ರಾಯಚೂರು: ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಅವರ ಪುತ್ರನ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಲಿಂಗಸುಗೂರಿನಲ್ಲಿ ಕೆಲಕಾಲ ಗೊಂದಲ ಉಂಟಾಯಿತು.

ಸಿಎಂ ಮತ್ತು ಡಿಸಿಎಂ ಆಗಮನಕ್ಕಾಗಿ ಲಿಂಗಸುಗೂರಿನ ಹೊರವಲಯದ ರಾಯಚೂರು ರಸ್ತೆಯ ಬಳಿ ಪ್ರತ್ಯೇಕವಾಗಿ ಎರಡು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿತ್ತು. ಸಿಎಂ ಅವರನ್ನು ಸ್ವಾಗತಿಸಲು ಅಧಿಕಾರಿಗಳು ಹೂಗುಚ್ಛಗಳೊಂದಿಗೆ ನಿಗದಿತ ಹೆಲಿಪ್ಯಾಡ್ನಲ್ಲಿ ಕಾಯುತ್ತಿದ್ದರು. ಆದರೆ ಸಿಎಂಗೆ ಮೀಸಲಾಗಿದ್ದ ಹೆಲಿಪ್ಯಾಡ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಇಳಿಯಿತು. ಇದರಿಂದ ಅಧಿಕಾರಿಗಳು ಗೊಂದಲಕ್ಕೀಡಾದರು.
ಸಮನ್ವಯದ ಕೊರತೆಯಿಂದ ಸಿಎಂ ಹೆಲಿಕಾಪ್ಟರ್ ದಾರಿ ತಪ್ಪಿದಂತೆ ಕಲಬುರ್ಗಿ ರಸ್ತೆಯಲ್ಲಿರುವ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಸೇರಿದ ಖಾಸಗಿ ಹೆಲಿಪ್ಯಾಡ್ನಲ್ಲಿ ಇಳಿಯಿತು. ವಿಷಯ ತಿಳಿದ ಅಧಿಕಾರಿಗಳು ತಕ್ಷಣ ಅಲ್ಲಿಗೆ ಧಾವಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿಗದಿತ ಸಮಯಕ್ಕಿಂತ ಮುಂಚೆಯೇ ಆಗಮಿಸಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಸಿಎಂ ಬರುವುದಕ್ಕೂ ಮುನ್ನವೇ ಹುಬ್ಬಳ್ಳಿಗೆ ತೆರಳಿದರು. ಒಟ್ಟಿನಲ್ಲಿ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ ಮತ್ತು ಸಂವಹನ ಕೊರತೆಯಿಂದ ವಿವಿಐಪಿಗಳ ಆಗಮನದ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.





