ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಅವರು ವಿಧಾನ ಪರಿಷತ್ ಗೆ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಡಿಕೆಶಿ ಎಷ್ಟೇ ಅಡ್ಡ ಬಂದರೂ ಧರ್ಮವನ್ನು ವಿರೋಧ ಮಾಡುವ ವ್ಯಕ್ತಿಗೆ ಬೆಂಬಲ ಕೊಡಲ್ಲ. ಹಾಗಾಗಿ ವಿಧಾನಸಭೆಯಲ್ಲಿ ಪೂರ್ಣ ಬಹುಮತ ಇದ್ದು, ವಿಧಾನ ಪರಿಷತ್ ನಲ್ಲಿ ಸಹ ಪೂರ್ಣ ಬಹುಮತ ಸಾಧಿಸುವ ವಿಶ್ವಾಸ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮತಾಂತರ ನಿಷೇಧ ಕಾಯ್ದೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಗ್ಧ ವೀರಶೈವ ಬಂಧುಗಳಿಗೆ ಆಸೆ, ಆಮಿಷ ತೋರಿಸಿ ಮತಾಂತರ ಮಾಡಿದ್ದಾರೆ. ಅವರನ್ನು ಮತ್ತೆ ವಾಪಸ್ ನಮ್ಮ ಧರ್ಮಕ್ಕೆ ತರುತ್ತೇವೆ ಎಂದು ಡಿಕೆಶಿ ಅವರಿಗೆ ನೇರವಾಗಿ ವೀರಶೈವ ಸಮಾಜದ ಅನೇಕ ಪೂಜ್ಯರು ಹೇಳಿದ್ದಾರೆ ಎಂದರು.
ಲವ್ ಜಿಹಾದ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬೇರೆ ಕಡೆ ನಮ್ಮ ಸಹೋದರಿಯರು ಬಲಿಯಾಗಿರುವುದು ಡಿಕೆಶಿ ಅವರಿಗೆ ಗೊತ್ತಿಲ್ಲವಾ? ಗೊತ್ತಿಲ್ಲ ಅಂಥ ಹೇಳಿದರೆ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಎಲ್ಲೆಲ್ಲಿ ಮತಾಂತರ ಮಾಡಿ ಹಿಂದು ಹೆಣ್ಣು ಮಕ್ಕಳನ್ನು ಮೋಸ ಮಾಡ್ತಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ತಿರುಗೇಟು ನೀಡಿದರು.
ಒಂದೇ ಒಂದು ಧರ್ಮವನ್ನು ಉದ್ದೇಶಿಸಿ ಮತಾಂತರ ಕಾಯ್ದೆ ತರುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಹೌದು ಒಂದು ಧರ್ಮವನ್ನು ಉದ್ದೇಶಿಸಿಯೇ ಈ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು. ನಾವು ಈ ಕಾಯ್ದೆಯನ್ನು ವಿಧಾನಸಭೆಯಲ್ಲಿ ಪಾಸ್ ಮಾಡ್ತೀವಿ ಎಂದರು.
ಸ್ವತಃ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯೇ ಮತಾಂತರ ಆಗಿದ್ದಾರೆ. ಮತಾಂತರ ನಿಷೇಧವನ್ನು ಏಕೆ ವಿರೋಧ ಮಾಡ್ತೀರಾ ಎನ್ನುವುದನ್ನು ಡಿಕೆಶಿ ಸ್ಪಷ್ಟವಾಗಿ ತಿಳಿಸಬೇಕು. ಎಲ್ಲಾ ಹಿಂದುಗಳು ಮತಾಂತರ ಆಗಬೇಕಾ ಹೇಳಿ ನೋಡೋಣ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಜನರಿಗೆ ಉಪಯೋಗವಾಗುವ ಕಾಯ್ದೆಗಳನ್ನು ತರಬೇಕಾದರೆ ಪರಿಷತ್ ನಲ್ಲೂ ಬಹುಮತ ಬೇಕು. ಹಾಗಾಗಿ ದೇಶ ಭಕ್ತರ ತಂಡ ಇಂದು ಪರಿಷತ್ ಗೆ ಪ್ರವೇಶವಾಗುತ್ತಿದೆ. ನಾವು 16 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.