ಕಾಂಗ್ರೆಸ್ ನೇತೃತ್ವದಲ್ಲಿ I.N.D.I.A ಒಕ್ಕೂಟದ ಸಭೆ ನಡೆದಿದ್ದು, 28 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು. ಆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡಲು ಸಮರ್ಥ ನಾಯಕತ್ವ ಅವಶ್ಯಕತೆ ಇದೆ. ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ಅನುಕೂಲ ಅನ್ನೋದು ಬಹುತೇಕ ನಾಯಕರ ಪ್ರಸ್ತಾಪವಾಗಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಹಿರಂಗವಾಗಿ ಘೋಷಣೆ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಪ್ರಧಾನಿ ನರೇಂದ್ರ ಸರ್ಕಾರವನ್ನು ಸೂಕ್ತ ರೀತಿಯಲ್ಲಿ ಎದುರಿಸಿದ್ದಾರೆ ಎನ್ನುವುದು ಈ ಲೆಕ್ಕಾಚಾರದ ಹಿಂದಿನ ಗುಟ್ಟು.

ಕರ್ನಾಟಕದ ಖರ್ಗೆ ಮುಂದಿನ ಬಾರಿ ಪ್ರಧಾನಿ ಆಗ್ತಾರಾ..?
I.N.D.I.A ಒಕ್ಕೂಟದ ಸಭೆಯಲ್ಲಿ ಸೋನಿಯಾಗಾಂಧಿ, ರಾಹುಲ್ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಶಿವಸೇನೆಯ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ಕುಮಾರ್, ದೆಹಲಿ ಸಿಎಂ ಕೇಜ್ರಿವಾಲ್, ಜಮ್ಮು ಕಾಶ್ಮೀರದ ಮುಫ್ತಿ ಮಹಮ್ಮದ್ ಸೈಯ್ಯದ್ ಸೇರಿ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಒಕ್ಕೂಟದ ಸಭೆ ಆರಂಭದಲ್ಲೇ ಪ್ರಧಾನಿ ಅಭ್ಯರ್ಥಿಗೆ ಯಾರು ಸೂಕ್ತ ಅಂತ ಧನಿ ಎತ್ತಿದಾಗ, ಮಮತಾ ಬ್ಯಾನರ್ಜಿ ಮೊದಲು ಪ್ರಸ್ತಾಪಿಸಿದ ಹೆಸರು ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಹೆಸರು ಪ್ರಸ್ತಾಪ ಆಗ್ತಿದ್ದ ಹಾಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಒಪ್ಪಿಗೆ ಸೂಚಿಸಿದ್ರು.

ಮೊದಲು ಚುನಾವಣಾ ಫಲಿತಾಂಶ ಬರಲಿ – ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಆಗುತ್ತಿದ್ದ ಹಾಗೆ ಮೊದಲು ಚುನಾವಣಾ ಫಲಿತಾಂಶಕ್ಕಾಗಿ ಕೆಲಸ ಮಾಡೋಣ. ಮೊದಲು 2024ರ ಲೋಕಸಭೆ ಚುನಾವಣೆ ಗೆಲ್ಲೋಣ. ಚುನಾವಣಾ ಫಲಿತಾಂಶಗಳನ್ನು ನೋಡೋಣ, ಆಮೇಲೆ ಪ್ರಧಾನಿ ಯಾರಾಗಬೇಕು ಎಂದು ನಿರ್ಧರಿಸೋಣ ಎಂದಿದ್ದಾರೆ. ಆದ್ರೆ INDIA ಒಕ್ಕೂಟದಿಂದ ಮಲ್ಲಿಕಾರ್ಜು ಖರ್ಗೆ ಪ್ರಧಾನಿ ಅಭ್ಯರ್ಥಿ ಆದರೆ ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲದೆ ಇಡೀ I.N.D.I.A ರಾಜಕೀಯ ಒಕ್ಕೂಟಕ್ಕೆ ಲಾಭ ಆಗುತ್ತೆ ಅನ್ನೋ ಲೆಕ್ಕಾಚಾರ ಇದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎನ್ನುವ ಕುದುರೆಯನ್ನು ಕಟ್ಟಿ ಹಾಕಲು ರಾಹುಲ್ ಗಾಂಧಿಯನ್ನು ಮುಂದೆ ಬಿಡುವ ಬದಲು ಮಲ್ಲಿಕಾರ್ಜುನ ಖರ್ಗೆಯನ್ನು ಮುಂದೆ ಬಿಟ್ಟರೆ ಅನುಕೂಲ ಆಗಲಿದೆ. ತೂಕದ ಮಾತುಗಳು, ಅಂಕಿ ಅಂಶಗಳನ್ನು ಹಿಡಿದು ಖರ್ಗೆ ಮಾತನಾಡುತ್ತಾರೆ ಎನ್ನುವುದು ಎಲ್ಲರ ಅಭಿಮತ.

ಖರ್ಗೆ ಆಯ್ಕೆ.. ಕಾಂಗ್ರೆಸ್ಗೆ ಇರುವ ಲಾಭಗಳು ಏನೇನು..?
ಗಾಂಧಿ ಕುಟುಂಬದ ರಾಜಕೀಯ ಅನ್ನೋ ಟೀಕೆಯಿಂದ ಕಾಂಗ್ರೆಸ್ ಹೊರಬರಲಿದೆ. ಎಸ್ಸಿ-ಎಸ್ಟಿ, ಓಬಿಸಿ ಮತಗಳನ್ನ ಸೆಳೆಯುವುದಕ್ಕೆ ಅನುಕೂಲ ಆಗಲಿದೆ. ರಾಹುಲ್ ಗಾಂಧಿಯನ್ನು ಮುಖ್ಯ ಫೇಸ್ ಆಗಿ ನಿಲ್ಲಿಸಿದರೂ ಕೆಲವೊಮ್ಮೆ ಬಹಳ ಶಿಸ್ತಿನಿಂದ ಮಾತನಾಡುತ್ತಾರೆ. ಮತ್ತೊಮ್ಮೆ ಶಿಸ್ತು ಮರೆತು ಮಾತನಾಡುತ್ತಾರೆ ಎನ್ನುವುದು ಒಕ್ಕೂಟದ ಇತರೆ ನಾಯಕರಿಗೆ ಇರುವ ಭಯ. ಕಾಂಗ್ರೆಸ್ ನೇತೃತ್ವದಲ್ಲಿ I.N.D.I.A ಒಕ್ಕೂಟ ರಚನೆ ಆಗಿದ್ದರೂ ದೇಶದಲ್ಲಿ ಮೋದಿಗೆ ಎದುರಾಳಿ ನಾಯಕ ಯಾರು..? ಅನ್ನೋ ಚರ್ಚೆ ಶುರುವಾಗಿದೆ. ರಾಹುಲ್ ಗಾಂಧಿ ಎಂದರೆ ಆಗುವ ಲಾಭಕ್ಕಿಂತ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಿದರೆ ಆಗುವ ಲಾಭವೇ ಹೆಚ್ಚು. ಜನವರಿ ಅಂತ್ಯದಿಂದ ದೇಶಾದ್ಯಂತ ಚುನಾವಣಾ ಪ್ರಚಾರಕ್ಕೆ ನಿರ್ಧಾರ ಮಾಡಿದ್ದು, ಅದಕ್ಕಿಂತಲೂ ಮೊದಲು ಪ್ರಧಾನಿಗೆ ನೇರ ಎದುರಾಳಿ ಯಾರು ಅನ್ನೋ ಸ್ಪಷ್ಟತೆ ಇದ್ದರೆ ಮತದಾರರನ್ನು ಓಲೈಸುವುದು ಸುಲಭ ಅನ್ನೋ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನಲೆಗೆ ಬಂದಿದೆ. ಖರ್ಗೆ ಹೆಸರು ಅಂತಿಮವಾದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಭರ್ಜರಿ ಜಯ ಕಾಣಲಿದ್ದು, ಖರ್ಗೆ ಪ್ರಧಾನಿ ಆಗಲಿ ಅನ್ನೋ ಕಾರಣಕ್ಕಾಗದರೂ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಯಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸೋಲುವ ಕೆಲವು ಕ್ಷೇತ್ರಗಳಲ್ಲೂ ಗೆಲುವಿನ ನಗೆ ನೀರುವ ಸಾಧ್ಯತೆಯಿದೆ.
ಕೃಷ್ಣಮಣಿ






