ಬೆಂಗಳೂರು:
ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (85) ವಯೋಸಹಜ ಕಾಯಿಲೆಯಿಂದ ಹೈದರಾಬಾದ್ನ ನಿವಾಸದಲ್ಲಿ ನಿಧನರಾದರು. ಮರುದಿನ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಶಾಂತಿನಗರದ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಆಡುಗೋಡಿ ಸಮೀಪದ ರುದ್ರಭೂಮಿಯಲ್ಲಿ ಕ್ರೈಸ್ತ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ತಾಯಿ ನಿಧನಕ್ಕೆ ಸಂಬಂಧಿಸಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನಿಮ್ಮ ದಯೆ ಮತ್ತು ಚಿಂತನಶೀಲ ಮಾತುಗಳಿಗೆ ಎಲ್ಲರಿಗೂ ಧನ್ಯವಾದಗಳು. ಈ ದುಃಖದ ಕ್ಷಣಗಳಲ್ಲಿ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಅರ್ಥಪೂರ್ಣವಾಗಿದೆ. ಎಲ್ಲದಕ್ಕೂ ಧನ್ಯವಾದಗಳು ಅಮ್ಮ.. ನಿನ್ನನ್ನು ಪ್ರೀತಿಸುತ್ತೇನೆ.. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದರು.

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್, “ನಾನು ನಾಸ್ತಿಕ. ದೇವರನ್ನು ನಂಬುವುದಿಲ್ಲ. ಅಷ್ಟು ಸಮಯ ನನ್ನ ಬಳಿ ಇಲ್ಲ. ಯಾರಾದರೂ ಕೇಳಿದರೆ ನನಗೆ ಸಮಯ ಇಲ್ಲ ಅಂತೀನಿ” ಎಂದು ಹೇಳಿಕೊಂಡಿದ್ದರು. “ನಾನು ಸನಾತನ ಧರ್ಮದಲ್ಲಿ ಹುಟ್ಟಿಲ್ಲ, ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದರು.ಈ ಹಿನ್ನೆಲೆಯಲ್ಲಿ, ದೇವರಲ್ಲಿ ನಂಬಿಕೆ ಇಲ್ಲದವರು ಕ್ರೈಸ್ತ ಪದ್ಧತಿಯಂತೆ ತಾಯಿಯ ಅಂತ್ಯಸಂಸ್ಕಾರ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದುರಾಗಿದೆ. ಒಬ್ಬ ನೆಟ್ಟಿಗರ ಕಾಮೆಂಟ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಅವಳ ನಂಬಿಕೆಯ ಪ್ರಕಾರ ಅಂತ್ಯಸಂಸ್ಕಾರ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವವರು ಇದನ್ನು ಅರ್ಥಮಾಡಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ಈ ಟ್ವೀಟ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು “ನಿಮ್ಮ ತಾಯಿ ನಂಬಿಕೆಯನ್ನು ಒಪ್ಪಿಕೊಂಡಂತೆ ಎಲ್ಲರ ನಂಬಿಕೆಯನ್ನು ಗೌರವಿಸಿ” ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು “ಪ್ರತಿಯೊಬ್ಬರಿಗೂ ತಮ್ಮ ಧರ್ಮ ಮತ್ತು ನಂಬಿಕೆ ಇದೆ. ನೀವು ಅದನ್ನು ಗೌರವಿಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು “ಇಬ್ಬಗೆ ನೀತಿ ಬೇಡ” ಎಂದು ಟೀಕಿಸಿದ್ದಾರೆ.ಅಂತಿಮ ವಿಧಿವಿಧಾನಗಳ ವೇಳೆ ಪ್ರಕಾಶ್ ರಾಜ್ ಕುಟುಂಬಸ್ಥರು ಹಾಗೂ ಆಪ್ತರು ಹಾಜರಿದ್ದರು. ಈ ವೇಳೆ ಅವರ ಮಗಳು ತಮ್ಮ ಅಜ್ಜಿಗೆ ನುಡಿ ನಮನ ಸಲ್ಲಿಸಿದ್ದು, ಅಜ್ಜಿ ಅಗಲಿಕೆಗೆ ಭಾವುಕರಾಗಿದ್ದ ಮಗನನ್ನು ಪ್ರಕಾಶ್ ರಾಜ್ ಸಮಾಧಾನಪಡಿಸಿದ ದೃಶ್ಯ ಗಮನಸೆಳೆಯಿತು.






