ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿದ್ದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7ಕ್ಕೆ ಒಂದು ವರ್ಷ ಪೂರೈಸಲಿದೆ. ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಕಾಂಗ್ರೆಸ್ ಅದೇ ದಿನ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಭಾರತ್ ಜೋಡೋ ಯಾತ್ರೆ ಆಯೋಜಿಸಲಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಭಾರತ್ ಜೋಡೋ ಪಾದಯಾತ್ರೆಯ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಸೆಪ್ಟೆಂಬರ್ 7 ರಂದು ಪ್ರತಿ ಜಿಲ್ಲೆಯಲ್ಲಿ ಸಂಜೆ 5 ರಿಂದ 6 ರವರೆಗೆ ‘ಭಾರತ್ ಜೋಡೋ’ ಆಚರಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 136 ದಿನಗಳ ಕಾಲ ದೇಶದಾದ್ಯಂತ 12 ರಾಜ್ಯಗಳಲ್ಲಿ ಕಾಲ್ನಡಿಗೆ ಮೂಲಕ ಸಾಗಿದ್ದರು. ಎಲ್ಲಾ ರಾಜ್ಯಗಳಲ್ಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಯಾ ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಜನರು ಭಾಗವಹಿಸಿದ್ದರು. ಅಲ್ಲದೇ ಕೆಲ ಸೆಲೆಬ್ರಿಟಿಗಳೂ, ಸಮಾನ ಮನಸ್ಸಿನ ಇತರ ಪಕ್ಷಗಳ ಕೆಲ ನಾಯಕರೂ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು.
“ನಾನು ಈ ಯಾತ್ರೆಯನ್ನು ನನಗಾಗಲಿ ಅಥವಾ ಕಾಂಗ್ರೆಸ್ಗಾಗಿ ಮಾಡಿಲ್ಲ, ಆದರೆ ದೇಶದ ಜನರಿಗಾಗಿ ಮಾಡಿದ್ದು. ಈ ದೇಶದ ಅಡಿಪಾಯವನ್ನು ನಾಶಮಾಡಲು ಬಯಸುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿಯಾಗಿದೆ” ಎಂದು ರಾಹುಲ್ ಗಾಂಧಿ ಕಾಶ್ಮೀರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹೇಳಿದ್ದರು.
ಯಾತ್ರೆಯ ಅವಧಿಯಲ್ಲಿ, ರಾಹುಲ್ ಗಾಂಧಿಯವರು 12 ಸಾರ್ವಜನಿಕ ಸಭೆಗಳು, 100 ಕ್ಕೂ ಹೆಚ್ಚು ಸಣ್ಣ ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. 136 ದಿನಗಳಲ್ಲಿ 4,000 ಕಿ.ಮೀ ದೂರವನ್ನು ರಾಹುಲ್ ಗಾಂಧಿ ಕ್ರಮಿಸಿದ್ದಾರೆ.
ಸೆಪ್ಟೆಂಬರ್ 7 ರಿಂದ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಆರಂಭಿಸಿದ್ದರು. ಕನ್ಯಾಕುಮಾರಿಯಿಂದ ಆರಂಭವಾಗಿ ಭಾರತದ ಮುಕುಟ ಕಾಶ್ಮೀರದಲ್ಲಿ ಜನವರಿ 30 ರಂದು ಯಾತ್ರೆ ಅಂತ್ಯಗೊಂಡಿತು. ಭಾರತ್ ಜೋಡೋ ಯಾತ್ರೆ 75 ಜಿಲ್ಲೆಗಳು, 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿತ್ತು.






