ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಮೂಹಿಕ ಅತ್ಯಾಚಾರ ಸಂಬಂಧಿಸಿದಂತೆ ಬಿಜೆಪಿ ನಾಯಕರ ಸಾಲು ಸಾಲು ವಿವಾದಾತ್ಮಕ ಹೇಳಿಕೆಗಳು ಮುಂದುವರಿದಿದ್ದು, ಇದೀಗ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಉಡಾಫೆ ಮಾತನಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ಗ್ಯಾಂಗ್ ರೇಪ್ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು , ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು ಹೇಳುವ ಮೂಲಕ ಸಂಸದ ಜಿಎಂ ಸಿದ್ದೇಶ್ವರ್ ಉಡಾಫೆ ಮಾತು ಆಡಿದ್ದಾರೆ. ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಏನಿದ್ರೂ ಕೇಳಿ. ಸಮಸ್ಯೆ ಇದ್ದರೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳ್ತೇನೆ. ಅದನ್ನು ಬಿಟ್ಟು ಎಲ್ಲೆಲ್ಲಿಯದ್ದೋ ಕೇಳಿದರೆ ಹೇಗೆ ಎಂದು ಸಂಸದರು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ.
ಮೈಸೂರು ರೇಪ್ ಬಗ್ಗೆ ಕೇಳಬಾರದು. ಬೇರೆ ಇದ್ದರೆ ಕೇಳು’. ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಬ್ಯುಸಿ ಇರುತ್ತೇನೆ. ರಾತ್ರಿ 11 ಗಂಟೆಗೆ ಆಗುತ್ತೆ ಮನೆಗೆ ಬರಲು. ಪೇಪರ್ ಓದೋಕೆ ಆಗೋಲ್ಲ. ಬೇರೆ ವಿಚಾರದ ಬಗ್ಗೆ ಏನು ಗೊತ್ತಾಗಲ್ಲ. ನೀವು ಏನೇನೋ ಬಿತ್ತರಿಸುತ್ತೀರಾ. ಅದನ್ನೆಲ್ಲಾ ನೋಡಲು ಆಗುತ್ತಾ. ಯಾರಾದರೂ ಹೇಳಿದರೆ ಕೇಳುತ್ತೇನೆ ಅಷ್ಟೇ ಎಂದು ಹೇಳುವ ಮೂಲಕ ಉಡಾಫೆ ರೀತಿ ವರ್ತಿಸಿದ್ದರು.
ಇನ್ನು, ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ಕೇಳಿದಾಗಲೂ ಸೈಕಲ್ ನಲ್ಲಿ ಓಡಾಡಿ ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದ ಸಿದ್ದೇಶ್ವರ್ ಮತ್ತೆ ಅದೇ ರೀತಿಯ ವರ್ತನೆ ತೋರಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ.