
ಬೀದರ್: ಬಡತನ ಸೇರಿದಂತೆ ವಿವಿಧ ಕಾರಣಗಳಿಂದ ಮಧ್ಯದಲ್ಲೇ ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ‘ಅಕಾಡೆಮಿಕ್ ಇನ್ಟೆನ್ಸಿವ್ ಕೇರ್ ಯುನಿಟ್’ (ಎಐಸಿಯುAICU) ಬೆಳಕಾಗಿದೆ.ಕಡು ಬಡತನದ ಕಾರಣಕ್ಕಾಗಿ ಶಾಲೆಗೆ ಹೋಗದವರು, ಫೇಲಾಗಿ ಅರ್ಧದಲ್ಲಿಯೇ ಶಾಲೆ ಬಿಟ್ಟವರು, ಓದಿನಲ್ಲಿ ಹಿಂದುಳಿದವರು, ಕೀಳರಿಮೆಯಿಂದ ಶಾಲೆ ತೊರೆದ ವಿದ್ಯಾರ್ಥಿಗಳಿಗೆ ‘ಎಐಸಿಯು’ನಲ್ಲಿ ಕಲಿಸಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಸಾಮರ್ಥ್ಯವನ್ನು ಬೆಳೆಸಲಾಗುತ್ತಿದೆ.ಎಐಸಿಯುನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಎಂಬಿಬಿಎಸ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಸೇರಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

15 ವರ್ಷಗಳ ಹಿಂದೆ ಆರಂಭಗೊಂಡ ‘ಎಐಸಿಯು’ನಲ್ಲಿ ಇದುವರೆಗೆ ಮೂರು ಸಾವಿರ ಡ್ರಾಪ್ಔಟ್ ಮಕ್ಕಳಿಗೆ ಶಿಕ್ಷಣ ಕೊಟ್ಟು ಮುಖ್ಯವಾಹಿನಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ತರಗತಿಗಳಲ್ಲಿ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲದೇ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳ ಬಡ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.ಒಂದರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ‘ಎಐಸಿಯು’ನಲ್ಲಿ ಪಾಠ ಮಾಡಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಮಕ್ಕಳನ್ನು ನಿರ್ದಿಷ್ಟ ತರಗತಿಗಳಿಗೆ ಆಯ್ಕೆ ಮಾಡಿ ಕಲಿಸಲಾಗುತ್ತದೆ. ಕೆಲವರು ನೇರವಾಗಿ ಒಂಬತ್ತನೇ ತರಗತಿಗೆ ಪ್ರವೇಶ ಪಡೆದು, ಎಸ್ಎಸ್ಎಲ್ಸಿ, ಪಿಯುಸಿ ಮುಗಿಸಿದ್ದಾರೆ. ಆರು ಮಕ್ಕಳಿಗೆ ಒಬ್ಬ ಶಿಕ್ಷಕ ಪಾಠ ಮಾಡುತ್ತಾರೆ. ರೌಂಡ್ ಟೇಬಲ್ ಮಾದರಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೇಳಿಕೊಡಲಾಗುತ್ತದೆ. ಪ್ರತಿಯೊಬ್ಬರ ಕಲಿಕೆಯ ಸಾಮರ್ಥ್ಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪಾಠ ಮಾಡಲಾಗುತ್ತದೆ. ಓದಿನಲ್ಲಿ ಎಷ್ಟೇ ದುರ್ಬಲವಾಗಿದ್ದರೂ ಒಂದು ವರ್ಷದೊಳಗೆ ಓದಲು, ಬರೆಯುವಂತೆ ಮಾಡಿ, ಪರೀಕ್ಷೆಗೆ ಅಣಿಗೊಳಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆ ಮೇಲೆ ವಿಶೇಷ ನಿಗಾ ವಹಿಸಲು( Fast track) ‘ಫಾಸ್ಟ್ ಟ್ರ್ಯಾಕ್ ಅಪ್ರೋಚ್’ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿಯೇ ಇದಕ್ಕೆ ‘ಎಐಸಿಯು(‘ AICU)ಎಂದು ಹೆಸರಿಡಲಾಗಿದೆ.