• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ದಾನ-ಖರೀದಿ-ಮಾರಾಟ ಮತ್ತು ಪವಿತ್ರ ವೋಟು..ವರ್ತಮಾನದ ರಾಜಕಾರಣದಲ್ಲಿ ಮತದ ಮೌಲ್ಯ ನಿಷ್ಕರ್ಷೆಯಾಗುವುದು ಔದ್ಯಮಿಕ ಚೌಕಟ್ಟಿನಲ್ಲಿ

ನಾ ದಿವಾಕರ by ನಾ ದಿವಾಕರ
April 22, 2023
in ಅಂಕಣ
0
ದಾನ-ಖರೀದಿ-ಮಾರಾಟ ಮತ್ತು ಪವಿತ್ರ ವೋಟು..ವರ್ತಮಾನದ ರಾಜಕಾರಣದಲ್ಲಿ ಮತದ ಮೌಲ್ಯ ನಿಷ್ಕರ್ಷೆಯಾಗುವುದು ಔದ್ಯಮಿಕ ಚೌಕಟ್ಟಿನಲ್ಲಿ
Share on WhatsAppShare on FacebookShare on Telegram


ನಾ ದಿವಾಕರ

ADVERTISEMENT

ಭಾರತದ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ಗುರುತಿಸಬಹುದಾದ ಒಂದು ಸಾರ್ವಜನಿಕ ವಿದ್ಯಮಾನ ಎಂದರೆ ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚು ಆಟಾಟೋಪ, ಆರ್ಭಟಗಳಿಲ್ಲದೆ ನಡೆಯುವ ʼಮತದಾರ ಜಾಗೃತಿʼ ಕಾರ್ಯಕ್ರಮಗಳು. ಸಾರ್ವಜನಿಕ ಸಂಘ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಕಾರ್ಯಕರ್ತರು ಮತ್ತು ಕೆಲವು ಎನ್‌ಜಿಒಗಳೂ ಸಹ ಈ ಕಾರ್ಯಕ್ರಮವನ್ನು ಅತ್ಯಂತ ಪ್ರಾಮಾಣಿಕವಾಗಿ ನಡೆಸುತ್ತವೆ. ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಸೇರ್ಪಡೆಯಾಗುವ ಯುವ ಮತದಾರರಲ್ಲಿ ಮತದಾನದ ಅವಶ್ಯಕತೆ, ಪಾವಿತ್ರ್ಯತೆ ಮತ್ತು ಸಾಂವಿಧಾನಿಕ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಈ ಪ್ರಯತ್ನಗಳು ಸರ್ಕಾರದ ಇಲಾಖೆಗಳಿಂದಲೂ ನಡೆಯುತ್ತವೆ. ಹಾಗೆಯೇ ಮತದಾನ ಎನ್ನುವುದು ನಮ್ಮ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಹಕ್ಕು ಮತ್ತು ಐಚ್ಚಿಕವಾದ ಹಕ್ಕು ಎಂದು ಮನದಟ್ಟು ಮಾಡುವ ಪ್ರಯತ್ನಗಳೂ ನಡೆಯುತ್ತವೆ. ಇವೆಲ್ಲವೂ ಸ್ವಾಗತಾರ್ಹ ಚಟುವಟಿಕೆಗಳೇ ಹೌದು.

ಆದರೆ ಈ ಮತದಾರ ಜಾಗೃತಿಯ ನಡುವೆಯೇ ಪ್ರಜ್ಞಾವಂತ ಜನರು ಗಮನಿಸಬೇಕಿರುವುದು ಈವರೆಗೂ ಅಧಿಕೃತವಾಗಿ ವರದಿಯಾಗಿರುವ ಚುನಾವಣಾ ಅಕ್ರಮಗಳು, ವಶಪಡಿಸಿಕೊಂಡಿರುವ ವಸ್ತು/ಹಣದ ಮೌಲ್ಯ ಹಾಗೂ ʼಸಂಭಾವ್ಯ ಜನಪ್ರತಿನಿಧಿʼ ಗಳ ಆಸ್ತಿಪಾಸ್ತಿ. ನಮ್ಮ ರಾಜಕೀಯ ವ್ಯವಸ್ಥೆ ಧರ್ಮನಿರಪೇಕ್ಷವಾದರೂ, ಜಾತಿನಿರಪೇಕ್ಷವಾದರೂ ಎಂದಿಗೂ ʼಧನ ನಿರಪೇಕ್ಷʼ ವಾಗುವುದು ಸಾಧ್ಯವಿಲ್ಲ ಎಂದು ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಯ ಸಂದರ್ಭದಲ್ಲೂ ಸಾಬೀತುಪಡಿಸುತ್ತಲೇ ಇವೆ. ಅಧಿಕಾರ ರಾಜಕಾರಣ ಎನ್ನುವುದು ಔದ್ಯಮಿಕ ಸ್ವರೂಪ ಪಡೆದಿರುವುದರಿಂದ ತಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಲು, ಬಂಡವಾಳ ಶೇಖರಣೆಯನ್ನು ವೃದ್ಧಿಸಿಕೊಳ್ಳಲು ಹಾಗೂ ಆಸ್ತಿಪಾಸ್ತಿಯನ್ನು ರಕ್ಷಿಸಿಕೊಳ್ಳಲು ʼ ಜನಪ್ರತಿನಿಧಿ ʼ ಎಂಬ ಹುದ್ದೆಯನ್ನು ಅಲಂಕರಿಸುವ ಆಕಾಂಕ್ಷೆಯೇ ರಾಜಕೀಯ ಅರಂಗೆಟ್ರಂನ ಪ್ರಧಾನ ಧ್ಯೇಯವಾಗಿ ಕಾಣಲಾಗುತ್ತದೆ. ಈ ನಡುವೆಯೇ ಚಾಲ್ತಿಯಲ್ಲಿರುವ ಕರ್ನಾಟಕದ ಚುನಾವಣೆಗಳನ್ನು ಗಮನಿಸಿದಾಗ, ಅಧಿಕಾರ ರಾಜಕಾರಣಕ್ಕೂ-ಔದ್ಯಮಿಕ ಬೆಳವಣಿಗೆಗೂ-ಬಂಡವಾಳ ಕ್ರೋಢೀಕರಣಕ್ಕೂ ಇರುವ ಸಂಬಂಧಗಳನ್ನೂ ಗಮನಿಸಬಹುದು.

ಸಿರಿವಂತರ ಮುಷ್ಟಿಯಲ್ಲಿ ಪ್ರಜಾತಂತ್ರ

ಕಳೆದ ಹಣಕಾಸು ವರ್ಷ 2021-22ರ ಅಧಿಕೃತ ಮಾಹಿತಿಯ ಪ್ರಕಾರ ಈ ವರ್ಷದಲ್ಲಿ ಭಾರತದ 77 ಲಕ್ಷ ಜನರು ತಮ್ಮ ಆದಾಯವನ್ನು 10 ಲಕ್ಷದಿಂದ ಒಂದು ಕೋಟಿಯವರೆಗೂ ಇರುವುದನ್ನು ಘೋಷಿಸಿದ್ದಾರೆ. ಇಂದಿನ ಆರ್ಥಿಕತೆಯ ನೆಲೆಯಲ್ಲಿ ಇದೇನೂ ಉತ್ಪ್ರೇಕ್ಷಿತ ಅಥವಾ ಅಪವಾದ ಎನಿಸುವುದಿಲ್ಲ. ಏಕೆಂದರೆ ನವಉದಾರವಾದದ ಉದ್ಯೋಗ ಮಾರುಕಟ್ಟೆ ಈ ಪ್ರಮಾಣದ ಆದಾಯ ಗಳಿಕೆಗೆ ಅಗತ್ಯವಾದ ಔದ್ಯಮಿಕ ಭೂಮಿಕೆಯನ್ನು ನಿರ್ಧರಿಸಿದೆ. ಒಂದು ಕೋಟಿಗಿಂತಲೂ ಹೆಚ್ಚು ಆಸ್ತಿ ಹೊಂದಿರುವವರನ್ನು ಕೋಟ್ಯಧಿಪತಿ ಎಂದು ಭಾವಿಸುವುದಾದರೆ ಭಾರತದಲ್ಲಿ ಅಧಿಕೃತವಾಗಿ 1 ಲಕ್ಷ 31 ಸಾವಿರ ಕೋಟ್ಯಧಿಪತಿಗಳಿದ್ದಾರೆ ಎಂದು ಅಧಿಕೃತ ವರದಿಗಳು ಹೇಳುತ್ತವೆ. ಅತಿ ಶ್ರೀಮಂತ ವರ್ಗಕ್ಕೆ ಸೇರಿದ ನೂರು ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿರುವವರ ಸಂಖ್ಯೆ ಮಾತ್ರ ಕೇವಲ ʼ 221 ʼ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಕೋಟ್ಯಧಿಪತಿಗಳ ಪ್ರಮಾಣ ಶೇ 0.009ರಷ್ಟಿದ್ದರೆ, ನೂರು ಕೋಟಿ ಮೀರಿದವರ ಪ್ರಮಾಣ ಶೇ 0.00001ರಷ್ಟಿದೆ. ಶೇ 0.54ರಷ್ಟು ಜನರು ಹತ್ತು ಲಕ್ಷ ಮೀರಿ ಆದಾಯ ಘೋಷಿಸಿದ್ದಾರೆ. ಬಂಡವಾಳಶಾಹಿಯು ಸೃಷ್ಟಿಸುವ ಅಸಮಾನತೆಯ ಒಂದು ಚಿತ್ರಣ ಈ ದತ್ತಾಂಶಗಳಲ್ಲಿ ಕಾಣುತ್ತದೆ.

ಈ ಕೋಟ್ಯಧಿಪತಿ ಸಮೂಹದಿಂದಲೇ ಮುಂಬರುವ ವಿಧಾನಸಭೆಗೆ ʼಜನಪ್ರತಿನಿಧಿಗಳುʼ ಆಯ್ಕೆಯಾಗಲಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಅಧಿಕೃತವಾಗಿ ಘೋಷಿಸಿರುವ ಆಸ್ತಿಯನ್ನು ನೋಡಿದರೆ, ನಮ್ಮ ರಾಜ್ಯ ಅಷ್ಟೊಂದು ಸಂಪದ್ಭರಿತವಾಗಿದೆಯೇ ಎಂದು ಅಚ್ಚರಿಯಾಗುತ್ತದೆ. ಏಕೆಂದರೆ ಕೆಲವು ಶಾಸಕರ ಒಟ್ಟು ಆಸ್ತಿಯಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ. ಒಂದು ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇರುವ ಸಿರಿವಂತರು ಶಾಸನಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ಶ್ರೀಸಾಮಾನ್ಯನ ದೃಷ್ಟಿಯಲ್ಲಿ ಹೆಮ್ಮೆಯ ವಿಚಾರವೋ, ವಿಷಾದಕರ ವಿದ್ಯಮಾನವೋ ? ಇದಕ್ಕಿಂತಲೂ ನಮ್ಮನ್ನು ಕಾಡಬೇಕಿರುವುದು, ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ನ್ಯಾಯವನ್ನು ಒದಗಿಸಬೇಕಾದ ಸಾಂವಿಧಾನಿಕ ಸಂಸ್ಥೆಯೊಂದನ್ನು ಶ್ರೀಸಾಮಾನ್ಯನ ಪರವಾಗಿ ಪ್ರತಿನಿಧಿಸುವ ʼಜನಪ್ರತಿನಿಧಿಗಳುʼ ಆರ್ಧಿಕವಾಗಿ ಯಾವ ಸ್ತರದಲ್ಲಿದ್ದಾರೆ, ಬಹುಸಂಖ್ಯೆಯ ಜನಸಾಮಾನ್ಯರು ಯಾವ ಸ್ತರದಲ್ಲಿದ್ದಾರೆ ಎಂಬ ಪ್ರಶ್ನೆ. ಜನಪ್ರತಿನಿಧಿಗಳು ಜನಾಧಿಪತಿಗಳಾಗಿರುವ ಒಂದು ವಿಶಿಷ್ಟ ವಿದ್ಯಮಾನವನ್ನು ನಾವು ಗಮನಿಸಬಹುದು.

ಅಧಿಕಾರ ರಾಜಕಾರಣ ಔದ್ಯಮೀಕರಣದ ಉನ್ನತ ಹಂತ ತಲುಪಿರುವುದನ್ನು ನಾವು ಈ ಬೆಳವಣಿಗೆಗಳಲ್ಲಿ ಕಾಣಬಹುದು. ಹಾಗಾಗಿಯೇ ಇಂದು ತತ್ವ ಸಿದ್ಧಾಂತಗಳ ಸೋಂಕಿಲ್ಲದೆ ʼ ಸಂಭಾವ್ಯ ಜನಪ್ರತಿನಿಧಿಗಳು ʼ ಪಕ್ಷದಿಂದ ಪಕ್ಷಕ್ಕೆ ಕ್ಷಣಮಾತ್ರದಲ್ಲಿ ಜಿಗಿಯುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕ ನಿನ್ನೆ ಎತ್ತಿಹಿಡಿದ ಚಿಹ್ನೆ-ಧ್ವಜ-ಲಾಂಛನ ಮರುದಿನ ಬದಲಾಗುತ್ತಿರುವುದು ನಿತ್ಯದ ವಿದ್ಯಮಾನವಾಗಿದೆ. ಐದು ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಿದ ಶಾಸಕರು ತಾವು ಸಂಪಾದಿಸಿ, ಸಂಗ್ರಹಿಸಿ, ಕೂಡಿಟ್ಟಿರುವ ಆಸ್ತಿಯ ಒಂದು ತುಣುಕನ್ನು ನಗದು ರೂಪದಲ್ಲಿ, ವಸ್ತುಗಳ ರೂಪದಲ್ಲಿ ಮತ್ತೊಮ್ಮೆ ಚುನಾಯಿತರಾಗುವ ವೆಚ್ಚ ಎಂದು ಪರಿಗಣಿಸಿ ಜನಸಾಮಾನ್ಯರಿಗೆ ಹಂಚುತ್ತಿದ್ದಾರೆ. ಹಣ-ಹೆಂಡ-ಪಂಚೆ-ಸೀರೆ ಇತ್ಯಾದಿಗಳ ಯುಗವನ್ನು ದಾಟಿರುವ ಭಾರತದ ರಾಜಕಾರಣ ಈಗ ಹೊಸ ಅವಿಷ್ಕಾರಗಳತ್ತ ಹೊರಳಿದೆ. ಹಾಗಾಗಿ ಆಮಿಷಗಳ ಸ್ವರೂಪ ಮತ್ತು ಮೌಲ್ಯ ಎರಡೂ ರೂಪಾಂತರ ಹೊಂದಿವೆ. ಆದರೂ ತಾವು ನಡೆದುಬಂದ ಹಾದಿಯನ್ನು ಮರೆಯದೆ ʼಸಂಭಾವ್ಯ ಜನಪ್ರತಿನಿಧಿಗಳುʼ ನಗದು ಹಂಚುವುದನ್ನು ಕೈಬಿಟ್ಟಿಲ್ಲ. ಹಣದುಬ್ಬರ ಮತ್ತು ದುಬಾರಿ ಜೀವನವೆಚ್ಚವನ್ನು ಪರಿಗಣಿಸಿ ಮತದ ಮೌಲ್ಯವನ್ನೂ ಹೆಚ್ಚಿಸಿದ್ದಾರೆ. ಪರಿಣಾಮ ಒಂದು ಮತದ ಮೌಲ್ಯ ಐನೂರು ರೂಗಳಿಂದ ಐದು ಸಾವಿರ ರೂಗಳವರೆಗೆ ವಿಸ್ತರಿಸಿದೆ.

ಅಕ್ರಮ ಸಕ್ರಮಗಳ ನಡುವೆ

ಕರ್ನಾಟಕದ ಪ್ರಸಕ್ತ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಈವರೆಗೂ 239.52 ಕೋಟಿ ರೂ ಮೌಲ್ಯದ ಅಕ್ರಮ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 79.51 ಕೋಟಿ ರೂ ನಗದು, 18.71 ಕೋಟಿ ರೂ ಮೌಲ್ಯದ ವಸ್ತುಗಳು, 47.93 ಕೋಟಿ ರೂ ಮೌಲ್ಯದ ಮದ್ಯ, 15.82 ಕೋಟಿ ರೂ ಮೌಲ್ಯದ ಮಾದಕ ವಸ್ತು, 73.46 ಕೋಟಿ ರೂ ಮೌಲ್ಯದ ಚಿನ್ನ ಮತ್ತು 4.06 ಕೋಟಿ ರೂ ಮೌಲ್ಯದ ಬೆಳ್ಳಿ ಈವರೆಗೂ ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಆಮಿಷದ ಸರಕುಗಳ ಮೌಲ್ಯ. (ಪ್ರಜಾವಾಣಿ ವರದಿ 20-4-23) ಈ ವಶಪಡಿಸಿಕೊಂಡ ಹಣ ಮತ್ತು ವಸ್ತುಗಳು ಏನಾಗುತ್ತವೆ ? ಬಹುಶಃ ನಾಗರಿಕರು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಶೋಧಿಸುವುದೂ ಇಲ್ಲ. ಸರ್ಕಾರದ ಖಜಾನೆ ಸೇರುವುದೇನೋ ಎಂಬ ಭ್ರಮೆಯೂ ಜನತೆಯಲ್ಲಿರಬಹುದು. ಆದರೆ ಚುನಾವಣೆಗಳು ಮುಗಿದ ನಂತರ, ಜಪ್ತಿ ಮಾಡಲಾದ ವಸ್ತುಗಳು ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿದರೆ ಇದು ಪುನಃ ಗೂಡು ಸೇರುವ ಸಾಧ್ಯತೆಗಳೇ ಹೆಚ್ಚು.

ಪ್ರಜ್ಞಾವಂತ ನಾಗರಿಕರು ಈ ವಶಪಡಿಸಿಕೊಂಡ ವಸ್ತುಗಳ ಭವಿಷ್ಯವನ್ನು ಕುರಿತು ಯೋಚಿಸಬೇಕಿಲ್ಲ. ಆದರೆ ಅಮಾಯಕ ಮತದಾರರನ್ನು ಭ್ರಷ್ಟಗೊಳಿಸುವ ಒಂದು ಮತಕ್ಕೆ ಇಂತಿಷ್ಟು ಹಣ ನೀಡುವ ಅಥವಾ ವಸ್ತುವನ್ನು ನೀಡುವ ಭ್ರಷ್ಟ ಪರಂಪರೆಯ ಬಗ್ಗೆ ಗಂಭೀರ ಆಲೋಚನೆ ಅತ್ಯವಶ್ಯ. ಪ್ರತಿಯೊಂದು ಚುನಾವಣೆ ನಡೆಯುವಾಗಲೂ ಆಡಳಿತ ವ್ಯವಸ್ಥೆಯಿಂದ, ಚುನಾವಣಾ ಆಯೋಗದಿಂದ ಮತ್ತು ಸರ್ಕಾರಗಳಿಂದಲೂ ಪ್ರಾಮಾಣಿಕ, ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗಳು ನಡೆಯುತ್ತವೆ ಎಂಬ ಆಶ್ವಾಸನೆ ಕೇಳಿಬರುತ್ತದೆ. ಈ ಆಶ್ವಾಸನೆಗಳ ನಡುವೆಯೇ ಅಪರಾದರ್ಶಕ ಚಟುವಟಿಕೆಗಳು, ತೆರೆಯ ಹಿಂದಿನ ಕೃತ್ಯಗಳು ಒಂದು ಭ್ರಷ್ಟ ಪರಂಪರೆಯನ್ನು ಪೋಷಿಸುತ್ತಲೇ ಇರುತ್ತವೆ. ಇದು ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಾದ ಜಟಿಲ ಸವಾಲು.

ಮತದಾರ ಜಾಗೃತಿಯ ಸಂದರ್ಭದಲ್ಲಿ ಮತದಾರರನ್ನು ಯಾವುದೇ ಆಮಿಷಗಳಿಗೆ ಒಲಿಯದೆ ತಮ್ಮ ಸಾಂವಿಧಾನಿಕ ಕರ್ತವ್ಯ ಎಂದು ಭಾವಿಸಿ ಮತ ಸ್ವ ಇಚ್ಚೆಯನುಸಾರ ಮತದಾನ ಮಾಡುವಂತೆ ಅರಿವು ಮೂಡಿಸಲಾಗುತ್ತದೆ. ಈ ಅಭಿಯಾನದ ನಡುವೆ ಮತದಾರರು ಹಣ ಪಡೆದು ಅಥವಾ ಹಣದಾಸೆಗೆ ಬಲಿಯಾಗಿ ಮತದಾನ ಮಾಡುತ್ತಾರೆ ಎಂಬ ಅಭಿಪ್ರಾಯವೂ ದಟ್ಟವಾಗಿರುತ್ತದೆ. ಆದರೆ ಯಾವೊಬ್ಬ ಮತದಾರನೂ/ಳೂ, ತನಗೆ ಎಷ್ಟೇ ಬಡತನ ಕಷ್ಟ ಕಾರ್ಪಣ್ಯಗಳೇ ಇದ್ದರೂ ಸಹ, ತಾನೇ ಸ್ವ ಇಚ್ಚೆಯಿಂದ ರಾಜಕಾರಣಿಗಳ ಬಳಿ ಹೋಗಿ “ ನೀವು ಇಷ್ಟು ಕೊಟ್ಟರೆ ನಿಮಗೆ ಮತ ನೀಡುತ್ತೇನೆ ” ಎಂದು ಹೇಳುವುದಿಲ್ಲ. ವ್ಯತಿರಿಕ್ತವಾಗಿ ರಾಜಕೀಯ ನಾಯಕರೇ, ʼಸಂಭಾವ್ಯ ಜನಪ್ರತಿನಿಧಿʼ ಗಳೇ ಮನೆಮನೆಗೆ ತೆರಳಿ ಪ್ರತಿಯೊಂದು ಮತಕ್ಕೂ ಒಂದು ಮೌಲ್ಯ ನಿಗದಿಪಡಿಸಿ ಹಂಚುತ್ತಾರೆ. “ಪವಿತ್ರ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ” ಎಂಬ ಉದಾತ್ತ ಚಿಂತನೆಯ ಆಗ್ರಹದ ಹಿನ್ನೆಲೆಯಲ್ಲಿ ನೋಡಿದಾಗ, ಮತದಾನದ ವಾಸ್ತವಿಕ ಮೌಲ್ಯವನ್ನೇ ಅರಿಯದ ಬೃಹತ್‌ಜನಸಮೂಹಗಳಿಗೆ ಹಣದ ಅಥವಾ ಭೌತಿಕ ಆಮಿಷಗಳನ್ನು ಒಡ್ಡುವ ಮೂಲಕ ಇಲ್ಲಿ ಮತಗಳನ್ನು ಖರೀದಿಸುವ ಪ್ರಯತ್ನ ನಡೆಯುತ್ತದೆ. ಹಾಗಾಗಿ ಇದು ಮತದಾರನ ಆಯ್ಕೆಯ, ಮತಗಳ ಮಾರಾಟ ಎನ್ನುವುದಕ್ಕಿಂತಲೂ ಆಮಿಷಗಳ ನಡೆಯುವ ಮತಗಳ ಖರೀದಿ ಎಂದೇ ಭಾವಿಸಬೇಕಾಗುತ್ತದೆ. ಈ ಖರೀದಿ ಪ್ರಕ್ರಿಯೆಯನ್ನು ವಿರೋಧಿಸುವ ಆತ್ಮಸ್ಥೈರ್ಯವನ್ನು ಮತದಾರರಲ್ಲಿ ತುಂಬಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ “ಮತದಾರರು ಭ್ರಷ್ಟರಾಗುತ್ತಿದ್ದಾರೆ” ಎಂಬ ಸಾರ್ವತ್ರೀಕರಿಸಲಾದ ಆರೋಪವನ್ನು ಗಮನಿಸಿದಾಗ ಭ್ರಷ್ಟತೆಯ ಮೂಲ ಇರುವುದು ಖರೀದಿದಾರರಲ್ಲೇ ಹೊರತು ಮಾರಾಟ ಮಾಡುವವರಲ್ಲಿ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ʼಸಂಭಾವ್ಯ ಜನಪ್ರತಿನಿಧಿಗಳುʼ ಚುನಾವಣಾ ಪೂರ್ವದಲ್ಲಿ ಹಂಚುವ ಆಮಿಷಗಳನ್ನು ಚುನಾವಣೆಯ ನಂತರದ ಅಧಿಕಾರ ಹಂಚಿಕೆಯ ಪ್ರಕ್ರಿಯೆಯಲ್ಲಿ ಮರಳಿ ಪಡೆಯಲು ಸಜ್ಜಾಗಿರುತ್ತಾರೆ. ಹಾಗಾಗಿಯೇ ಸರ್ಕಾರ ರಚಿಸುವಾಗ ಬಹುಮತಕ್ಕಾಗಿ ನಡೆಯುವ ಶೋಧದಲ್ಲಿ ಪಕ್ಷಾಂತರ ಪ್ರಹಸನಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತವೆ. ಅಧಿಕಾರ ಕೇಂದ್ರಕ್ಕೆ ಹತ್ತಿರವಾಗುವ ಮೂಲಕ ತಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಬ್ಯಾಲೆನ್ಸ್‌ಷೀಟ್‌ಗಳು ಸಿದ್ಧವಾಗುತ್ತಿರುತ್ತವೆ. ಸಮಸ್ತ ಮತದಾರರು ಒಂದು ನಯಾಪೈಸೆ ಸ್ವೀಕರಿಸದೆ, ಪ್ರಾಮಾಣಿಕರಾಗಿ ತಮ್ಮ ಸ್ವ ಇಚ್ಚೆಯಿಂದ ಮತದಾನ ಮಾಡಿದ್ದರೂ, ಈ ಪ್ರಾಮಾಣಿಕ ಮತಗಳನ್ನು ಪಡೆದ ʼ ಜನ ಪ್ರತಿನಿಧಿಗಳು ʼ ಅಧಿಕಾರ ಲಾಲಸೆಯಿಂದ ತನ್ನ ಪೂರ್ವಾಶ್ರಮವನ್ನು ತೊರೆದು, ಹುದ್ದೆಗಳಿಗಾಗಿ, ಪದವಿಗಳಿಗಾಗಿ ಹೊಸ ಚಿಹ್ನೆ-ಲಾಂಛನ-ಬಾವುಟವನ್ನು ಹಿಡಿಯಲು ತಯಾರಾಗಿರುತ್ತಾರೆ. ಇಲ್ಲಿ ಮತಗಳ ಮಾರಾಟ ಸಗಟು ಮಾರುಕಟ್ಟೆಯ ದರದಲ್ಲಿ ನಿಗದಿಯಾಗುತ್ತದೆ.

ಸಾಂವಿಧಾನಿಕ ಅರಿವು ಮತ್ತು ಪ್ರಜ್ಞೆ

ಸಂವಿಧಾನ ರಚನೆಯ ಸಂದರ್ಭದಲ್ಲಿ “ ಒಂದು ಮತಕ್ಕೆ ಒಂದು ಮೌಲ್ಯ ” ಎಂಬ ಉದಾತ್ತ ಚಿಂತನೆಯನ್ನು ಸ್ವತಂತ್ರ ಭಾರತಕ್ಕೆ ನೀಡಿದಾಗ, ಡಾ. ಬಿ. ಆರ್.‌ಅಂಬೇಡ್ಕರ್‌ಮತ್ತಿತರ ಸ್ವಾತಂತ್ರ್ಯ ಪೂರ್ವದ ನಾಯಕರಿಗೆ ಬಹುಶಃ ಮುಂದೊಂದು ದಿನ ಈ ಮೌಲ್ಯದ ಮೌಲ್ಯೀಕರಣ ಭೌತಿಕ/ಆರ್ಥಿಕ/ನಗದು ಸ್ವರೂಪವನ್ನು ಪಡೆಯುತ್ತದೆ ಎಂಬ ಊಹೆಯೂ ಇರಲಿಕ್ಕಿಲ್ಲ. ಆದರೆ ಇದು ವರ್ತಮಾನದ ವಾಸ್ತವ. ಮತದಾರ ಜಾಗೃತಿಯ ಅಭಿಯಾನದ ಸಂದರ್ಭದಲ್ಲಿ ನಾವು ನೆನಪಿಡಬೇಕಾಗಿರುವುದು ಈ ವಾಸ್ತವವನ್ನು. ಸರ್ಕಾರಿ ಕಚೇರಿಗಳಲ್ಲಿ ತಮ್ಮ ಸಾಂವಿಧಾನಿಕ ಹಕ್ಕು- ಸೌಲಭ್ಯ-ಸವಲತ್ತು ಪಡೆಯುವುದಕ್ಕೂ ಹಣ ನೀಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಾಮಾನ್ಯ ನಾಗರಿಕನಿಗೆ ಐದು ವರ್ಷಕ್ಕೊಮ್ಮೆ ಹಣ ಪಡೆದು ತನ್ನ ಬಳಿ ಇರುವುದನ್ನು ಕೊಡುವ ಅವಕಾಶ ಲಭಿಸುತ್ತದೆ. ಬೇಡಿಕೆ ಆಧಾರಿತ ಆರ್ಥಿಕತೆಯನ್ನು ನಿರ್ಲಕ್ಷಿಸಿ ಪೂರೈಕೆ ಆಧಾರಿತ ಆರ್ಥಿಕತೆಯನ್ನೇ ಸರ್ಕಾರಗಳು ಪ್ರಚೋದಿಸುತ್ತಿರುವುದರಿಂದ ಶ್ರೀಸಾಮಾನ್ಯನಿಗೆ ನಿತ್ಯ ಜೀವನದ ಖರ್ಚಿಗೂ ಹಣ ಸಾಲುತ್ತಿಲ್ಲ ಎನ್ನುವ ವಾಸ್ತವ ಸನ್ನಿವೇಶವನ್ನು ಅರ್ಥಮಾಡಿಕೊಂಡರೆ , ಹಣ ಅಥವಾ ನಗದು ಏಕೆ ಜನಸಾಮಾನ್ಯರನ್ನು ಆಕರ್ಷಿಸುತ್ತದೆ ಎಂಬ ವಾಸ್ತವವನ್ನೂ ಅರ್ಥಮಾಡಿಕೊಳ್ಳಬಹುದು. ಶ್ರೀಸಾಮಾನ್ಯನ ಈ ಅನಿವಾರ್ಯತೆಯೇ ಅಧಿಕಾರ ರಾಜಕಾರಣದ ಫಲಾನುಭವಿಗಳ ಬಂಡವಾಳವೂ ಆಗುತ್ತದೆ.

ಇಷ್ಟೆಲ್ಲಾ ಅಪಸವ್ಯಗಳ ನಡುವೆಯೇ ಮತದಾರ ಜಾಗೃತಿ ನಮ್ಮ ಆದ್ಯತೆಯಾಗಬೇಕಿದೆ. ಕೇವಲ ಹಣಕ್ಕಾಗಿ ಮಾರಾಟವೊಂದೇ ಅಲ್ಲ, ಜಾತಿ-ಮತ-ಧರ್ಮಗಳ ಅಸ್ಮಿತೆಗಳೂ, ಸುಳ್ಳು ಆಶ್ವಾಸನೆಗಳೂ, ಪೊಳ್ಳು ಭರವಸೆಗಳೂ ಸಹ ಆಮಿಷಗಳಂತೆಯೇ ಬಳಕೆಯಾಗುತ್ತವೆ. ಶ್ರೀಸಾಮಾನ್ಯನ ನಿತ್ಯ ದುಡಿಮೆಯ ಬದುಕಿಗೆ ಯಾವುದೇ ರೀತಿಯಲ್ಲೂ ಅನಿವಾರ್ಯವಲ್ಲದ ಈ ಅಸ್ಮಿತೆಗಳು ಚುನಾವಣೆಯ ಸಂದರ್ಭದಲ್ಲಿ ಆತನನ್ನು/ಆಕೆಯನ್ನು ಭಾವನಾತ್ಮಕವಾಗಿ ಬಂಧಿಸುವ ಸರಪಳಿಗಳಾಗಿ ಪರಿಣಮಿಸುತ್ತವೆ. ಆದರೆ ಇದೇ ಶ್ರೀಸಾಮಾನ್ಯನು ಶೋಷಣೆಗೊಳಗಾದಾಗ, ಅನ್ಯಾಯಕ್ಕೊಳಗಾದಾಗ, ಅವಕಾಶವಂಚಿತರಾದಾಗ ಈ ಅಸ್ಮಿತೆಗಳೆಲ್ಲವೂ ಕಣ್ಮರೆಯಾಗಿರುತ್ತವೆ. ಏಕೆಂದರೆ ಬಂಡವಾಳ-ಮಾರುಕಟ್ಟೆ ಮತ್ತು ಔದ್ಯಮಿಕ ಹಿತಾಸಕ್ತಿಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಎಲ್ಲವನ್ನೂ ಹಿಮ್ಮೆಟ್ಟಿಸುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜಕಾರಣವೂ ಔದ್ಯಮೀಕರಣಕ್ಕೊಳಗಾಗಿರುವುದರಿಂದ, ಇದೇ ಮಾರುಕಟ್ಟೆ ನೀತಿಗಳೇ ರಾಜಕೀಯ ನೀತಿಗಳಾಗಿಯೂ ಪರಿಣಮಿಸುತ್ತವೆ.

ನಾವು ಜಾಗೃತಗೊಳಿಸಬೇಕಿರುವುದು ಕೇವಲ ಮತದಾರರನ್ನಷ್ಟೇ ಅಲ್ಲ. ಇಡೀ ಸಮಾಜವನ್ನೇ ಜಾಗೃತಗೊಳಿಸಬೇಕಿದೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಭವಿಷ್ಯದ ತಲೆಮಾರುಗಳಿಗಾಗಿ ಸುಸ್ಥಿತಿಯಲ್ಲಿ ಕಾಪಾಡಬೇಕಾದರೆ ಈ ಜಾಗೃತಿ ಅಭಿಯಾನ ಅತ್ಯವಶ್ಯ.

Tags: assembly electionBJPcmbommaiCongress PartyDKShivakumarElection CommissionElection Commission of IndiaHDDhdkumraswamyJDS KarnatakaKarnataka PoliticskarnatkanewslatestnewsModiPMModirahulgandhisiddaramaiahನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ..!

Next Post

ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಕಿರುಕುಳ ಆರೋಪ: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ದೂರು..!

Related Posts

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ
ಅಂಕಣ

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

by ಪ್ರತಿಧ್ವನಿ
April 12, 2026
0

-ನಾ ದಿವಾಕರ ( PUC ರಿಸಲ್ಟ್ ಬಂದಿದೆ. ಹೆಚ್ಚಿನ ಮಾರ್ಕ್ಸ್ ತೆಗೆದುಕೊಂಡು ಪಾಸ್ ಆದ ವಿದ್ಯಾರ್ಥಿಗಳನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ, ಆ ಮೂಲಕ ಫೇಲಾದವರ, ಕಡಿಮೆ...

Read moreDetails
ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

April 7, 2026
ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

April 6, 2026
Next Post
ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಕಿರುಕುಳ ಆರೋಪ: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ದೂರು..!

ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಕಿರುಕುಳ ಆರೋಪ: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ದೂರು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada