ಬೆಳಗಾವಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ(Krishna Byre Gowda) ವಿರುದ್ಧ ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ 21 ಎಕರೆ ಜಮೀನು ಕಬಳಿಸಿರುವ ಆರೋಪ ಕೇಳಿ ಬಂದಿದೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ(BY Vijayendra) ಪ್ರತಿಕ್ರಿಯಿಸಿದ್ದು, ಕಂದಾಯ ಸಚಿವರ ಅಕ್ರಮಗಳ ಕುರಿತಂತೆ ಇವತ್ತು ಸದನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವರ ವಿರುದ್ಧ ನಾವು ಮಾಡಿದ ಆರೋಪ ಗಂಭೀರ ಸ್ವರೂಪದ್ದು. ಕಂದಾಯ ಸಚಿವರಾದ ಅವರು ಸರಿಯಾಗಿ ದಾಖಲಾತಿ ಪರಿಶೀಲಿಸದೇ ‘ನಮ್ಮ ತಂದೆ ಕಾಲದ್ದು, ನಮ್ಮ ತಾತನ ಕಾಲದ್ದು’ ಎಂದು ಅಕ್ರಮ ನಡೆಸಬಹುದೇ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಹಾಗಿದ್ದರೆ ಎಂದು ಪ್ರಶ್ನಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸಚಿವೆ ಸದನಕ್ಕೆ ತಪ್ಪು ಮಾಹಿತಿ ಕೊಡುವುದು ಖಂಡಿತ ಸರಿಯಲ್ಲ. ಗೃಹಲಕ್ಷ್ಮಿಕುರಿತು ತಪ್ಪು ಮಾಹಿತಿ ನೀಡಿದ ಸಚಿವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ಮಾಹಿತಿಯೂ ಸಚಿವರ ಬಳಿ ಇರದಿದ್ದರೆ ಅದು ಖಂಡಿತ ಸರಿಯಲ್ಲ ಎಂದರು.

ಹಳಿ ತಪ್ಪಿದ ಆಡಳಿತ
ಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಂಡವಾಳ ಇನ್ನಷ್ಟು ಬಯಲಾಗಲಿದೆ. ತಾನೆಷ್ಟು ದಿನ ಮುಖ್ಯಮಂತ್ರಿಗಳಾಗಿ ಇರುತ್ತೇನೋ ಎಂಬ ಗೊಂದಲ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಕಳೆದೊಂದು ವರ್ಷದಲ್ಲಿ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಒಳಜಗಳ, ಡಿನ್ನರ್ ಮೀಟಿಂಗ್ ಬೆಳಗಾವಿಯಲ್ಲೂ ಮುಂದುವರೆದಿದೆ. ಸಿಎಂ, ಸಚಿವರು, ಶಾಸಕರ ನಡುವಿನ ಒಳಜಗಳದಿಂದ, ಸಿಎಂ ವಿಚಾರದಲ್ಲಿ ಪೈಪೋಟಿಯ ಪರಿಣಾಮವಾಗಿ ಆಡಳಿತ ಹಳಿ ತಪ್ಪಿದ್ದು ಸತ್ಯ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ಮೂಲಕ ಹೈಕಮಾಂಡ್ಗೆ ಹಣ ಸಂದಾಯ ಮಾಡುವುದು ಮುಂದುವರೆದಿದೆ. ಇದನ್ನು ಹಿಂದಿನಿಂದಲೂ ಹೇಳಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೂರಾರು ಕೋಟಿ ಪೋಲಾಗಿದೆ. ಬಳಿಕ ಒಂದಾದ ಮೇಲೊಂದು ಹಗರಣ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿ ಪಡಿಸುವ ಕಾರ್ಯ
ಗುತ್ತಿಗೆದಾರರಿಂದ ವಸೂಲಿ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ, ರಾಜ್ಯ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಇವರಿಗೆ ಬಡವರಾದರೇನು? ಶ್ರೀಮಂತ ಆದರೇನು? ರಾಜ್ಯದಲ್ಲಿ ಲೂಟಿ ಮಾಡಿ, ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿ ಪಡಿಸಿ ತಾವು ಅಧಿಕಾರದಲ್ಲಿ ಮುಂದುವರೆಯಬೇಕಿದೆ. ಇದೊಂದೇ ನಡೆಯುತ್ತಿದೆ ಎಂದು ಆರೋಪಿಸಿದರು












