ಬೆಂಗಳೂರು: ಇಷ್ಟು ದಿನ ಕೈ ಕೊಟ್ಟಿದ್ದ ಮುಂಗಾರು ಮಳೆ ರಾಜ್ಯದಲ್ಲಿ ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ (Karnataka Rain) ಮುನ್ಸೂಚನೆ ಇದ್ದು, ಕಳೆದ ರಾತ್ರಿಯಿಂದಲೇ ಕೆಲವೆಡೆ ಜಡಿ ಮಳೆ ಶುರುವಾಗಿದೆ. ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು ಸಂಜೆ ಅಥವಾ ರಾತ್ರಿಯ ವೇಳೆ ಭಾರಿ ಮಳೆಯಾಗುವ (Bengaluru Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ವರುಣ ಅಬ್ಬರಿಸುವ ಸಂಭವ ಇದೆ. ಕೋಲಾರ ಜಿಲ್ಲೆಯಲ್ಲಿ ರಾತ್ರಿಯಿಂದಲೇ ಜಡಿ ಮಳೆಯಾಗುತ್ತಿದೆ.
![](https://pratidhvani.com/wp-content/uploads/2023/06/weather-ecotimes.webp)
![](https://pratidhvani.com/wp-content/uploads/2023/06/fdddffdd.png)
ನಿನ್ನೆ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ ಕರಾವಳಿಯ ಕಡೆಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 6 ಸೆಂಟಿ ಮೀಟರ್ ಮಳೆಯಾಗಿದೆ. ಹಾಸನ ಜಿಲ್ಲೆಯ ಸಿಆರ್ ಪಟ್ಣಣದಲ್ಲಿ 5, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 4, ಉ.ಕ ಜಿಲ್ಲೆಯ ಮಂಕಿ, ಗೋಕರ್ಣ, ಉಡುಪಿ ಜಿಲ್ಲೆಯ ಕೋಟ, ರಾಮನಗರದ ಮಾಗಡಿಯಲ್ಲಿ ತಲಾ 3, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಕೊಪ್ಪಳ ಜಿಲ್ಲೆಯ ಮುನಿರಾಬಾದ್, ತುಮಕೂರು ಜಿಲ್ಲೆಯ ಸಿರಾ, ಶಿವಮೊಗ್ಗ ಜಿಲ್ಲೆಯ ಅಗ್ರಹಾರ ಕೋಣಂದೂರು, ಮಂಡ್ಯದ ಬೆಳ್ಳೂರು, ವಿಜಯನಗರದ ಕೂಡ್ಲಿಗಿ, ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ.
![](https://pratidhvani.com/wp-content/uploads/2023/06/ಗಜಗ್ಜಗದದ.png)
ಮಳೆಯ ಪರಿಣಾಮವಾಗಿ ರಾಜ್ಯದಲ್ಲಿ ಉಷ್ಣಾಂಶ ಕೂಡ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ -1.6 ಡಿಗ್ರಿ ಸೆಲ್ಸಿಯಸ್ ನಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆಯಾಗಿದೆ. ಅತಿ ಗರಿಷ್ಠ ಉಷ್ಣಾಂಶ 34.9 ಡಿಗ್ರಿ ಸೆಲ್ಸಿಯಸ್ ಕಲಬುರ್ಗಿಯಲ್ಲಿ ದಾಖಲಾಗಿದೆ.