ಹಾಸನ : ಬಿಜೆಪಿಯ ಸಿದ್ಧಾಂತಗಳ ಬಗ್ಗೆ ಹೆಚ್ಚೇನು ವಿವರಿಸಿ ಹೇಳಬೇಕಿಲ್ಲ. ಹಿಂದೂ ವಾದಿಗಳು, ಸಂಸ್ಕೃತಿ, ಸಂಸ್ಕಾರ, ಶಿಸ್ತನ್ನು ಮೈಗೂಡಿಸಿಕೊಂಡಿರುವುದೇ ನಮ್ಮ ಧ್ಯೇಯ ಅಂತಾ ಬಿಜೆಪಿ ನಾಯಕರೇ ಅನೇಕ ಬಾರಿ ಹೇಳಿರೋದನ್ನು ಕೇಳಿರುತ್ತೇವೆ. ಆದರೆ ಹಾಸನ ಬಿಜೆಪಿ ಕಚೇರಿಯಲ್ಲಿ ನಡೆದ ದೃಶ್ಯವೊಂದು ಈ ಎಲ್ಲಾ ಮಾತುಗಳಿಗೆ ತದ್ವಿರುದ್ಧವಾಗಿ ತೋರುತ್ತಿದೆ.
ಮೂರು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಉಚ್ಚಂಗಿ ಹಾಗೂ ವಣಗೂರು ಗ್ರಾಮ ಪಂಚಾಯ್ತಿಗಳಲ್ಲಿ ಚುನಾವಣೆ ನಡೆದು ಅದರ ಫಲಿತಾಂಶ ಕೂಡ ಹೊರಬಿದ್ದಿತ್ತು. ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಇದರಿಂದ ಮುಖಭಂಗ ಅನುಭವಿಸಿದ ಬಿಜೆಪಿ ಸ್ಥಳೀಯ ನಾಯಕರು ಪಕ್ಷದ ಕಚೇರಿಯಲ್ಲಿಯೇ ಗುಂಡು – ತುಂಡಿನ ಪಾರ್ಟಿ ನಡೆಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಸಕಲೇಶಪುರ ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಸೇರಿದಂತೆ ಅನೇಕು ಸೇರಿಕೊಂಡು ಸಕಲೇಶಪುರ ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಸಾವರ್ಕರ್ ಫೋಟೋದ ಎದುರೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರೇ ಈ ಕೃತ್ಯ ಎಸಗಬಹುದಾ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ಈ ಪಕ್ಷದ ಸಿದ್ಧಾಂತಕ್ಕೆ ದ್ರೋಗ ಬಗೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಆಗ್ರಹಿಸುತ್ತಿದ್ದಾರೆ.