ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆ ವಿಷಯ ಬೂದಿ ಮುಚ್ಚಿದ ಕೆಂಡದಂತೆ ತೆರೆಮರೆಯಲ್ಲಿ ಇರುವಾಗಲೇ, ಕೇಂದ್ರ ಸಂಪುಟ ವಿಸ್ತರಣೆ ಮತ್ತು ಸಚಿವ ಶ್ರೀರಾಮುಲು ಆಪ್ತ ಸಹಾಯಕನ ಲಂಚಾವತಾರ ಮುನ್ನೆಲೆಗೆ ಬಂದಿದೆ.

ಒಂದು ಕಡೆ ಬಿಜೆಪಿಯ ಭಿನ್ನಮತೀಯರು, ತಟಸ್ಥರ ಬಣದವರ ಕಣ್ಣು ದೆಹಲಿಯತ್ತ ನೆಟ್ಟಿದ್ದರೆ, ಯಡಿಯೂರಪ್ಪ ಬಣದ ಕಣ್ಣು ಸಚಿವ ಶ್ರೀರಾಮುಲು ಆಪ್ತ ಸಹಾಯಕನತ್ತ ನೆಟ್ಟಿವೆ. ಕೇಂದ್ರ ಸಂಪುಟ ವಿಸ್ತರಣೆಯ ವೇಳೆ ರಾಜ್ಯದಿಂದ ತುಂಬಬೇಕಾದ ಎರಡು ಸಚಿವ ಸ್ಥಾನಗಳಿಗೆ ವರಿಷ್ಠರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು, ಕೇವಲ ಆ ಅದೃಷ್ಟವಂತ ಸಂಸದರ ಭವಿಷ್ಯವನ್ನು ಮಾತ್ರವಲ್ಲ; ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆಯ ವಿಷಯಕ್ಕೂ ಒಂದು ಇತಿಶ್ರೀ ಹಾಡಲಿದೆ ಎನ್ನುವ ಕಾರಣಕ್ಕೆ ಎಲ್ಲರ ಕಣ್ಣು ಇದೀಗ ದೆಹಲಿ ವರಿಷ್ಠರ ಕಡೆ ನೆಟ್ಟಿವೆ.
ರಾಜ್ಯದ ಸಂಸದರ ಪೈಕಿ ಬಿ ವೈ ರಾಘವೇಂದ್ರ, ಶಿವಕುಮಾರ್ ಉದಾಸಿ, ಪ್ರತಾಪ್ ಸಿಂಹ ಅವರ ಹೆಸರುಗಳು ಕೇಂದ್ರ ಸಚಿವ ಸಂಪುಟ ಸೇರುವವರ ಸಾಲಿನಲ್ಲಿ ಕೇಳಿಬರುತ್ತಿವೆ. ಅದರಲ್ಲೂ ಈ ಬಾರಿ ರಾಜ್ಯದ ಯುವ ಸಂಸದರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ಮಾತು ಕಳೆದ ಎರಡು ತಿಂಗಳಿಂದ ಚಾಲ್ತಿಯಲ್ಲಿದ್ದು, ಆ ಹಿನ್ನೆಲೆಯಲ್ಲಿ ಹಿರಿತನ ಮತ್ತು ಅನುಭವದ ಹಿನ್ನೆಲೆಯಲ್ಲಿ ಈ ಮೂವರ ಹೆಸರುಗಳು ಮುಂಚೂಣಿಯಲ್ಲಿವೆ.

ಈ ನಡುವೆ, ರಾಜ್ಯದ ನಾಯಕತ್ವ ಬದಲಾವಣೆಯೊಂದಿಗೆ ಕೇಂದ್ರ ಸಂಪುಟದ ವಿಷಯ ತಳಕುಹಾಕಿಕೊಂಡ ಬಳಿಕ, ಹೊಸ ಲೆಕ್ಕಾಚಾರಗಳು ಚಾಲ್ತಿಗೆ ಬಂದಿದ್ದವು. ಬಿ ಎಸ್ ಯಡಿಯೂರಪ್ಪ ಬದಲಾವಣೆಗೆ ತೀರ್ಮಾನ ಮಾಡಿರುವ ಪಕ್ಷದ ವರಿಷ್ಠರು, ಸಿಎಂ ಸ್ಥಾನ ಬಿಟ್ಟುಕೊಡಲು ಯಡಿಯೂರಪ್ಪ ಕುಟುಂಬದವರಿಗೆ ಕೇಂದ್ರ ಸಂಪುಟ ಸಚಿವ ಸ್ಥಾನ ಮತ್ತು ರಾಜ್ಯದಲ್ಲಿ ಮತ್ತೊಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಹೊಂದಾಣಿಕೆ ಸೂತ್ರ ಮಂಡಿಸಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ವಿಸ್ತರಣೆಯ ವೇಳೆ ಯಡಿಯೂರಪ್ಪ ಹಿರಿಯ ಪುತ್ರ ಸಂಸದ ಬಿ ವೈ ರಾಘವೇಂದ್ರ ಕೇಂದ್ರ ರೈಲ್ವೆ ಸಚಿವರಾಗಲಿದ್ದಾರೆ. ಅವರ ಮತ್ತೊಬ್ಬ ಪುತ್ರ ಹಾಗೂ ರಾಜ್ಯ ರಾಜಕಾರಣದ ಸದ್ಯದ ಬಹುಚರ್ಚಿತ ನಾಯಕ ವಿಜಯೇಂದ್ರ ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬಂದಿದ್ದವು.
ಇಂತಹ ಮಾತುಗಳ ಬೆನ್ನಲ್ಲೇ ಸ್ವತಃ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ ಜಂಟಿಯಾಗಿ ದೆಹಲಿಗೆ ಹೋಗಿ, ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಂದಿದ್ದರು. ಅದೇ ಹೊತ್ತಿಗೆ ಯಡಿಯೂರಪ್ಪ ವಿರೋಧಿ ಬಣದ ನಾಯಕರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಶತಸಿದ್ಧ ಎಂಬ ಹೇಳಿಕೆಗಳನ್ನೂ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇನ್ನೇನು ಬಿ ವೈ ರಾಘವೇಂದ್ರ ಕೇಂದ್ರದಲ್ಲಿ ಸಚಿವರಾಗುವುದು ಮತ್ತು ವಿಜಯೇಂದ್ರ ರಾಜ್ಯದಲ್ಲಿ ಸಂಪುಟ ಸೇರುವುದು ಬಹುತೇಕ ಖಚಿತ ಮತ್ತು ಅದರ ಪರಿಣಾಮವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲಿದ್ದಾರೆ ಎಂದೇ ವ್ಯಾಖ್ಯಾನಿಸಲಾಗಿತ್ತು.
ಆದರೆ, ಇದೀಗ ಕಳೆದ ಒಂದು ವಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿಂದ ಮೇಲೆ ನೀಡುತ್ತಿರುವ ಹೇಳಿಕೆಗಳು ಬೇರೆಯದೇ ದಿಕ್ಕಿನತ್ತ ಬೊಟ್ಟು ಮಾಡುತ್ತಿವೆ. ರಾಜ್ಯದಲ್ಲಿ ಮುಂದಿನ ಎರಡು ವರ್ಷ ತಾವೇ ಮುಖ್ಯಮಂತ್ರಿ ಎಂಬರ್ಥದ ಮಾತುಗಳನ್ನಾಡಿದ ಅವರು, ಎರಡು ವರ್ಷದ ಬಳಿಕವೂ ಅತ್ಯಧಿಕ ಸ್ಥಾನಗಳೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಮುಂದಿರುವ ಗುರಿ. ಪಕ್ಷ ಸಂಘಟನೆಗಾಗಿ ಸದ್ಯದಲ್ಲೇ ಜಿಲ್ಲಾ ಪ್ರವಾಸ ಆರಂಭಿಸುವುದಾಗಿ ಹೇಳುವ ಮೂಲಕ ಕಳೆದ ಒಂದೂವರೆ ತಿಂಗಳ ಎಲ್ಲಾ ರಾಜಕೀಯ ಬೆಳವಣಿಗೆಗಳು, ವಿರೋಧಿ ಬಣದ ನಿರಂತರ ಯತ್ನಗಳು ಮಣ್ಣುಮುಕ್ಕಿವೆ ಎಂಬ ಸಂದೇಶ ನೀಡಿದ್ದರು.
ಯಡಿಯೂರಪ್ಪ ಅವರ ಈ ಹೇಳಿಕೆಯ ಜೊತೆಗೇ ಪುತ್ರ ಬಿ ವೈ ವಿಜಯೇಂದ್ರ ಕೂಡ, ಮುಂದಿನ ಎರಡು ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯಾವುದೇ ಕಾರಣಕ್ಕೂ ಅದರಲ್ಲಿ ಬದಲಾವಣೆ ಇಲ್ಲ ಎಂದಿದ್ದರು. ಕಳೆದ ಒಂದು ವಾರದಲ್ಲಿ ಬಂದ ಈ ಹೇಳಿಕೆಗಳು ಒಂದುಕಡೆಯಾದರೆ, ಅದೇ ಹೊತ್ತಿಗೆ ನಾಯಕತ್ವ ಬದಲಾವಣೆಯ ಘೋಷಣೆಯೊಂದಿಗೆ ಮೇಲಿಂದ ಮೇಲೆ ದೆಹಲಿಯಾತ್ರೆ ಕೈಗೊಂಡಿದ್ದ ಮತ್ತು ನಿರಂತರ ಹೇಳಿಕೆಗಳ ಮೂಲಕ ವಿಷಯವನ್ನು ಚಾಲ್ತಿಯಲ್ಲಿಟ್ಟಿದ್ದ ನಾಯಕರ ದನಿಗಳು ನಿಧಾನಕ್ಕೆ ತೆರೆಮರೆಗೆ ಸರಿದಿವೆ!

ಹಾಗಾಗಿ, ಸದ್ಯಕ್ಕೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಿ ಎಸ್ ಯಡಿಯೂರಪ್ಪ ಮೇಲುಗೈ ಸಾಧಿಸಿದಂತೆ ಕಾಣುತ್ತಿದ್ದರೂ, ಪಕ್ಷದ ವರಿಷ್ಠರು ನಾಯಕತ್ವ ಬದಲಾವಣೆಯ ವಿಷಯದಲ್ಲಿ ಈವರೆಗೂ ಯಾವುದೇ ಸ್ಪಷ್ಟ ಹೇಳಿಕೆಯನ್ನಾಗಲೀ, ನಿಲುವನ್ನಾಗಲೀ ಪ್ರಕಟಿಸದೇ ಇರುವುದರಿಂದ ನಾಯಕತ್ವ ಬದಲಾವಣೆಯ ವಿಷಯ ಇನ್ನೂ ತೂಗುಯ್ಯಾಲೆಯಲ್ಲೇ ಇದೆ. ಮತ್ತೊಂದು ಕಡೆ ಉತ್ತರಪ್ರದೇಶದ ಚುನಾವಣೆಗಳು ಸಮೀಪಿಸಿರುವುದರಿಂದ ಮತ್ತು ರಾಜ್ಯದಲ್ಲಿ ಕೂಡ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಬಂದಿರುವುದರಿಂದ ಸದ್ಯ ರಾಷ್ಟ್ರಮಟ್ಟದಲ್ಲೂ, ಸ್ಥಳೀಯವಾಗಿ ಪಕ್ಷಕ್ಕೆ ವ್ಯತಿರಿಕ್ತವಾಗಬಲ್ಲ ಕರ್ನಾಟಕದ ನಾಯಕತ್ವ ಬದಲಾವಣೆಯ ವಿಷಯವನ್ನು ಬದಿಗೆ ಸರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ. ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ತಮ್ಮ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತಹ ಪರ್ಯಾಯ ನಾಯಕರು ರಾಜ್ಯ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ ಎಂಬ ಚಿಂತೆ ಕೂಡ ವರಿಷ್ಠರ ಆ ತೀರ್ಮಾನಕ್ಕೆ ಕಾರಣ ಎನ್ನಲಾಗುತ್ತಿದೆ.
ಆದರೆ, ವರಿಷ್ಠರು ನಿಜವಾಗಿಯೂ ಕರ್ನಾಟಕದ ನಾಯಕತ್ವ ಬದಲಾವಣೆಯ ವಿಷಯವನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆಯೇ ಇಲ್ಲವೇ ಎಂಬುದಕ್ಕೆ ಕೇಂದ್ರ ಸಂಪುಟ ವಿಸ್ತರಣೆಯೇ ದಿಕ್ಸೂಚಿ. ಒಂದು ವೇಳೆ ಸಂಪುಟಕ್ಕೆ ಬಿ ವೈ ರಾಘವೇಂದ್ರ ಅವರಿಗೆ ಅವಕಾಶ ಸಿಕ್ಕರೆ, ತತಕ್ಷಣಕ್ಕೆ ಅಲ್ಲದೇ ಹೋದರೂ ಸದ್ಯದಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಯಡಿಯೂರಪ್ಪ ಅವರನ್ನು ಬಿಜೆಪಿಯ ಮಾರ್ಗದರ್ಶಕರ ಪಟ್ಟಿಗೆ ಸೇರಿಸುವುದು ಬಹುತೇಕ ಖಚಿತ ಎಂಬ ಸಂದೇಶ ಹೊರಬೀಳಲಿದೆ. ಇಲ್ಲವಾದಲ್ಲಿ, ರಾಘವೇಂದ್ರ ಬದಲಿಗೆ ಶಿವಕುಮಾರ್ ಉದಾಸಿ ಅಥವಾ ಪ್ರತಾಪ ಸಿಂಹ ಅಥವಾ ಇನ್ನಾರೇ ರಾಜ್ಯದ ನಾಯಕರು ಸ್ಥಾನ ಪಡೆದಲ್ಲಿ, ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಮತ್ತು ಬಹುತೇಕ ಮುಂದಿನ ಎರಡು ವರ್ಷವೂ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದು ಖಚಿತ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಮುಖ್ಯವಾಗಿ ರಾಜ್ಯದ ಬಿಜೆಪಿ ನಾಯಕರಷ್ಟೇ ಅಲ್ಲ; ರಾಜಕೀಯ ವಲಯದ ಕಣ್ಣು ಕೇಂದ್ರ ಸಂಪುಟ ವಿಸ್ತರಣೆಯ ಮೇಲೆ ನೆಟ್ಟಿದೆ.

ಈ ನಡುವೆ, ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ, ಬಿ ವೈ ವಿಜಯೇಂದ್ರ ಮತ್ತಿತರ ಪ್ರಭಾವಿಗಳ ಹೆಸರು ಬಳಸಿ ಹಣ ವಸೂಲಿ ಮತ್ತು ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಬಂಧಿಸಿ, ವಿಚಾರಣೆ ನಡೆಸಿರುವ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ. ಉಪಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿ, ಕೊನೆಗೆ ಕರೋನಾ ನಿರ್ವಹಣೆಯ ವಿಷಯದಲ್ಲಿ ಆದ ಯಡವಟ್ಟುಗಳಿಂದಾಗಿ ಪ್ರಮುಖ ಆರೋಗ್ಯ ಖಾತೆಯಿಂದಲೂ ಹೊರಬಿದ್ದು, ಸಮಾಜ ಕಲ್ಯಾಣ ಸಚಿವರಾಗಿ ಉಳಿದಿರುವ ಶ್ರೀರಾಮುಲು, ಬಿರುಸಿನ ನಾಯಕತ್ವ ಬದಲಾವಣೆಯ ಚರ್ಚೆಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ಆದರೆ ಇದೀಗ ದಿಢೀರನೇ ಲಂಚ ಆರೋಪದ ಮೇಲೆ ಅವರ ಆಪ್ತ ಸಹಾಯಕನ ವಿರುದ್ದ ನೇರ ಪೊಲೀಸ್ ದೂರು ನೀಡಿ ಬಂಧಿಸುವಂತೆ ಮಾಡಿರುವ ವಿಜಯೇಂದ್ರ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತಮ್ಮದೇ ಸರ್ಕಾರದ ಸಚಿವರ ಆಪ್ತ ಸಹಾಯಕನ ವಿರುದ್ದ ಹೀಗೆ ಯಾವುದೇ ಆಂತರಿಕ ಚರ್ಚೆ ಇಲ್ಲದೆ, ಮಾತುಕತೆ ಇಲ್ಲದೆ ನೇರವಾಗಿ ಪೊಲೀಸ್ ದೂರು ಕೊಟ್ಟು ಬಂಧಿಸುವಂತೆ ಮಾಡಿರುವ ತಂತ್ರಗಾರಿಕೆಯ ಹಿಂದೆ ಏನಿದೆ? ಸಿ ಎಂ ಉದಾಸಿ ಅವರ ನಿಧನದಿಂದ ಉಪ ಚುನಾವಣೆ ಎದುರಿಸುತ್ತಿರುವ ಹಾವೇರಿ ಜಿಲ್ಲೆಯ ಹಾನಗಲ್ ಉಪಚುನಾವಣೆಗೆ ಕಣಕ್ಕಿಳಿಯುವ ಸಿದ್ಧತೆ ನಡೆಸಿರುವ ವಿಜಯೇಂದ್ರ ಮತ್ತು ಅವರ ರಾಜಕೀಯ ಓಟಕ್ಕೆ ತಡೆಯೊಡ್ಡುವ ಬಿಜೆಪಿಯ ಆರ್ ಎಸ್ ಎಸ್ ಬೆಂಬಲಿತ ಬಣದ ನಡುವಿನ ಮೇಲಾಟಕ್ಕೂ ಈ ಪ್ರಕರಣಕ್ಕೂ ಇರುವ ನಂಟೇನು? ಎಂಬುದು ಈಗ ಕುತೂಹಲದ ಚರ್ಚೆಯ ವಸ್ತುವಾಗಿದೆ.

ಸ್ವತಃ ಸಚಿವ ಶ್ರೀರಾಮುಲು ಕೂಡ ತಮಗೆ ಒಂದು ಮಾತೂ ಹೇಳದೆ ತಮ್ಮ ಆಪ್ತ ಸಹಾಯಕನ ವಿರುದ್ಧ ಪೊಲೀಸ್ ಕ್ರಮ ಜರುಗಿಸಿ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪು ಯಾರೇ ಮಾಡಿದರೂ ಕಾನೂನು ರೀತ್ಯ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಒಬ್ಬ ಸಚಿವ ಸಹೋದ್ಯೋಗಿಯಾಗಿ ತಮ್ಮೊಂದಿಗೆ ಈ ಬಗ್ಗೆ ಒಂದು ಮಾತೂ ಆಡದೆ ಸಿಎಂ ಮತ್ತು ಅವರ ಪುತ್ರ ದಿಢೀರ್ ಕ್ರಮ ಜರುಗಿಸಿರುವುದು ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ. ಅದೇ ಹೊತ್ತಿಗೆ ವಿಜಯೇಂದ್ರ ಕೂಡ, ತಮ್ಮ ಹೆಸರು ಬಳಸಿಕೊಂಡು ಜನರನ್ನು ಮೋಸಗೊಳಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಶ್ರೀರಾಮುಲು ಗಮನಕ್ಕೇ ಬಾರದೆ ಅಲ್ಲಿ ವಿಜಯೇಂದ್ರ ವರ್ಚಸ್ಸಿಗೆ ಮಸಿ ಬಳಿಯುವ ಷಢ್ಯಂತ್ರ ನಡೆಯುತ್ತಿತ್ತು ಮತ್ತು ಅದರ ಸುಳಿವರಿತು ತಡೆಯುವ ಯತ್ನವಾಗಿ ಸಚಿವರಿಗೂ ಮಾಹಿತಿ ನೀಡದೆ ಅವರ ಆಪ್ತ ಸಹಾಯಕ ವಿರುದ್ಧ ಪೊಲೀಸ್ ಕ್ರಮ ಜರುಗಿಸಲಾಯಿತು ಎಂಬುದು ಈ ಇಬ್ಬರ ಹೇಳಿಕೆಗಳ ಸಾರ. ಹಾಗಾದರೆ ವಿಜಯೇಂದ್ರ ವಿರುದ್ಧ ನಡೆಯುತ್ತಿದ್ದ ಷಢ್ಯಂತ್ರ ಯಾವುದು, ಅದರ ಗುರಿ ಏನು ಮತ್ತು ಬಿಜೆಪಿಯ ನಾಯಕತ್ವ ಬದಲಾವಣೆಯ ಚರ್ಚೆಗಳಿಗೂ ಆ ಷಢ್ಯಂತ್ರಕ್ಕೂ ಇರುವ ನಂಟೇನು ಎಂಬುದು ಸದ್ಯ ಈಗಿನ ಕುತೂಹಲ!





