ಅನೇಕ ಮಸೀದಿಗಳಲ್ಲಿ ಮಂದಿರವಿದೆ ಅದನ್ನು ಪರಿಶೀಲಿಸಿದರೆ ಸತ್ಯ ತಿಳಿದುಬರುತ್ತದೆ ಎಂದು ಕೆಲ ಆಯ್ದ ಮಸೀದಿಗಳನ್ನುಲ್ಲೇಖಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈತರ ಬೆಳವಣಿಗೆ ಈಗ ರಾಜ್ಯದಲ್ಲೂ ಎದುರಾಗಿದ್ದು, ಶ್ರೀರಾಂಗಪಟ್ಟಣದ ಮಸೀದಿಯಲ್ಲಿ ಮಂದಿರವಿದೆ ಎಂಬ ವಿವಾದ ಶುರುವಾಗಿದೆ. ಈ ವಿವಾದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಹೇಳಿಕೆ ನೀಡಿದ್ದು, ಜಾಮಿಯಾ ಮಸೀದಿ ಜಾಗದಲ್ಲಿ ದೇವಸ್ಥಾನ ಇದ್ದದ್ದು ನಿಜ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಇಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಜಾಗದಲ್ಲಿ ಮಂದಿರ ಇದ್ದದ್ದು ನಿಜ. ಇತಿಹಾಸದಲ್ಲಿ ಓದಿ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹಲವಡೆಯಿಂದ ಯಾತ್ರೆ ಆರಂಭಿಸಲಾಗಿದೆ. ಹೋರಾಟ, ರೋಷಾವೇಶ, ಯಾತ್ರೆ ಮಾಡಲಾಗುತ್ತಿದೆ. ಆದರೆ ಇದು ಕೂತು ಬಗೆಹರಿಸಿಕೊಳ್ಳಬೇಕಾದ ವಿಚಾರವಾಗಿದೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2021/12/HDKumaraswamy-ians-1024x768.jpg)
ರಾಜ್ಯದ ವಿವಿಧೆಡೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹಿಂದೂ ಕಾರ್ಯಕರ್ತರು ಯಾತ್ರೆ ಆರಂಭಿಸಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕರ್ನಾಟಕದ ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.