ವೋಟರ್ ಐಡಿ ಹಗರಣ ಪ್ರಜಾಪ್ರಭುತ್ವಕ್ಕೆ ಅಪಮಾನ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ. ಮತದಾನದ ಹಕ್ಕನ್ನು ತರಲು ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆಧುನಿಕ ವ್ಯವಸ್ಥೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು ಮಾರಕವಾಗಿರಬಾರದು. ಇದನ್ನು ಯಾರೇ ಮಾಡಿದರೂ ಇದು ನಾಗರಿಕ ಸಮಾಜ ತಲೆತಗ್ಗಿಸುವ ವ್ಯವಸ್ಥೆ. ಕಳೆದ ಸರ್ಕಾರದ ಅವಧಿಯಲ್ಲೂ ಇದು ನಡೆದಿದೆ ಎನ್ನಲಾಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಶಂಕಿಸಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಗಮನ ಕೊಡಬೇಕು ಬಿಜೆಪಿ, ಕಾಂಗ್ರೆಸ್ ಎಂದು ನಾನು ಹೇಳುವುದಿಲ್ಲ ಯಾರದೇ ಅವಧಿಯಲ್ಲಿ ನಡೆದರೂ ತಪ್ಪು. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಮತದಾನಕ್ಕೆ ಬಾರದೆ ಸೋಂಬೇರಿ ಗಳಾಗಿ ಇರುವವರಿಗೆ ಇದು ಬೆಂಬಲ ನೀಡಿದಂತೆ ಆಗುತ್ತದೆ. ಪ್ರಜಾಪ್ರಭುತ್ವದ ಮತದಾನದ ಹಕ್ಕು ಸಂಪೂರ್ಣ ಸದುಪಯೋಗ ಆಗಬೇಕು. ವೋಟರ್ ಐಡಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಊಹೆಗಳು ಸತ್ಯವೋ? ಸುಳ್ಳೋ? ಗೊತ್ತಿಲ್ಲ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿದ್ದಾರೆ.
ದೇಶದ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಒಂದು ವ್ಯವಸ್ಥೆಯಿದೆ. ರಾಷ್ಟ್ರ, ರಾಜ್ಯ ಅಧ್ಯಕ್ಷರು, ಸಿಎಂ, ವಿಪಕ್ಷ ನಾಯಕ ಎಲ್ಲರೂ ಇರ್ತಾರೆ. ಅವರೆಲ್ಲರೂ ಅಧಿಕಾರದ ಸ್ತರದಲ್ಲಿ ಅವರವರ ಇತಿಮಿತಿಗಳಲ್ಲಿ ನಡೆದುಕೊಳ್ಳಬೇಕು. ರಾಜ್ಯದ ಕಾಂಗ್ರೆಸ್ ನಲ್ಲಿ ನಡೀತಾ ಇರೋ ಅಂಶಗಳೇ ಬೇರೆ. ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಹೀಗೆ ಘೋಷಣೆ ಮಾಡಿದ್ದು ತಪ್ಪು ಎಂದು ಡಿಕೆ ಶಿವಕುಮಾರ್ ನೇರವಾಗಿ ಹೇಳಿದ್ದಾರೆ. ಪಕ್ಷದ ಚುನಾವಣಾ ಸಮಿತಿ ಆಯ್ಕೆ ಮಾಡಿ ನಂತರ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಹೇಗೆ ಪಟ್ಟಿ ಬಿಡುಗಡೆ ಮಾಡ್ತಾರೆ..? ಇದಕ್ಕೆ ಎಂ.ಬಿ.ಪಾಟೀಲ್ ರಂತ ನಾಯಕರು ಸಪೋರ್ಟ್ ಮಾಡ್ತಾರೆ. ಕಾರ್ಯಕರ್ತರಿಗೆ ಸ್ಪೂರ್ತಿ ಬರಲಿ ಎಂದು ಹೆಸರು ಅನೌನ್ಸ್ ಮಾಡ್ತಾರಂತೆ. ಬೇರೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸ್ಫೂರ್ತಿ ಬೇಡ್ವಾ…? ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲೂ ಕೂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ ನಿಮ್ಮ ಬೆಂಬಲಿಗರು ಮಾತ್ರ ಅಭ್ಯರ್ಥಿಗಳಾಗಿ ಘೋಷಣೆ ಆಗಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯರನು ಪ್ರಶ್ನಿಸಿದ್ದಾರೆ.
ಇಲ್ಲವಾದ್ರೇ, ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳಿಗೂ ನೀತಿ-ನಿಯಮ ಇದೆ. ವಿಪಕ್ಷ ನಾಯಕನಿಗೆ ವಿಶೇಷ ಸ್ಥಾನಮಾನ ಏನಾದರೂ ಕೊಟ್ಟಿದ್ದೀರಾ…? ಎಲ್ಲಾ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡಲಿ.
ಸತೀಶ್ ಜಾರಕಿಹೊಳಿ ಸೇರಿದಂತೆ ಕಾರ್ಯಧ್ಯಕ್ಷ ಹುದ್ದೆ ಹೊಂದಿರುವ ಎಲ್ಲರೂ ಐದು ಹತ್ತು ಸೀಟು ಅನೌನ್ಸ್ ಮಾಡಲಿ. ಅರ್ಜಿ ಹಾಕುವ ಸಂದರ್ಭ ಇನ್ನು ಮುಗಿಯುವ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಒಂದು ರೀತಿಯ ರಾಜಕೀಯ ವ್ಯಭಿಚಾರ. ಬಿಜೆಪಿ ಪಕ್ಷ ಕಾಂಗ್ರೆಸ್ ವ್ಯವಸ್ಥೆಯಿಂದ ಬೆಳೆದಿಲ್ಲ. ರಾಷ್ಟ್ರೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಬೆಳೆದಿದೆ. ಸಿದ್ದರಾಮಯ್ಯ ಶುರು ಮಾಡುತ್ತಿದ್ದಂತೆ ಅವರ ಬಾಲಂಗೋಚಿಗಳು ಎಲ್ಲಾ ಶುರು ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.






