ಒಂದು ಕಡೆ ದೇಶ ಕೋವಿಡ್ ಮೂರನೇ ಅಲೆಯ ಹೊಸ್ತಿಲಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈನ ಕೋವಿಡ್ ಪ್ರಕರಣಗಳ ಏರಿಕೆಯನ್ನು ನೋಡಿದರೆ ಯಾವುದೇ ಕ್ಷಣದಲ್ಲಿ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸೋಮವಾರ ಕೋವಿಡ್-19 ಮಾದರಿಗಳ ಪೈಕಿ ಶೇ.84 ರಷ್ಟು ಮಾದರಿಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು ಒಂದೇ ದಿನ ನಾಲ್ಕು ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿನ ದರ ಶೇ.6.5ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ನ ಮೂರನೇ ಅಲೆ ಈಗಾಗಲೇ ಆರಂಭವಾಗಿದ್ದು, ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸುಮಾರು 80 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುವ ಹಾಗೂ ಸುಮಾರು 80,000 ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.
ಒಮಿಕ್ರೋನ್ ರೂಪಾಂತರಿಯು ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಆ ಹಿನ್ಜೆಲೆಯಲ್ಲಿ ಅದು ಮಾರಣಾಂತಿಕವಲ್ಲ ಎಂಬ ವಾದಗಳನ್ನು ನಂಬಿ ಉದಾಸೀನ ಮಾಡುವಂತಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ ವ್ಯಾಸ್ ಹೇಳಿದ್ದಾರೆ.
ಅಲ್ಲದೆ, ಮೂರನೇ ಅಲೆಯು ರೋಗಪೀಡಿತರಿಗೆ ಹಾಗೂ ಲಸಿಕೆಯನ್ನು ಪಡೆಯದೇ ಇರುವವರಿಗೆ ಮಾರಣಾಂತಿಕವಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಉದಾಸೀನ ಮಾಡದೆ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ನಡುವೆ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಎರಿಕೆ ಕಾಣುತ್ತಿದ್ದು, ಎರಡನೇ ಅಲೆಯ ಆರಂಭಿಕ ವೇಳೆಯ ದೈನಂದಿನ ಏರಿಕೆಗಿಂತ ವೇಗವಾಗಿ ಪ್ರಕರಣಗಳು ಏರುಗತಿ ಪಡೆದುಕೊಂಡಿವೆ. ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರತೊಡಗಿದೆ. ದಿನದಿಂದ ದಿನಕ್ಕೆ ಮೂರ್ನಾಲ್ಕು ಪಟ್ಟು ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.
ರಾಜ್ಯದಲ್ಲಿ ಕೂಡ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿನ ತೀವ್ರಗತಿಯ ಏರಿಕೆಯಿಂದ ದಿಕ್ಕೆಟ್ಟಿರುವ ರಾಜ್ಯ ಸರ್ಕಾರ, ಜನ ನಿಯಮಾವಳಿ ಪಾಲಿಸದೇ ಇದ್ದಲ್ಲಿ ಲಾಕ್ ಡೌನ್ ಹೇರುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಒಮಿಕ್ರೋನ್ ಪ್ರಕರಣಗಳು ಮತ್ತು ಕೋವಿಡ್ ಪ್ರಕರಣಗಳ ಪ್ರಮಾಣದಲ್ಲಿ ಆಗುತ್ತಿರುವ ಭಾರೀ ಏರಿಕೆ ಆತಂಕ ತಂದಿದೆ. ಸರ್ಕಾರ ಜಾರಿಗೊಳಿಸಿರುವ ಕೋವಿಡ್ ನಿಯಮಾವಳಿಗಳನ್ನು ಜನ ಪಾಲಿಸಿ ಸಹಕರಿಸದೇ ಇದ್ದರೆ ಜನರ ಹಿತದೃಷ್ಟಿಯಿಂದ ಲಾಕ್ ಡೌನ್ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಈ ನಡುವೆ, ದೇಶದಲ್ಲಿ ಕಳೆದ ಒಂದು ತಿಂಗಳಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಒಮಿಕ್ರೋನ್ ರೂಪಾಂತರವಾಗಿದ್ದು ಭಾರತದಲ್ಲಿ ಡೆಲ್ಟಾಗಿಂತ ಒಮಿಕ್ರೋನ್ ಪ್ರಬಲ ತಳಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಪ್ರಕರಣಗಳ ಹಠಾತ್ ಏರಿಕೆ ಮತ್ತು ಕೋವಿಡ್ ಸಾವುಗಳ ಪ್ರಮಾಣದಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಕೋವಿಡ್ ಮೂರನೇ ಅಲೆ ದೇಶದಲ್ಲಿ ಈಗಾಗಲೇ ಪ್ರಾರಂಭವಾಗಿದೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಸೋಂಕು ದೃಢಪ್ರಮಾಣದಲ್ಲಿನ ಭಾರೀ ಏರಿಕೆ ಆ ಆತಂಕಕ್ಕೆ ಕಾರಣ ಎಂಬುದು ಗಮನಾರ್ಹ.
ಹೀಗೆ ಒಂದು ಕಡೆ ಸಾಂಕ್ರಾಮಿಕ ತಜ್ಞರು, ಮತ್ತೊಂದು ಕಡೆ ಸ್ವತಃ ಸರ್ಕಾರ ಒಮಿಕ್ರೋನ್ ರೂಪಾಂತರಿ ಹಾವಳಿಯ ಬಗ್ಗೆ ಆತಂಕಗೊಂಡಿದ್ದರೂ, ಲಾಕ್ ಡೌನ್ ಹೇರುವ ಮಾತುಗಳನ್ನು ಆಡುತ್ತಿದ್ದರೂ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ರಾಜಕೀಯ ರ್ಯಾಲಿಗಳು, ಪಾದಯಾತ್ರೆ, ಸಭೆ, ಸಮಾರಂಭಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ.
ಹೋಟೆಲ್, ರೆಸ್ಟೋರಂಟ್ ಗಳಿಗೆ, ಮದುವೆ-ಶವ ಸಂಸ್ಕಾರಗಳಿಗೆ ನಿಯಮಾವಳಿ ಹೇರಿರುವ ಸರ್ಕಾರ, ಧಾರ್ಮಿಕ ಮಠಮಂದಿರಗಳಿಗೆ, ಯಾತ್ರಾ ಸ್ಥಳಗಳಿಗೆ ಯಾವ ನಿರ್ಬಂಧವನ್ನೂ ಹೇರಿಲ್ಲ. ಹಾಗೇ ಜಾತ್ರೆ, ಪರಿಷೆಗಳಲ್ಲೂ ಕೂಡ ಸಾವಿರಾರು ಜನರ ಜನಜಾತ್ರೆಗಳೇ ನೆರೆಯುತ್ತಿವೆ.
ನಿಜವಾಗಿಯೂ ಯಾವ ದೈಹಿಕ ಅಂತರ ಕಾಯದೆ, ಮಾಸ್ಕ್, ಸ್ಯಾನಿಟೈಸರ್ ನಂತಹ ಯಾವ ಮುಂಜಾಗ್ರತಾ ಕ್ರಮಗಳೂ ಇಲ್ಲದೆ ಹೀಗೆ ಸಾವಿರಾರು ಜನ ನೆರೆಯುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ, ಅಂತಾರಾಜ್ಯ ಪ್ರಯಾಣಿಕರು ಮತ್ತು ವಿಮಾನ ಪ್ರಯಾಣಿಕರ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸದ ಸರ್ಕಾರ, ಇದೀಗ ಲಾಕ್ ಡೌನ್ ಗುಮ್ಮನ ತೋರಿಸಿ ಜನರನ್ನು ಪರೋಕ್ಷವಾಗಿ ಬೆದರಿಸುವ ಯತ್ನ ಮಾಡುತ್ತಿದೆ. ಆದರೆ ನಿಜಕ್ಕೂ ಆಗಬೇಕಾದ್ದು ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ..