ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಯುಎಸ್ ಸರ್ಕಾರಿ ಸಂಸ್ಥೆಯು (USCIRF) ಧಾರ್ಮಿಕ ಸ್ವಾತಂತ್ರ್ಯದ ವಿವಚಾರದಲ್ಲಿ ಸತತ ಎರಡನೇ ವರ್ಷವೂ ಭಾರತವನ್ನು ‘ನಿರ್ದಿಷ್ಟ ಜನರ ಬಗ್ಗೆ ಮಾತ್ರ ಕಾಳಜಿ ಇರುವ ದೇಶ’ದ ಪಟ್ಟಿಯಲ್ಲಿ ಹಾಕಿದೆ.
2021 ರ ವಾರ್ಷಿಕ ವರದಿಯನ್ನು ಅನಾವರಣಗೊಳಿಸಿದ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಅಧ್ಯಕ್ಷ ಗೇಲ್ ಮಂಚಿನ್ “ಕಳೆದ ವರ್ಷವು ಎಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವ ಸವಾಲಿನೊಂದಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿಕೊಳ್ಳುವ ಸವಾಲನ್ನೂ ಎದುರಿಸಿತ್ತು” ಎಂದು ಹೇಳಿದ್ದಾರೆ.
USCIRF 14 ದೇಶಗಳನ್ನು “ನಿರ್ದಿಷ್ಟ ಜನರ ಬಗ್ಗೆ ಮಾತ್ರ ಕಾಳಜಿ ಇರುವ ದೇಶಗಳು” ಎಂದು ಹೆಸರಿಸಬೇಕೆಂದು ಶಿಫಾರಸು ಮಾಡಿದೆ. ಏಕೆಂದರೆ ಅವರ ಸರ್ಕಾರಗಳು ‘ವ್ಯವಸ್ಥಿತವಾಗಿ ನಡೆಯುತ್ತಿರುವ ಹಿಂಸಾಚಾರಗಳನ್ನು’ ಪ್ರೋತ್ಸಾಹಿಸುತ್ತವೆ ಅಥವಾ ತಾನೇ ಆ ಹಿಂಸಾಚಾರದಲ್ಲಿ ತೊಡಗಿಕೊಂಡಿದೆ ಎಂದಿದೆ.
ಇವುಗಳಲ್ಲಿ 2020 ರ ಡಿಸೆಂಬರ್ನಲ್ಲಿ ಸಿಪಿಸಿಗಳಾಗಿ ಇಲಾಖೆಯು ಗೊತ್ತುಪಡಿಸಿದ್ದ 10 ದೇಶಗಳಾದ ಬರ್ಮಾ, ಚೀನಾ, ಎರಿಟ್ರಿಯಾ, ಇರಾನ್, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ತಜಿಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಜೊತೆಗೆ ನಾಲ್ಕು ಹೊಸ ರಾಷ್ಟ್ರಗಳಾದ ಭಾರತ, ರಷ್ಯಾ, ಸಿರಿಯಾ ಮತ್ತು ವಿಯೆಟ್ನಾಂ ಸೇರಿವೆ.
ಯುಎಸ್ ಕಾಂಗ್ರೆಸ್ ರಚಿಸಿದ್ದ ಸ್ವತಂತ್ರ ಫೆಡರಲ್ ಆಯೋಗವು ಕಳೆದ ವರ್ಷ ಭಾರತವನ್ನು ಸಿಪಿಸಿಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಶಿಫಾರಸು ಮಾಡಿತ್ತು, ಆದರೆ ರಾಜ್ಯ ಇಲಾಖೆ ಈ ಶಿಫಾರಸನ್ನು ಸ್ವೀಕರಿಸಲಿಲ್ಲ. ಸ್ವೀಕರಿಸಿದ್ದರೆ ಕಳೆದ ವರ್ಷದ ಪಟ್ಟಿಯಲ್ಲೇ ಭಾರತದ ಹೆಸರಿರುತ್ತಿತ್ತು. ಹಾಗಾಗಿಯೇ ಯುಎಸ್ಸಿಐಆರ್ಎಫ್ನ 2020ರ ಭಾರತದ ಕುರಿತಾದ ಮೌಲ್ಯಮಾಪನವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮೂವರು ಆಯುಕ್ತರಿ ಭಿನ್ನಾಭಿಪ್ರಾಯವಿದೆ ಎಂಬ ಅಂಶವನ್ನು ಎತ್ತಿತೋರಿಸುವ ಮೂಲಕ ವಾರ್ಷಿಕ ವರದಿಯನ್ನು ತಳ್ಳಿ ಹಾಕಿತ್ತು.
“USCIRF ನ ವಾರ್ಷಿಕ ವರದಿಯಲ್ಲಿರುವ ಭಾರತದ ಕುರಿತಾದ ಅವಲೋಕನಗಳನ್ನು ನಾವು ತಿರಸ್ಕರಿಸುತ್ತೇವೆ. ಭಾರತದ ವಿರುದ್ಧ ಅದರ ಪಕ್ಷಪಾತದ ಮತ್ತು ಏಕಮುಖ ಟೀಕೆಗಳು ಹೊಸತಲ್ಲ. ಆದರೆ ಈ ಬಾರಿಯ ಅದರ ತಪ್ಪು ನಿರೂಪಣೆಯು ಬೇರೆಯದೇ ಹಂತದಲ್ಲಿದೆ. ಯುಎಸ್ಐಆರ್ಎಫ್ಗೆ ತನ್ನದೇ ಆಯುಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ನಾವು ಇದನ್ನು ನಿರ್ದಿಷ್ಟ ಕಾಳಜಿಯ ಸಂಘಟನೆಯೆಂದು ಪರಿಗಣಿಸುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಪರಿಗಣಿಸುತ್ತೇವೆ ”ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಏಪ್ರಿಲ್ 2020 ರಂದು ಹೇಳಿದ್ದರು. ಆದರೆ ಈ ಬಾರಿ ಒಬ್ಬ ಯುಎಸ್ಸಿಐಆರ್ಎಫ್ ಆಯುಕ್ತರು ಮಾತ್ರ ಶಿಫಾರಸನ್ನು ವಿರೋಧಿಸಿದ್ದಾರೆ.
ಯುಎಸ್ಸಿಐಆರ್ಎಫ್ನ 2021ರ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಪರಿಸ್ಥಿತಿಗಳು “ತಮ್ಮ ನಕಾರಾತ್ಮಕ ನಡೆಯನ್ನು ಮುಂದುವರೆಸಿದೆ” ಎಂದು ಹೇಳಿದೆ. “ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರ್ಕಾರವು ಹಿಂದೂ ರಾಷ್ಟ್ರೀಯತಾವಾದಿ ನೀತಿಗಳನ್ನು ಉತ್ತೇಜಿಸಿತು, ಇದರ ಪರಿಣಾಮವಾಗಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ವ್ಯವಸ್ಥಿತವಾಗಿ ನಡೆಯುತ್ತಿದೆ” ಎಂದು ವರದಿ ಹೇಳಿದೆ. ವಿಶೇಷವಾಗಿ ‘ಧಾರ್ಮಿಕ ತಾರತಮ್ಯದ’ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಕಾರವು ಅಂಗೀಕರಿಸಿದೆ. ದೆಹಲಿ ಗಲಭೆಯಲ್ಲಿ ಪೊಲೀಸರ ಸಹಭಾಗಿತ್ವವಿದೆ ಎಂದೂ ವರದಿಯಲ್ಲಿ ಸೂಚಿಸಲಾಗಿದೆ.
“COVID-19 ಸಾಂಕ್ರಾಮಿಕದ ಸಂದರ್ಭದಲ್ಲೂ ಸರ್ಕಾರಿ ಅಧಿಕಾರಿಗಳೂ ಒಳಗೊಂಡಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ತಪ್ಪು ಮತ್ತು ದ್ವೇಷದ ಮಾಹಿತಿಗಳನ್ನು ಹಂಚಲಾಯಿತು” ಎಂದೂ ಅದು ಹೇಳಿದೆ.
ಇದಲ್ಲದೆ, “ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ಎಲ್ಲಾ ವ್ಯಕ್ತಿಗಳನ್ನು ಖುಲಾಸೆಗೊಳಿಸುವುದು ಸೇರಿದಂತೆ ಸರ್ಕಾರದ ನಿಷ್ಕ್ರಿಯತೆಯು ಧಾರ್ಮಿಕ ಹಿಂಸಾಚಾರವನ್ನು ಪರಿಹರಿಸದಿರಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವವರಿಗೆ ನಿರ್ಭಯದ ವಾತಾವರಣವನ್ನು ಒದಗಿಸಿಕೊಟ್ಟಿದೆ” ಎಂದು ವರದಿ ಆರೋಪಿಸಿದೆ.
ಆಯುಕ್ತರಲ್ಲಿ ಒಬ್ಬರಾಗಿರುವ ಜಾನಿ ಮೂರ್ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಸೇರಿಸಿದ್ದರೂ ಕೂಡ ಭಾರತವು ವೈವಿಧ್ಯತೆಯ ಆಗರವಾಗಿದ್ದರೂ ಅದು ಈಗ ‘ಅಡ್ಡಹಾದಿಯಲ್ಲಿದೆ’ ಎಂದು ಹೇಳಿದ್ದಾರೆ.
“ಭಾರತದ ಪ್ರಜಾಪ್ರಭುತ್ವ ಇನ್ನೂ ಯುವ ಮತ್ತು ಫ್ರೀವೀಲಿಂಗ್ ಸ್ಟೇಜ್ನಲ್ಲಿದೆ. ಅದು ಸ್ವತಃ ತನಗೆ ಕಷ್ಟಕರ ಸವಾಲುಗಳನ್ನು ಸೃಷ್ಟಿಸುತ್ತಿದೆ. ಉತ್ತರ, ಸಹಜವಾಗಿ, ಭಾರತದ ಸಂಸ್ಥೆಗಳು ತಮ್ಮ ಮೌಲ್ಯಗಳನ್ನು ಮತ್ತು ತಮ್ಮ ಶ್ರೀಮಂತ ಇತಿಹಾಸವನ್ನು ರಕ್ಷಿಸಲು ಪ್ರಯತ್ನಿಸಬೇಕು. ಧಾರ್ಮಿಕ ಉದ್ವಿಗ್ನತೆಯಿಂದ ರಾಜಕೀಯ ಮತ್ತು ಅಂತರ್ ಸಂಘರ್ಷ ಉಲ್ಬಣಗೊಳ್ಳುವುದನ್ನು ಭಾರತ ಯಾವಾಗಲೂ ವಿರೋಧಿಸಬೇಕೆಂದಿದೆ.
ಭಾರತದ ಸರ್ಕಾರ ಮತ್ತು ಜನರು ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಮತ್ತು ಎಲ್ಲರ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಬೇಕು” ಎಂದು ಮೂರ್ ಹೇಳಿದರು. ಇತ್ತೀಚೆಗಷ್ಟೇ ಅಮೆರಿಕ ಮೂಲದ ‘ಫ್ರೀಡಂ ಹೌಸ್’ ಭಾರತದಲ್ಲಿ ಈಗ ಭಾಗಶಃ ಮುಕ್ತತೆ ಮಾತ್ರ ಚಾಲ್ತಿಯಲ್ಲಿದೆ ಎಂದು ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.