ಬೆಂಗಳೂರಿನ ಜೆಟ್ಲಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಇತ್ತೀಚಿಗಷ್ಟೇ ಪ್ರಕರಣ ದಾಖಲಾಗಿತ್ತು. ಇದೀಗ ಜೆಟ್ಲಾಗ್ ಪಬ್ ಮಾಲೀಕರು ಆಗಿದ್ದ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟ ದರ್ಶನ್ ಅಭಿನಯದ ಕಾಟೇರ ಚಿತ್ರದ ಸಕ್ಸಸ್ ಪಾರ್ಟಿ ಮಾಡಿದರು ಅನ್ನೋ ಕಾರಣಕ್ಕೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಡಾಲಿ ಧನಂಜಯ್ ಸೇರಿ 8 ಜನ ಜನರನ್ನು ವಿಚಾರಣೆ ಮಾಡಲಾಗಿತ್ತು

ಜೆಟ್ಲಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಹಣಕಾಸು ವ್ಯವಹಾರದಲ್ಲಿ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ, ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಕುಟುಂಬಸ್ಥರು ಮೊದಲಿಗೆ ಪೊಲೀಸರ ಬಳಿ ಹೃದಯಾಘಾತ ಎಂದು ಹೇಳಿರುವುದು ಅನುಮಾನಕ್ಕೂ ಕಾರಣವಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡ್ತಿದ್ದಾರೆ.
ಅಪ್ಪು ಪಪ್ಪು, ರಾಮ್ ಲೀಲಾ, ಸ್ನೇಹಿತರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಸೌಂದರ್ಯ ಜಗದೀಶ್, ನಿರ್ಮಾಪಕ ಹಾಗು ಬಿಲ್ಡರ್ ಆಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೊತೆಗೆ ಹಲವು ಸಿನಿಮಾಗಳನ್ನ ವಿತರಣೆ ಕೂಡ ಮಾಡಿದ್ರು. ನಿನ್ನೆ ರಾತ್ರಿ ಎಲ್ಲರೂ ಮಲಗಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಮುಂಜಾನೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.
ಸೌಂದರ್ಯ ಜಗದೀಶ್ ಕುಟುಂಬಸ್ಥರು ಯಾರೊಬ್ಬರೂ ಪೊಲೀಸರಿಗೆ ಸಹಕಾರ ನೀಡದೆ ಇರುವುದು ಗುಮಾನಿಗೂ ಕಾರಣವಾಗಿದೆ. ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಹಂಚಿಕೊಳ್ತಿಲ್ಲ ಎನ್ನಲಾಗಿದೆ. ಮಹಾಲಕ್ಷ್ಮಿ ಲೇ ಔಟ್ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮೆಮೋ ನೀಡಿದ್ದು, ಅದರಲ್ಲಿ ಆತ್ಮಹತ್ಯೆ ಅನ್ನೋದನ್ನು ಉಲ್ಲೇಖ ಮಾಡಿದ್ದಾರೆ. ಆದರೆ ಸಾವಿಗೆ ಕಾರಣ ಏನು ಅನ್ನೋದನ್ನು ಪೊಲೀಸರು ತನಿಖೆಯಲ್ಲಿ ತಿಳಿಯಬೇಕಿದೆ.