆದುಕೊಂಡಿರಿ?” ಎಂದು ಪ್ರಶ್ನಿಸಿದರು.
“ಕೆಲವರು ರಾಮನಗರ ಜಿಲ್ಲೆ ಎಂದು ಹೇಳುತ್ತಿದ್ದರು. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಶಾಸಕರಾದ ಹುಲಿಕಟ್ಟೆ ಬಾಲಕೃಷ್ಣ, ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಎಚ್.ಡಿ ಕುಮಾರಸ್ವಾಮಿ ಹೀಗೆ ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಬೆಂಗಳೂರು ಜಿಲ್ಲೆಯವರಾದ ನಮ್ಮ ಅಸ್ಮಿತೆಯನ್ನು ಬಿಟ್ಟು ಕೊಡಲು ಸಾಧ್ಯವೇ?” ಎಂದರು ಪ್ರಶ್ನಿಸಿದರು.
“ನಾನು ಹಿಂದೆ ಬೆಂಗಳೂರಿನ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದೆ. ಹೀಗಿರುವಾಗ ನಮ್ಮ ಇತಿಹಾಸ ಕಳೆದುಕೊಳ್ಳಲು ಸಾಧ್ಯವೇ? ಜಿಲ್ಲೆಯ ಹೆಸರು ಬದಲಾವಣೆಯಿಂದ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದೇವೆ, ಮೆಟ್ರೋ ಸುರಂಗಮಾರ್ಗ, ಡಬಲ್ ಡೆಕ್ಕರ್ ಹೀಗೆ ಹಲವಾರು ಯೋಜನೆ ರೂಪಿಸಿದ್ದೇವೆ” ಎಂದರು.
ಸರ್ವರಿಗೂ ಸಮಬಾಳು, ಸಮಪಾಲು
“ಎಸ್ ಇ ಎಸ್ ಪಿ, ಟಿಎಸ್ ಪಿ ಅಡಿ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ 30 ವರ್ಷಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ವಿಚಾರವನ್ನು ನಾವು ಬಗೆಹರಿಸಿದ್ದೇವೆ. ಇದನ್ನು ಇಡೀ ದೇಶ ಗಮನಿಸುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವವನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಈ ರೀತಿಯ ಒಂದೇ ಒಂದು ಕೆಲಸವನ್ನು ದಳ- ಬಿಜೆಪಿಯವರು ಮಾಡಿದ್ದಾರೆಯೇ” ಎಂದರು.

ರೈತರಿಗೆ ಅನುಕೂಲ ಮಾಡಿಕೊಟ್ಟೆವು
“ಹೈ ವೋಲ್ಟೇಜ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಯೋಜನೆಯ ಅಡಿ ಒಬ್ಬ ಅಥವಾ ಇಬ್ಬರು ರೈತರಿಗೆ ಟ್ರಾನ್ಸ್ ಫಾರ್ಮರ್ಸ್ ಗಳನ್ನು ಹಂಚಿದ ಇತಿಹಾಸ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಇಡೀ ದೇಶದಲ್ಲಿಯೇ ಈ ಯೋಜನೆ ಗಮನ ಸೆಳೆದಿತ್ತು. ಯಾವ ಕ್ಷೇತ್ರದಲ್ಲಿಯೂ ಆಗದ ಕೆಲಸ ಇಲ್ಲಿ ಆಗಿದೆ. ಟ್ರಾನ್ಸ್ ಫಾರ್ಮರ್ ಗಳನ್ನು ದುರಸ್ಥಿಗೊಳಿಸಲು ಈ ಹಿಂದೆ 30-40 ಸಾವಿರ ಲಂಚ ಕೇಳುತ್ತಿದ್ದರು. ಆದರೆ ಈಗ ರೈತರೇ ಇದನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ನಾವು ಪರಿಚಯಿಸಿದೆವು” ಎಂದರು.
“ಕೆಂಪೇಗೌಡರು ಕಟ್ಟಿದ ಕೋಟೆ ಹಾಗೂ ಕೆಂಪಾಪುರದಲ್ಲಿನ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಮಾಡುವ ಕೆಲಸವನ್ನು ನಮ್ಮ ಸರ್ಕಾರ ರೂ.100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಸುಮ್ಮನಹಳ್ಳಿಯಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಭವನ ನಿರ್ಮಾಣ ಮಾಡಲಾಗುತ್ತಿದೆ. ಶಿವಕುಮಾರ ಸ್ವಾಮೀಜಿಯವರು, ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನಿಸಿದ ಪುಣ್ಯಕ್ಷೇತ್ರಗಳು ಈ ಪವಿತ್ರವಾದ ಮಾಗಡಿ ಕ್ಷೇತ್ರದಲ್ಲಿವೆ. ಒಂದು ಕಾಲದಲ್ಲಿ ಈ ಕ್ಷೇತ್ರದ ತಿಪ್ಪಗೊಂಡನಹಳ್ಳಿ ಕೆರೆಯಿಂದ ಇಡೀ ಬೆಂಗಳೂರಿಗೆ ಕುಡಿಯುವ ನೀರು ನೀಡಲಾಗುತ್ತಿತ್ತು” ಎಂದರು.

“ನಾವು ಗ್ಯಾರಂಟಿಗಳನ್ನು ಚುನಾವಣೆಗಾಗಿ ಮಾಡುತ್ತಿದ್ದೇವೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದವು. ಆದರೆ ನಾವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು ಹಾಗೂ ಮಹಿಳೆಯರ ಖಾತೆಗೆ ಹಣ ಹಾಕಿದೆವು. ನಿಮ್ಮ ಮನೆಯ ದೀಪ ಬೆಳಗಿ, ಹೊಟ್ಟೆ ತುಂಬಾ ಅನ್ನ ನೀಡಿದೆವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಅವರ ಸಬಲೀಕರಣಕ್ಕೆ ನಾಂದಿ ಹಾಡಲಾಯಿತು” ಎಂದರು
“ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರುಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಇವರುಗಳು ಅಧಿಕಾರದಲ್ಲಿದ್ದಾಗ ಜನರ ಹೊಟ್ಟೆ ತುಂಬಿಸುವ ಜನಪರವಾದ ಒಂದೇ ಒಂದು ಕೆಲಸ ಮಾಡಿದ್ದರೆ ತಿಳಿಸಲಿ. ಉಳುವವನೆ ಭೂಮಿ ಒಡೆಯ, ಪಿಂಚಣಿ, ಆಶಾ, ಪಡಿತರ ವ್ಯವಸ್ಥೆ, ಅಂಗನವಾಡಿ ಕಾರ್ಯಕ್ರಮ ಸೇರಿದಂತೆ ನೂರಾರು ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಜಾತಿ ಮಾಡಿದವರಲ್ಲ ನೀತಿ ಮಾಡಿದವರು” ಎಂದರು.








