ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಾಖಲಾಗಿದ್ದ 27 ಭೂ ಕಬಳಿಕೆ ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದ್ದು, ಈ ಸಂಬಂಧ ಒಟ್ಟು 200 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 27 ಪ್ರಕರಣಗಳಲ್ಲಿ ತನಿಖೆ ಕೈಗೊಂಡು 25 ಪ್ರಕರಣಗಳಲ್ಲಿ 158 ಎಕರೆ 13 ಗುಂಟೆ ಭೂಮಿ ಹಾಗೂ 9 ಎನ್ಎ ಪ್ಲಾಟ್ಗಳನ್ನು ಮೂಲ ಮಾಲೀಕರಿಗೆ ಮರು ಒಪ್ಪಿಸಲಾಗಿದೆ ಎಂದು ತಿಳಿಸಿದರು. ಉಳಿದ ಎರಡು ಪ್ರಕರಣಗಳಲ್ಲಿ “ಬಿ” ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.
ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಪ್ರಕರಣಗಳ ಸಂಪೂರ್ಣ ತನಿಖೆ ನಡೆಸಿದೆ ಎಂದು ಎಸ್ಪಿ ಹೇಳಿದರು.

ತನಿಖೆಯ ವೇಳೆ, ಆರೋಪಿಗಳಲ್ಲಿ ಕೆಲವರು ಸಣ್ಣಪುಟ್ಟ ಪ್ಲಾಟ್ ಹಾಗೂ ಜಮೀನುಗಳನ್ನು ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರು ಹಾಗೂ ಸಬ್ರಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲಸ ಮಾಡುವ ಬಾಂಡ್ ರೈಟರ್ಗಳಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಇವರು ಭೂಮಿ ಮಾರಾಟ ಮಾಡುವ ವ್ಯಕ್ತಿಗಳು ಯಾರು, ಆ ಭೂಮಿಗಳು ಎಲ್ಲಿವೆ ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಂಚಿತವಾಗಿಯೇ ಸಂಗ್ರಹಿಸುತ್ತಿದ್ದರು ಎಂದು ಹೇಳಿದರು.

ಈ ಗ್ಯಾಂಗ್ಗಳು ಹೆಚ್ಚಾಗಿ ವಯಸ್ಸಾದವರು, ಒಂಟಿಯಾಗಿ ವಾಸಿಸುವವರು ಹಾಗೂ ಊರಿನಿಂದ ದೂರವಿರುವ ಭೂ ಮಾಲೀಕರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದರು. ಬಡ ಹಾಗೂ ನಿರ್ಗತಿಕರನ್ನು ಗುರುತಿಸಿ ಅವರಿಗೆ ಹಣ ಸಹಾಯ ಮಾಡುವ ನೆಪದಲ್ಲಿ ಆಧಾರ್ ಕಾರ್ಡ್ಗಳನ್ನು ಪಡೆದು, ಮೂಲ ಭೂ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡಿ ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸುತ್ತಿದ್ದರು.

ನಂತರ ಈ ನಕಲಿ ದಾಖಲೆಗಳ ಆಧಾರದಲ್ಲಿ ಸಬ್ರಜಿಸ್ಟ್ರಾರ್ ಕಚೇರಿಗಳಲ್ಲಿ ಭೂಮಿ ಖರೀದಿ ಮಾಡಿಸಿಕೊಂಡು, ಸ್ವಲ್ಪ ಹಣ ನೀಡಿ ಉಳಿದ ಹಣವನ್ನು ನಂತರ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದರು. ಕೆಲವೊಮ್ಮೆ ನಕಲಿ ಮಾಲೀಕರಿಂದ ಇತರ ಮುಗ್ಧ ಜನರ ಹೆಸರಿನಲ್ಲಿ ಖರೀದಿ ಮಾಡಿಸಿಕೊಂಡು, ನಂತರ ತಮ್ಮ ಹೆಸರಿನಲ್ಲಿ ಜಮೀನು ವರ್ಗಾವಣೆ ಮಾಡಿಕೊಳ್ಳುತ್ತಿದ್ದ ವಿಧಾನವೂ ಪತ್ತೆಯಾಗಿದೆ ಎಂದು ಎಸ್ಪಿ ವಿವರಿಸಿದರು.
ಖರೀದಿ ಪತ್ರಗಳಲ್ಲಿ ಮೋಸಗಾರರ ಗುಂಪಿನಲ್ಲಿರುವ ಇಬ್ಬರು ಅಥವಾ ಹೆಚ್ಚು ಮಂದಿ ಸಾಕ್ಷಿದಾರರಾಗಿ ಸಹಿ ಮಾಡುತ್ತಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೇ, ನಕಲಿ ಮಾಲೀಕರನ್ನು ಹಳ್ಳಿಗಳಿಗೆ ಮರಳದಂತೆ, ಹೊರ ರಾಜ್ಯಗಳಲ್ಲಿ ಉಳಿಯುವಂತೆ ವ್ಯವಸ್ಥೆ ಮಾಡಲಾಗುತ್ತಿತ್ತು ಎಂಬ ಅಂಶವೂ ಹೊರಬಂದಿದೆ.

ತನಿಖೆಯ ಪ್ರಕಾರ ಸುಧಾಕರ ಸದಾಶಿವ ಕಮಲಾಕರ, ಭೀಮರಾಯ ಚಾಯಪ್ಪ ಕಟ್ಟಿಮನಿ, ಸುಧಾಕರ ಸಿದ್ದಣ್ಣ ಚರಾಟೆ, ಕಾಶೀನಾಥ ಗಂಗಾರಾಮ ರಾಠೋಡ, ದತ್ತಾತ್ರೇಯ ಎಸ್. ಶಿವಶರಣ, ರಫೀಕ ಅಬ್ದುಲ್ ಲತೀಫ ತುರ್ಕಿ, ನಾಗಪ್ಪ ಕೊಲಕಾರ, ಬಾಬುರಾವ ಗಂಗಪ್ಪ ಕೋಳಿ ಹಾಗೂ ಬಾಪು ದೊಂಡಿಬಾ ಕ್ಷೀರಸಾಗರ ಎಂಬವರು ಒಂದಕ್ಕಿಂತ ಹೆಚ್ಚು ಭೂ ಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.












