ಬೆಳಗಾವಿ: ವಿಧಾನಸಭೆಯಲ್ಲಿ ಗದ್ದಲ ವಿರೋಧದ ನಡುವೆ ಅಂಗೀಕಾರವಾಗಿದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಇಂದು ಮೇಲ್ಮನೆಯಲ್ಲೂ ಅಂಗೀಕಾರಗೊಂಡಿದೆ.

ಸರ್ಕಾರದ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಸೂದೆ ಮಂಡಿಸಿದರು. ಈ ವೇಳೆ ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಸದನಕ್ಕೆ ಗೃಹ ಸಚಿವರು ತಿಳಿಸಿದರು.

ಇನ್ನು ಸರ್ಕಾರದವರಯ ಏನೋ ದೊಡ್ಡ ದ್ವೇಷ ಭಾಷಣ ಬಿಲ್ ತಂದಿದ್ದಾರೆ ಎಂಬ ಆತಂಕ ಬೇಡ. ಕಾನೂನು ಪಾಲಿಸುವವರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.
ಮಸೂದೆ ಬಗ್ಗೆ ಪರಿಷತ್ ನ ಆಡಳಿತ & ವಿಪಕ್ಷ ಸದಸ್ಯರ ಸುಧೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವವನ್ನು ಸಭಾಪತಿಯವರು ಧ್ವನಿಮತಕ್ಕೆ ಹಾಕಿದರು. ಬಳಿಕ ವಿಧಾನ ಪರಿಷತ್ ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.




