ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಗುಜರಾತಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತರೂಢ ಬಿಜೆಪಿಯೂ ಬುಧವಾರದಿಂದ ರಾಜ್ಯಾದ್ಯಂತ ‘ಗೌರವ ಯಾತ್ರೆ’ಯನ್ನು ಆರಂಭಿಸಿದೆ. ಪ್ರಮುಖವಾಗಿ ರಾಜ್ಯದ ಬುಡಕಟ್ಟು ಸಮುದಾಯಗಳನ್ನು ಗುರಿಯಾಗಿಸಿ ಈ ಯಾತ್ರೆಯನ್ನುಹಮ್ಮಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಎರಡು ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಇದರ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಎರಡನೇ ಹಂತದ ಮೂರು ಯಾತ್ರೆಗಳ ನೇತೃತ್ವವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಹಿಸಿಕೊಳ್ಳಲಿದ್ದಾರೆ. ಈ ವೇಳೆ ಎಲ್ಲಾ ಕೇಂದ್ರ ಸಚಿವರು ಹಾಗೂ ಬಿಜೆಪಿಯ ಪ್ರಮುಖ ನಾಯಕರು ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಗೋಧ್ರಾ ಗಲಭೆಯ ನಂತರ ಗುಜರಾತಿನಲ್ಲಿ ಬಿಜೆಪಿ ನಡೆಸುತ್ತಿರುವ ಮೂರನೇ ಗೌರವ ಯಾತ್ರೆ ಇದಾಗಿದೆ. ಮೊದಲ ಯಾತ್ರೆ 2002ರ ಗಲಭೆಗಳ ನಂತರ ನಡೆಸಲಾಗಿತ್ತು. ನಂತರ 2017ರಲ್ಲಿ ಪಾಟಿದಾರ್ ಆಂದೋಲನಕ್ಕೆ ಉತ್ತರ ನಿಡುವ ಸಲುವಾಗಿ ಯಾತ್ರೆ ನಡೆಸಲಾಗಿತ್ತು. 2002ರಲ್ಲಿ ಬಿಜೆಪಿಗೆ 127 ಸೀಟುಗಳು ಲಭಿಸಿದ್ದರೆ, 2017ರಲ್ಲಿ 99 ಸೀಟು ಲಭಿಸಿತ್ತು.
ಗುಜರಾತಿನಲ್ಲಿ ನಡೆದಿರುವಂತಹ ಅಭಿವೃದ್ದಿಗಳನ್ನು ಜನರ ಕಾಲಬುಡಕ್ಕೆ ಕೊಂಡೊಯ್ಯಲು ಈಯಾತ್ರೆ ನಡೆಸಲಾಗುತ್ತಿದೆ ಹಾಗೂ ಇದರ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಮತ್ತೆ ಸಂಘಟಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

ಅಭಿವೃದ್ದಿಯ ಮುಖವಾಡಕ್ಕೆ ಗೋಡೆ ಕಟ್ಟಿದ್ದ ಬಿಜೆಪಿ:
ಗುಜರಾತ್ ಮಾಡೆಲ್ ಹೆಸರಿನಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ದೇಸದಲ್ಲಿ ಗುಜರಾತ್ ಮಾದರಿಯ ದ್ವೇಷ ರಾಜಕಾರಣವನ್ನು ಆರಂಭಿಸಿತ್ತು. ಗೋದ್ರಾ ಗಲಭೆಗಳ ನಂತರ ಗುಜರಾತಿನಲ್ಲಿ ಬಿಜೆಪಿ ಪಾರುಪತ್ಯ ಸಾಧಿಸಿದ ಹಾಗೆ, ದೇಶದಲ್ಲಿಯೂ ಹಿಂದೂ-ಮುಸ್ಲಿಂ ನಡುವಿನ ದ್ವೇಷಕ್ಕೆ ‘ಪೆಟ್ರೋಲ್’ ಸುರಿದು ಕುರ್ಚಿಗಾಗಿ ಸಾವಿರಾರು ಅಮಾಯಕರ ಪ್ರಾಣವನ್ನು ಬಲಿ ಪಡೆಯಿತು.
ಇದಕ್ಕಿಂತಲೂ ಮುಖ್ಯವಾಗಿ ಗುಜರಾತ್ ಮಾದರಿಯ ಗುಮ್ಮ ತೋರಿಸಿ ಅಧಿಕಾರಕ್ಕೆ ಬಂದು ಹಿಂದಿನ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ, ಅದೇ ಅಭಿವೃದ್ದಿಗೆ ಗೋಡೆ ಕಟ್ಟಿ ಮುಜುಗರಕ್ಕೆ ಈಡಾಗಿತ್ತು. ತನ್ನದೇ ತವರು ರಾಜ್ಯದ ಅಭಿವೃದ್ದಿಯನ್ನು ವಿಶ್ವ ನಾಯಕರಿಗೆ ತೋರಿಸಲು ಮುಜುಗರಪಟ್ಟುಕೊಂಡ ಮೋದಿ ಹಾಗೂ ಅಮಿತ್ ಶಾ ಈಗ ಯಾವ ಅರ್ಥದಲ್ಲಿ ಗೌರವ ಯಾತ್ರೆಯನ್ನು ನಡೆಸುತ್ತಿದೆ ಎಂಬುದನ್ನು ಪ್ರಶ್ನಿಸಲೇಬೇಕಿದೆ.
ಬುಡಕಟ್ಟು ಜನಾಂಗ ಹಾಗೂ ಹಿಂದುಳಿದ ವರ್ಗದವರನ್ನು ಗುರಿಯಾಗಿಸಿ ಅವರ ಮತಗಳನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ಹುನ್ನಾರದ ಭಾಗವೆಂದು ಈ ಗೌರವ ಯಾತ್ರೆಯನ್ನು ಕರೆಯಬಹುದು. ಇಲ್ಲಿಯವರೆಗೆ ಅಭಿವೃದ್ದಿಯ ದೃಷ್ಟಿಕೋನದಿಂದ ದೂರವೇ ಉಳಿದಿದ್ದ ಬುಡಕಟ್ಟು ಜನಾಂಗವನ್ನು ಓಲೈಸಿ ಈಗ ಅವರ ಮತಗಳನ್ನು ಪಡೆಯಲು ಬಿಜೆಪಿ ಹೊರಟಿದೆ. 2002ರ ಬಳಿಕ ಸತತ ಗೆಲುವು ಕಂಡಾಗ ಬಿಜೆಪಿಗೆ ಬುಡಕಟ್ಟು ಜನಾಂಗಗಳ ನೆನಪು ಇರಲಿಲ್ಲವೇ? ಬರೋಬ್ಬರಿ ಇಪ್ಪತ್ತು ವರ್ಷಗಳ ಸತತ ಅಧಿಕಾರದ ಬಳಿಕ ಬುಡಕಟ್ಟು ಜನರು ನೆನಪಾದರೇ? ಕೈಗಾರಿಕಾ ಅಭಿವೃದ್ದಿಯ ಹೆಸರಿನಲ್ಲಿ, ಪ್ರತಿಮೆಗಳ ನಿರ್ಮಾಣದ ಹೆಸರಿನಲ್ಲಿ ದೇಶದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವಾಗ ಅವರ ಕುರಿತು ಇಲ್ಲದಿದ್ದ ಪ್ರೀತಿ ಈಗ ಏಕಾಏಕಿ ಏಕೆ ಹುಟ್ಟಿಕೊಂಡಿತು? ಎಂಬುದು ಕೂಡಾ ಯಕ್ಷ ಪ್ರಶ್ನೆ.
ಇವೆಲ್ಲಾ ಅಂಶಗಳನ್ನು ಗಮನಿಸಿದಾಗ ಬಿಜೆಪಿ ನಡೆಸಲು ಹೊರಟಿರುವ ‘ಗೌರವ ಯಾತ್ರೆ’ ಗುಜರಾತಿನ ಬುಡಕಟ್ಟು ಹಾಗೂ ಹಿಂದುಳಿದ ವರ್ಗದವರಿಗೆ ಮಾಡುತ್ತಿರುವ ಅಗೌರವವಷ್ಟೇ. ಈ ಯಾತ್ರೆಯ ಮೂಲಕ ಸ್ವಹಿತಾಸಕ್ತಿ ಹಾಗೂ ತನ್ನ ಸ್ವಪ್ರತಿಷ್ಟೆ ಮತ್ತು ಗೌರವವನ್ನು ಹುಡಕಲು ಹೊರಟಿರುವ ಬಿಜೆಪಿ ನಿಜಾರ್ಥದಲ್ಲಿ ಬುಡಕಟ್ಟು ಜನರಿಗೆ ಅಗೌರವವನ್ನು ತೋರಿಸುತ್ತಿದೆ. ಚುನಾವಣೆ ಗೆಲ್ಲಲಷ್ಟೇ ಹುಟ್ಟಿಕೊಂಡಿರುವ ಪಕ್ಷ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.