ನಂಜನಗೂಡಿನಲ್ಲಿರುವ ಶ್ರೀರಾಮೇಶ್ವರ ದೇವಾಲಯ ಮೂಲಭೂತ ಸೌಕರ್ಯಕ್ಕೆ ಭಕ್ತರ ಒತ್ತಾಯ ಮಾಡಿದ್ದಾರೆ ಎಂದು ಶನಿವಾರ (ಸೆಪ್ಟೆಂಬರ್ 9) ವರದಿಯಾಗಿದೆ.
ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ದೇಬೂರು ಗ್ರಾಮದ ಶ್ರೀರಾಮೇಶ್ವರ ದೇವಾಲಯ.
ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ಹೊರ ವಲಯದ ಕಪಿಲಾ ನದಿ ತೀರದಲ್ಲಿರುವ ಎಂಟನೇ ಶತಮಾನದ ಪುರಾತನ ಶ್ರೀ ರಾಮೇಶ್ವರ ಹಾಗೂ ಶ್ರೀ ಕಾಮಾಕ್ಷಿ ಅಮ್ಮನವರ ದೇವಾಲಯವಿದೆ.
ಎಂಟನೇ ಶತಮಾನದಲ್ಲಿ ಶ್ರೀ ಭೀಮರಾಯ ಎಂಬುವವರು ಕಟ್ಟಿಸಿದ ಪುರಾತನ ದೇವಾಲಯ ಎಂಬ ಉಲ್ಲೇಖವಿದೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿ ಅವನತಿಯ ಹಂಚಿನಲ್ಲಿದ್ದ ದೇವಾಲಯವನ್ನು ಇತ್ತೀಚೆಗೆ ಟಿವಿಎಸ್ ಸ್ಕೂಟರ್ ಕಂಪನಿಯವರು ಜೀರ್ಣೋದ್ಧಾರ ಗೊಳಿಸಿ ನಿರ್ವಹಣೆ ಹೊಣೆಹೊತ್ತಿದ್ದಾರೆ.
12 ಮಂದಿ ಅರ್ಚಕರು ತಿಂಗಳಿಗೆ ಒಬ್ಬರಂತೆ ಪಾಳಿ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸುತ್ತ ಮುತ್ತಲ ಗ್ರಾಮಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಾಲಯಕ್ಕೆ ದಿನ ನಿತ್ಯ ಹಾಗೂ ವಿಶೇಷ ದಿನಗಳಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ.
ಆದರೂ ಈ ದೇವಾಲಯಕ್ಕೆ ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆಯಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.
ದೇವಾಲಯಕ್ಕೆ ಬರುವ ಭಕ್ತರಿಗೆ ಮಳೆ ಬಿಸಿಲಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಇದರಿಂದ ಭಕ್ತರಿಗೆ ತೊಂದರೆ ಹಾಗೂ ಕಿರಿಕಿರಿ ಆಗುತ್ತಿದೆ ಹಾಗಾಗಿ ಭಕ್ತರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ ಹಾಗೂ ಅರ್ಚಕರಿಗೆ ವಿಶ್ರಾಂತಿ ಗೃಹದ ಅವಶ್ಯಕತೆ ಇದೆ.
ಅಲ್ಲದೆ ದೇವಾಲಯದ ಕೂಗಳತೆಯಲ್ಲಿರುವ ಮತ್ತೊಂದು ಪುರಾತನ ದೇವಮ್ಮ ದೇವಾಲಯ ಹಾಗೂ ರುದ್ರಪಾದ ಮತ್ತು ಉದ್ಭವ ಬಸವ ಮೂರ್ತಿಗಳಿದ್ದು ಆ ಸ್ಥಳಕ್ಕೆ ಹೋಗಲು ಸಣ್ಣ ಕಿರಿದಾದ ಕಾಲುದಾರಿ ಇದೆ.
ಅವುಗಳ ಜೀರ್ಣೋದರಕ್ಕಾಗಿ ರಸ್ತೆಯ ಅಗತ್ಯವಿದ್ದು ರಸ್ತೆ ನಿರ್ಮಾಣ ಮಾಡಬೇಕಾಗಿದೆ ಮತ್ತು ಭಕ್ತರ ಮುಡಿ ಮತ್ತು ಸ್ನಾನದ ಅನುಕೂಲಕ್ಕಾಗಿ ಕಪಿಲಾ ನದಿ ತೀರದಲ್ಲಿ ಸ್ನಾನಘಟ್ಟ ನಿರ್ಮಾಣ ಆಗಬೇಕಿದೆ.
ಗ್ರಾಮದ ಮುಖ್ಯ ದ್ವಾರದಲ್ಲಿ ಸ್ವಾಗತ ಕಮಾನು ಸೇರಿದಂತೆ ದೇವಾಲಯದ ಮುಂಭಾಗ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಟಾರು ಹಾಕಬೇಕಾಗಿದೆ.
ದೇವಾಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕೆಟ್ಟು ನಿಂತು ಹಾಗಾಗಿ ಕಳ್ಳತನಗಳು ಸಹ ನಡೆಯುತ್ತಿವೆ.
ಹಿಂದಿನ ಶಾಸಕ ಹರ್ಷವರ್ಧನ್ ಅವರು ಸುಮಾರು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇಬೂರಿನಿಂದ ದೇವಾಲಯದವರೆಗೆ ಟಾರ್ ರಸ್ತೆ ಮಾಡಿಸಿದ್ದಾರೆ.
ಈಗಿನ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ದೇವಾಲಯಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯವೂ ಸೇರಿದಂತೆ ಉಳಿದ ಹಾಗೂ ಮುಂದುವರಿದ ಕಾಮಗಾರಿಗಳನ್ನು ಮಾಡಿಸಿ ಕೊಡುವಂತೆ ಅರ್ಚಕರು ಹಾಗೂ ಭಕ್ತರು ಮನವಿ ಮಾಡಿಕೊಂಡಿದ್ದಾರೆ.
ಹಿರಿಯ ಅರ್ಚಕ ಮಹದೇವಪ್ಪ ಮಾತನಾಡಿ ದೇವಾಲಯದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತೆ ಸರ್ಕಾರ ಹಾಗೂ ಶಾಸಕರಲ್ಲಿ ಮನವಿ ಮಾಡಿಕೊಂಡರು.