ಮಂಗಳೂರು : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದೆ. ಕುಕ್ಕೆಯಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್ ಹಾಗೂ ಸೊಸೆ ಉರುಳು ಸೇವೆ ನಡೆಸಿದ್ದಾರೆ. ಬಳಿಕ ಈಶ್ವರಪ್ಪ ಕುಟುಂಬ ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾಗಿದೆ.
ಇನ್ನು ಇದೇ ವೇಳೆ ದೇವಸ್ಥಾನಕ್ಕೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಕೂಡ ಆಗಮಿಸಿದ್ದಾರೆ. ಸುಬ್ರಹ್ಮಣ್ಯನಿಗೆ ರಿಷಭ್ ಶೆಟ್ಟಿ, ಆಶ್ಲೇಷ ಬಲಿ ಹಾಗೂ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ರಿಷಭ್ ಶೆಟ್ಟಿ ಜೊತೆ ಸೆಲ್ಫಿ ತೆಗೆಯಲು ಜನರು ಮುಗಿಬಿದ್ದಿದ್ದಾರೆ.
ದೇವಸ್ಥಾನದಲ್ಲಿ ಸಕಲ ಸೇವೆಗಳನ್ನು ಸಲ್ಲಿಸಿದ ರಿಷಬ್ ಶೆಟ್ಟಿ ದಂಪತಿ ದೇವಸ್ಥಾನದಿಂದ ತೆರಳಿದ್ದಾರೆ. ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿದೆ.