
ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಮೆಚ್ಚುಗೆಯ ಮಹಾಪೂರ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಸರ್ವಪಕ್ಷದ ನಾಯಕರಿಂದ ಪ್ರಶಂಸೆ
ಬೆಂಗಳೂರು, ಆಗಸ್ಟ್ 19: ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯ ಅಂಗೀಕಾರ ದೊರೆಯಿತು.
ವಿದೇಯಕವನ್ನು ಮಂಡಿಸಿ ಮಾತನಾಡಿದ ಸಚಿವ ಸಂತೋಷ್ ಎಸ್ ಲಾಡ್ ಅವರು ವಿಧೇಯಕದ ಪ್ರಮುಖ ಅಂಶಗಳು, ಮಂಡಳಿ ರಚನೆ, ಸೆಸ್ ಸಂಗ್ರಹ, ಕಾರ್ಮಿಕರಿಗೆ ಸಿಗುವ ಸಾಮಾಜಿಕ ಸೇವಾ ಸೌಲಭ್ಯಗಳು ಮತ್ತಿತರ ಅಂಶಗಳನ್ನು ಸದನದ ಗಮನಕ್ಕೆ ತಂದರು.
ಗಿಗ್ ಎಕಾನಮಿ ಪ್ರವರ್ಧಮಾನಕ್ಕೆ ಬರುತ್ತಿರುವ ಸಂದರ್ಭದಲ್ಲಿ, ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಗಿಗ್ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳಿದ್ದು, ಅದೇ ರೀತಿಯಲ್ಲಿ ಗಿಗ್ ಕಾರ್ಮಿಕರ ಆರೋಗ್ಯ, ಜೀವನ ಭದ್ರತೆ, ಕೆಲಸದ ಸಮಗ್ರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆ ಸಿದ್ಧವಾಗಿದೆ ಎಂದರು.

ಮಸೂದೆಗೆ ಸಂಬಂಧಿಸಿದಂತೆ ಸಾಕಷ್ಟು ಸಭೆ, ಚರ್ಚೆಗಳನ್ನು ಮಾಡಲಾಗಿದೆ. ಪಾಲುದಾರರು, ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಈ ಹಿಂದೆ ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲಾಗಿತ್ತು, ಇದೀಗ ಇದನ್ನು ವಿಧೇಯಕವಾಗಿ ಮಂಡಿಸಲಾಗಿದೆ ಎಂದು ವಿವರಿಸಿದರು.
ವಿಧೇಯಕದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು, ಇದೊಂದು ಮಹತ್ವಾಕಾಂಕ್ಷಿಯ ಐತಿಹಾಸಿಕ ಮಸೂದೆಯಾಗಿದೆ. ಗಿಗ್ ಕಾರ್ಮಿಕರ ಕಲ್ಯಾಣದ ಬಗ್ಗೆ ಸಚಿವರಿಗಿರುವ ಕಾಳಜಿ ಪ್ರಶಂಸನಾರ್ಹವಾಗಿದ್ದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಶ್ರಮದಿಂದ ಈ ಮಸೂದೆ ಬಂದಿದೆ ಎಂದು ಪಕ್ಷಭೇದ ಮರೆತು ಹೇಳಿದರು.

ವಿಧೇಯಕದ ಕುರಿತು ಎಸ್. ಸುರೇಶ್ ಕುಮಾರ್, ಅರವಿಂದ ಬೆಲ್ಲದ್. ಸಿ ಕೆ ರಾಮಮೂರ್ತಿ, ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಉಮಾನಾಥ್ ಕೋಟ್ಯಾನ್, ಧೀರಜ್ ಮುನಿರಾಜು, ಶಿವಲಿಂಗೇಗೌಡ, ಡಾ. ಎನ್ ಶ್ರೀನಿವಾಸ್, ಸಿ ಎನ್ ಬಾಲಕೃಷ್ಣ, ಚೆನ್ನಬಸಪ್ಪ ಹಾಗೂ ಕೆ ವೈ ನಂಜೇಗೌಡ ಅವರು ಮಾತನಾಡಿದರು.

ಗಿಗ್ ಕಾರ್ಮಿಕರ ಹಿತ ಕಾಪಾಡುವಲ್ಲಿ ಈ ಮಸೂದೆ ಮಹತ್ವದಾಗಿದೆ. ಇಂದು ಪ್ಲಾಟ್ ಫಾರಂ ಆಧಾರಿಗೆ ಎಕಾನಮಿ ಹೊಸ ಸಂಪ್ರದಾಯವಾಗಿದೆ. ಮನೆ ಬಾಗಿಲಿಗೆ ಸೇವೆ ಒದಗಿಸುವ ಕಾರ್ಮಿಕರಿಗೆ ಸರ್ಕಾರ ಜೀವನ ಭದ್ರತೆ ನೀಡುತ್ತಿದೆ. ಅವರ ಹಿತ ಕಾಪಾಡಲು ಸರ್ಕಾರ ಒಳ್ಳೆಯ ಕ್ರಮಕ್ಕೆ ಮುಂದಾಗಿದೆ ಎಂದು ಸುರೇಶ್ ಕುಮಾರ್ ಅವರು ಬಣ್ಣಿಸಿದರು. ಹೊರ ಗುತ್ತಿಗೆ ಕಾರ್ಮಿಕರನ್ನೂ ಇದರಲ್ಲಿ ಸೇರಿಸಬೇಕು ಎಂಬ ಸಲಹೆಯನ್ನೂ ಅವರು ನೀಡಿದರು.
ಬಿಜೆಪಿಯ ಅರವಿಂದ ಬೆಲ್ಲದ್ ಅವರು, ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ರಾಜ್ಯ ಸರ್ಕಾರ ಮಸೂದೆ ತಂದು ಮೇಲ್ಪಂಕ್ತಿ ಹಾಕಿದೆ. ಒಳ್ಳೆಯ ಕಾನೂನು ಇದಾಗಲಿದೆ ಎಂದರು. ಸಿ ಕೆ ರಾಮಮೂರ್ತಿ ಅವರು, ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರು, ಇದು ಒಳ್ಳೆಯ ಮಸೂದೆ ಎಂದರು. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರ ಬಗ್ಗೆ ಗಮನಸೆಳೆದಿದ್ದನ್ನು ಎನ್ ಎಚ್ ಕೋನರಡ್ಡಿ ಅವರು ಸದನದ ಗಮನಕ್ಕೆ ತಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು. ಇತ್ತೀಚೆಗೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ತೆರೆಯಲು ಮುಂದಾಗಿದ್ದಾರೆ. ಸಚಿವರಿಗೆ ಅಭಿನಂದನೆಗಳು. ಗಿಗ್ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಬಿಲ್ ಇದಾಗಿದೆ. ಮಂಡಳಿ ರಚಿಸಿ ಕಾರ್ಮಿಕರಿಗೆ ಜೀವನ ಭದ್ರತೆ ನೀಡುತ್ತಿದ್ದೀರಿ ಎಂದು ಮತ್ತೊಬ್ಬ ಸದಸ್ಯ ಶಿವಲಿಂಗೇಗೌಡ ಅವರು ಹೇಳಿದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕ್ರಿಯಾಶೀಲ ಸಚಿವರಲ್ಲಿ ಒಬ್ಬರಾದ ಸಂತೋಷ್ ಲಾಡ್ ಅವರು ಪರಿಶ್ರಮದಿಂದ ರೂಪಿತವಾದ ಒಳ್ಳೆಯ ಬಿಲ್ ಇದಾಗಲಿ ಎಂದರು.

ಎಲ್ಲರ ಸಲಹೆ ಪರಿಗಣನೆ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಲಾಡ್ ಅವರು, ಮಸೂದೆ ಸಂಬಂಧ ಎಲ್ಲರ ಸಲಹೆಗಳನ್ನು ಸಮಾಲೋಚಿಸಲಾಗುವುದು. ಭಾಗೀದಾರರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮಸೂದೆಯಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಸೇರಿಸಲು ಸಾಧ್ಯವಿಲ್ಲ. ಆ ಸಂಬಂಧ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೊಸೈಟಿ ರಚಿಸಲಾಗುವುದು ಎಂದ ಸಚಿವರು, ಮಸೂದೆ ಕುರಿತ ಚರ್ಚೆಯಲ್ಲಿ ಬಾಗವಹಿಸಿ ಸಲಹೆ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.