ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಗಾಲೋಟಕ್ಕೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಬಂದಿರುವ ಬಿಜೆಪಿ ಹಾಗು ಜೆಡಿಎಸ್, ಮೈತ್ರಿ ಮಾಡಿಕೊಂಡು ಚುನಾವಣೆ ಮಾಡಲು ತಯಾರಿ ನಡೆಸಿದೆ. ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ CM ಇಬ್ರಾಹಿಂ, ಬಿಜೆಪಿ ಜೊತೆಗಿನ ಮೈತ್ರಿಗೆ ನನ್ನ ಬೆಂಬಲ ಇಲ್ಲ, ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ನನ್ನ ಸಹಮತ ಬೇಕು ಎಂದಿದ್ದಾರೆ. ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಕುಮಾರಸ್ವಾಮಿ ನಿರ್ಧಾರವೇ ಅಂತಿಮವಲ್ಲ, ಜೆಡಿಎಸ್ಗೆ ನಾನೇ ಅಧ್ಯಕ್ಷ, ವಜಾ ಮಾಡುವುದಿದ್ದರೆ ಮಾಡಲಿ ಎಂದು ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸವಾಲು ಹಾಕಿದ್ದಾರೆ.
INDIAಗೆ ಜೆಡಿಎಸ್ ಬೆಂಬಲ ಘೋಷಿಸಿದ ಸಿಎಂ ಇಬ್ರಾಹಿಂ..!
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಮೈತ್ರಿ ಅಂತಾ ಹೇಳಿದ್ರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ INDIA ಒಕ್ಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ಗೆ ಬೆಂಬಲ ಕೊಡಲು ನಾವು ಸಿದ್ಧ, ನಮ್ಮದು ಜಾತ್ಯತೀತ ಪಕ್ಷ ಎಂದಿದ್ದಾರೆ ಸಿಎಂ ಇಬ್ರಾಹಿಂ. ನಿಜವಾದ JDS ನಮ್ಮದೇ. JDSಗೆ ನಾನೇ ಅದರ ಅಧ್ಯಕ್ಷ, ಯಾರು ತೆಗೆಯೋಕೆ ಆಗೊಲ್ಲ. ನನ್ನನ್ನು ತೆಗೆಯಲು ಮೂರನೇ ಎರಡರಷ್ಟು ಬೆಂಬಲ ಬೇಕು ಎಂದು ಸವಾಲು ಎಸೆದಿದ್ದಾರೆ. ಜೊತೆಗೆ ಬಿಜೆಪಿ ನೇತೃತ್ವದ NDA ಸೋಲಿಸಬೇಕಾದ್ರೆ ಎಲ್ಲಾ ಶಕ್ತಿಗಳು ಒಟ್ಟಾಗಬೇಕು ಎಂದು ಕರೆ ನೀಡಿದ್ದಾರೆ. ಆದರೆ ಅಕ್ಟೋಬರ್ 16ರಂದು ಸಮಾನ ಮನಸ್ಕರ ಸಭೆ ನಡೆಸಿ, ಮುಂದಿನ ನಿರ್ಧಾರ ಮಾಡ್ತೇನೆ ಎಂದಿದ್ದ ಸಿಎಂ ಇಬ್ರಾಹಿಂ ಏಕಾಏಕಿ ದೇವೇಗೌಡರು ಹಾಗು ಕುಮಾರಸ್ವಾಮಿಗೆ ಸವಾಲು ಎಸೆದಿದ್ದು ಯಾಕೆ..? ಸಿಎಂ ಇಬ್ರಾಹಿಂಗೆ ಇಷ್ಟೊಂದು ಶಕ್ತಿ ಬಂದಿದ್ದು ಎಲ್ಲಿಂದ ಅನ್ನೋ ಪ್ರಶ್ನೆ ಎದುರಾಗಿದೆ.

ಕುಮಾರಸ್ವಾಮಿ ಕೂಲ್ ರಿಯಾಕ್ಷನ್ ಹಿಂದಿನ ಮರ್ಮ ಏನು..?
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ನಾವು ನಿಜವಾದ ಜೆಡಿಎಸ್, ನಾವು ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ಹೇಳಿದ ಬಳಿಕವೂ ಕುಮಾರಸ್ವಾಮಿ ಮಾತ್ರ ತುಂಬಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಸಿಎಂ ಇಬ್ರಾಹಿಂ ಹೆಸರು ಹೇಳದೆ ಅವರು ಬಹಳ ಸ್ವತಂತ್ರರು, ಅವರು ಸಭೆ ಮಾಡಿ ಏನು ತೀರ್ಮಾನ ಮಾಡ್ತಾರೆ ನೋಡೋಣ. ಈಗಾಗಲೇ ಕಾರ್ಯಕರ್ತರು, ನಾಯಕರು ಒಂದು ತೀರ್ಮಾನ ಮಾಡಿದ್ದಾರೆ. ಅವರ ತೀರ್ಮಾನ ಕೈಗೊಳ್ಳಲು ಅವರು ಸ್ವತಂತ್ರರಿದ್ದಾರೆ. ಸಿ.ಎಂ ಇಬ್ರಾಹಿಂ ಸಭೆ ಕರೆದಿದ್ದಾರೆ. ಅವರ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಅವರು ಚರ್ಚೆ ಮಾಡಿ ನಿರ್ಧಾರ ಮಾಡಲು ಸ್ವತಂತ್ರರಿದ್ದಾರೆ ಎಂದಿದ್ದಾರೆ. ಅಂದರೆ ಶಾಸಕರು ಸಿಎಂ ಇಬ್ರಾಹಿಂ ಬೆಂಬಲಿಸುವುದಿಲ್ಲ ಎನ್ನುವ ಖಚಿತ ಭರವಸೆಯಲ್ಲಿ ಕುಮಾರಸ್ವಾಮಿ ಇಬ್ರಾಹಿಂ ಏನು ಬೇಕಿದ್ರು ಮಾಡಿಕೊಳ್ಳಲಿ ಎಂದಿದ್ದಾರೆ.
ಇಬ್ರಾಹಿಂಗೆ ಬೆಂಬಲವಾಗಿ ನಿಂತಿದ್ಯಾರು..? ನಿರ್ಧಾರ ಬದಲಾಗಿದ್ಯಾಕೆ..?
ಅಕ್ಟೋಬರ್ 16ರಂದು ಸಭೆ ನಡೆಸಿ ಜೆಡಿಎಸ್ ಪಕ್ಷದಲ್ಲಿ ಇರಬೇಕೋ ಬೇಡ್ವೋ ಅನ್ನೋ ಬಗ್ಗೆ ನಿರ್ಧಾರ ಮಾಡ್ತೇನೆ ಎಂದಿದ್ದರು. ಆದರೆ ಇಂದು ಸಭೆ ನಡೆಸಿದ ಬಳಿಕ ನಾನೇ ಅಧ್ಯಕ್ಷ, ನನ್ನನ್ಜು ವಜಾ ಮಾಡಲು ಸಾಧ್ಯವಿದ್ದರೆ ಮಾಡಲಿ ಎಂದು ಸವಾಲು ಎಸೆಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ನ ಕಾನೂನು ತಂಡ ಕೆಲಸ ಮಾಡಿದೆಯಾ ಅನ್ನೋ ಗುಮಾನಿ ಜೆಡಿಎಸ್ ಕಾರ್ಯಕರ್ತರು ಹಾಗು ನಾಯಕರನ್ನು ಕಾಡುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಅಷ್ಟು ಸುಲಭವಾಗಿ ಜೆಡಿಎಸ್ ಬಿಜೆಪಿ ಜೊತೆಗೆ ಹೋಗುವುದನ್ನು ತಪ್ಪಿಸಲು ರಾಜ್ಯಾಧ್ಯಕ್ಷರನ್ನು ಕಾಂಗ್ರೆಸ್ ಬಳಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕಾನೂನು ಸಂಘರ್ಷಕ್ಕೂ ಕಾರಣ ಆಗಬಹುದು. ಜೆಡಿಎಸ್ ಹಾಗು ಬಿಜೆಪಿ ಮೈತ್ರಿಗೇ ಸಂಕಷ್ಟವನ್ನು ತಂದೊಡ್ಡಬಹುದು. ಆದರೆ ಸಿಎಂ ಇಬ್ರಾಹಿಂ ರಾಜಕಾರಣದಲ್ಲಿ ಭಾಷಣ ಮಾಡಬಹುದು, ಆದರೆ ಮತಗಳಿಸುವ ತಾಕತ್ತು ಇಲ್ಲ ಎನ್ನುವುದನ್ನು ಮಾತನಾಡುತ್ತಿರುವ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಂದ ಸಾಕಷ್ಟು ದೂರ ಸಾಗಬಹುದು.
ಕೃಷ್ಣಮಣಿ