ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಎದುರಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ತನ್ನ 27 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿಯಲ್ಲಿ ಬಿಜೆಪಿ ಚುನಾವಣೆಗೆ ಕಣಕ್ಕಿಳಿಯಲಿದೆ.

ಪ್ರಕಟಿತ ಪಟ್ಟಿಯಲ್ಲಿ ಐದು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ತಮಿಳಿಸೈ ಸೌಂದರರಾಜನ್, ವನತಿ ಶ್ರೀನಿವಾಸನ್, ಕೀರ್ತಿಕಾ ಶಿವಕುಮಾರ್, ಕವಿತಾ ಶ್ರೀಕಾಂತ್ ಹಾಗೂ ವಿಜಯಧರಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಈ ಬಾರಿ ಕಣಕ್ಕಿಳಿಸದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಅಣ್ಣಾಮಲೈ ಅವರನ್ನು ಸ್ಪರ್ಧೆಗೆ ಇಳಿಸಲು ಪಕ್ಷದ ಒಳಮಟ್ಟದಲ್ಲಿ ಚರ್ಚೆಗಳು ನಡೆದಿದ್ದರೂ, ಅವರು ಸ್ವತಃ ಸ್ಪರ್ಧಿಸಲು ನಿರಾಕರಿಸಿದ್ದಾಗಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ಮೈತ್ರಿ ಪಾಲುದಾರ ಎಐಎಡಿಎಂಕೆ ವಿರುದ್ಧ ಸೀಟು ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಬಿಜೆಪಿಗೆ ಸೀಮಿತ ಪ್ರಭಾವವಿರುವ ಕ್ಷೇತ್ರಗಳನ್ನು ಮಾತ್ರ ನೀಡಲಾಗಿದೆ ಎಂದು ಆರೋಪಿಸಿದ್ದರು. 2021ರ ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಎರಡೂ ಬಾರಿ ಸೋಲು ಅನುಭವಿಸಿದ್ದರು.

ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ಎಂ. ರಾಜಸಿಂಹ ಮಹೀಂದ್ರ (ಅವಡಿ), ತಮಿಳಿಸೈ ಸೌಂದರರಾಜನ್ (ಮೈಲಾಪುರ), ನಾಗೇಶ್ ಕುಮಾರ್ (ಥಲ್ಲಿ), ಸಿ. ಎಲುಮಲೈ (ತಿರುವಣ್ಣಾಮಲೈ) ಹಾಗೂ ಎಸ್.ಡಿ. ಪ್ರೇಮಕುಮಾರ್ (ರಾಶಿಪುರಂ) ಸೇರಿದಂತೆ ಹಲವರು ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಎಲ್. ಮುರುಗನ್ ಅವನಶಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ವನತಿ ಶ್ರೀನಿವಾಸನ್ (ಕೊಯಮತ್ತೂರು ಉತ್ತರ), ಎಸ್. ತಂಗರಾಜ್ (ತಿರುಪ್ಪೂರು), ಕೀರ್ತಿಕಾ ಶಿವಕುಮಾರ್ (ಮೊಡಕುರಿಚಿ) ಸೇರಿದಂತೆ ಹಲವು ನಾಯಕರು ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಪ್ರಚಾರ ಚಟುವಟಿಕೆಗಳಿಂದ ದೂರ ಉಳಿದಿದ್ದ ಅಣ್ಣಾಮಲೈ ಅವರಿಗೆ ಟಿಕೆಟ್ ನೀಡದಿರುವುದು, ರಾಜ್ಯ ಬಿಜೆಪಿಯ ಒಳರಾಜಕೀಯದ ಬಗ್ಗೆ ಚರ್ಚೆಗಳಿಗೆ ಕಾರಣವಾಗಿದೆ. ಇದರಿಂದಾಗಿ ಪಕ್ಷದ ಪ್ರಮುಖ ನಾಯಕನೊಬ್ಬರನ್ನು ಈ ಬಾರಿ ಚುನಾವಣಾ ಕಣದಿಂದ ದೂರ ಇಡಲಾಗಿದೆ ಎನ್ನಲಾಗುತ್ತಿದೆ.






