
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ
ಮನೆಕೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಸದ್ಯದಲ್ಲೇ ಹೊಸ ನಿಯಮ ಜಾರಿ
ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಅವರ ಅವಲಂಬಿತರ ಕ್ಷೇಮಾಭಿವೃದ್ಧಿಗಾಗಿ ಇನ್ನಷ್ಟು ಹೊಸ ಹೊಸ ಯೋಜನೆ ಜಾರಿ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಹುಬ್ಬಳ್ಳಿಯ ಬೆಂಗೇರಿಯ ಸಂತೆ ಮೈದಾನದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಸ್ಮಾರ್ಟ್ ಕಾರ್ಡ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸಲು ನಮ್ಮ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ನಾನು ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಸಾಕಷ್ಟು ಸವಾಲುಗಳು ಇದ್ದವು. ಈಗಲೂ ಇವೆ. ಆದರೆ ಕಾರ್ಮಿಕರ ಕಲ್ಯಾಣಕ್ಕಾಗಿ ಏನಾದರೂ ಮಾಡಲೇ ಬೇಕು ಎಂಬ ಉದ್ದೇಶದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಅಸಂಘಟಿತ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಾರಿಗೆ ಮಂಡಳಿ ರಚನೆ ಮಾಡಿದ್ದೇವೆ. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಸಹಕಾರ ಹಾಗೂ ಬೆಂಬಲದಿಂದ ಈ ಮಂಡಳಿ ರಚನೆ ಸಾಧ್ಯವಾಯಿತು. ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ರೀತಿಯಿಂದ ಸಹಕಾರ ನೀಡಿದರು. ಹೊಸ ವಾಹನಗಳನ್ನು ಖರೀದಿ ಮಾಡಿದಾಗ ಸಂಗ್ರಹಿಸುವು ಕರದಿಂದ ಈ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗೆ ನಿಧಿ ಸ್ಥಾಪಿಸಿ ಜೀವ ವಿಮೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲಾಗುವುದು. ಇಂತಹ ಒಂದು ಮಂಡಳಿಯನ್ನು ರಚನೆ ಮಾಡಿರುವುದು ಇಡೀ ದೇಶದಲ್ಲೇ ನಾವು ಎಂಬುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು.

ಅಸಂಘಟಿತ ವಲಯದಲ್ಲಿ ಕೋಟ್ಯಂತರ ಕಾರ್ಮಿಕರು ಕೆಲಸ ಮಾಡುತ್ತಾ ಇದ್ದಾರೆ. ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲು ಹಣಕಾಸಿನ ಅಗತ್ಯವಿದೆ. ಅದಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುತ್ತಿರುವ ಕರದಲ್ಲಿ ಪಾಲು ಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ. ಹಾಗಾದರೆ ಎರಡು ಸಾವಿರ ಕೋಟಿ ಹಣ ಮಂಡಳಿಗೆ ಬರಲಿದೆ. ಇದರೊಂದಿಗೆ ಜಿಎಸ್ಟಿಯಲ್ಲಿ ಒಂದಂಶ ಕೊಡಲು ಕೇಳಿದ್ದೇವೆ. ಕಾರ್ಪೋರೇಟ್ ತೆರಿಗೆಯಲ್ಲಿ ಪಾಲು ಕೇಳಿದ್ದೇವೆ. ಇದು ಸಿಕ್ಕರೆ ಸಾವಿರಾರು ಕೋಟಿ ಹಣ ಸಿಗಲಿದೆ. ಆ ಹಣದಿಂದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಕೊಡಲು ಅನುಕೂಲವಾಗಲಿದೆ. ಇದೆಲ್ಲ ಸಾಕಾರವಾದರೆ ಇಡೀ ದೇಶದಲ್ಲೇ ಮೊದಲ ಬಾರಿಗೆ ನಮ್ಮ ಕರ್ನಾಟಕದಲ್ಲಿ ಮೊದಲು ಎಂಬುದು ಹೆಮ್ಮೆಯ ವಿಷಯ ಎಂದರು.

ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣಕ್ಕಾಗಿ ಕಾಯ್ದೆ ಜಾರಿ ಮಾಡಿದ್ದೇವೆ. ಈ ಕ್ಷೇತ್ರದಲ್ಲೂ ಅಸಂಖ್ಯಾತ ಕಾರ್ಮಿಕರು ಕೆಲಸ ಮಾಡುತ್ತಾ ಇದ್ದಾರೆ. ಸಿನಿಮಾ ಟಿಕೆಟ್ ಮೇಲೆ ಸಣ್ಣ ಮೊತ್ತದ ಕರ ಹಾಕಿ ಅದಕ್ಕೆ ಸರ್ಕಾರದ ಹಣವೂ ನೀಡಿ ನಿಧಿ ಸ್ಥಾಪಿಸಿ ಈ ಕ್ಷೇತ್ರದ ಜನರಿಗಾಗಿ ಸೌಲಭ್ಯ ಒದಗಿಸಲಾಗುವುದು ಎಂದರು.
ಇನ್ನು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕ್ರಾಂತಿಕಾರಕ ಕ್ರಮಗಳನ್ನು ಜಾರಿ ಮಾಡಿದೆ. ಇದು ರಾಹುಲ್ ಗಾಂಧಿ ಅವರ ಕನಸು. ಭಾರತ್ ಜೋಡೊ ಯಾತ್ರೆ ವೇಳೆ ಗಿಗ್ ಕಾರ್ಮಿಕರಿಗೆ ಸೌಲಭ್ಯಕ್ಕಾಗಿ ಮನವಿ ಮಾಡಿದ್ದರು. ರಾಜಸ್ಥಾನಕ್ಕಿಂತ ಒಳ್ಳೆಯ ಮಸೂದೆ ಜಾರಿ ಮಾಡಿದ್ದೇವೆ. ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಸಂಬಂಧ ಸಾಕಷ್ಟು ಸಭೆ ಮಾಡಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಗಿಗ್ ಕಾರ್ಮಿಕರಾಗಿ ಕೆಲಸ ಮಾಡುವವರು ಮತ್ತು ಅವರ ಅವಲಂಬಿತರಿಗೆ ಜೀವವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗಲಿವೆ ಎಂದರು.

ಇನ್ನು ಕಡ್ಡಾಯ ಉಪಧನ (ಗ್ರ್ಯಾಚುಯಿಟಿ) ಕಾಯ್ದೆ, ಅಂಬೇಡ್ಕರ್ ಸಹಾಯ ಹಸ್ತ, ಆಶಾದೀಪ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಸದ್ಯದಲ್ಲೇ ಮನೆಕೆಲಸದವರಿಗೆ ಅನುಕೂಲವಾಗುವ ಬಿಲ್ ತರಲು ಸಿದ್ಧತೆ ನಡೆದಿದೆ ಎಂದರು.
ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳು ಕೋಟ್ಯಂತರ ಕುಟುಂಬಗಳನ್ನು ತಲುಪುತ್ತಾ ಇವೆ. ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ಜೆ, ಕಾರ್ಮಿಕ ಆಯುಕ್ತರಾದ ಡಾ. ಎಚ್ ಎನ್ ಗೋಪಾಲ ಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಚಿವ ಹಿಂಡಸಗೇರಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪಿರ್ ಖಾದ್ರಿ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರಾದ ಅನಿಲ್ ಕುಮಾರ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.