ಆಮ್ ಆದ್ಮಿ ಪಕ್ಷದ (AAP) ಪ್ರಮುಖ ನಾಯಕ ರಾಘವ್ ಚಡ್ಡಾ ಅವರಿಗೆ ಪಕ್ಷದ ಹೈಕಮಾಂಡ್ ದೊಡ್ಡ ಶಾಕ್ ನೀಡಿದ್ದು, ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ವಜಾಗೊಳಿಸಿದೆ. ಇದೇ ವೇಳೆ, ಸದನದಲ್ಲಿ ಪಕ್ಷದ ಪರವಾಗಿ ಮಾತನಾಡಲು ಅವರಿಗೆ ಅವಕಾಶ ನೀಡಬಾರದು ಎಂದು ರಾಜ್ಯಸಭೆ ಸಚಿವಾಲಯಕ್ಕೆ ಪಕ್ಷವು ಪತ್ರ ಬರೆದಿರುವುದು ತಿಳಿದುಬಂದಿದೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ವಿದ್ಯಾಭ್ಯಾಸ ಮಾಡಿದ ಚಡ್ಡಾ, ದೀರ್ಘಕಾಲದಿಂದ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅಬಕಾರಿ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಕ್ಲೀನ್ ಚಿಟ್ ದೊರೆತ ವಿಚಾರದಲ್ಲಿ ಚಡ್ಡಾ ಮೌನ ವಹಿಸಿರುವುದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಚಡ್ಡಾ ಅವರು ಪಕ್ಷದ ನಿಲುವಿಗೆ ಅನುಗುಣವಾಗಿ ವರ್ತಿಸುತ್ತಿಲ್ಲ ಮತ್ತು ಸದನದಲ್ಲಿ ಕಡಿಮೆ ಪ್ರಾಮುಖ್ಯತೆಯ ವಿಷಯಗಳನ್ನು ಮುಂದಿರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಚಡ್ಡಾ, “ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವುದನ್ನು ತಡೆಯಲು ನನ್ನನ್ನು ಗುರಿಯಾಗಿಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಅವರ ಆಸ್ತಿ ವಿವರಗಳೂ ಗಮನ ಸೆಳೆದಿವೆ. ಅಫಿಡವಿಟ್ ಪ್ರಕಾರ, 2019ರಲ್ಲಿ ₹16.5 ಲಕ್ಷ ಇದ್ದ ಚರ ಆಸ್ತಿ 2022ರ ವೇಳೆಗೆ ₹37 ಲಕ್ಷಕ್ಕೆ ಏರಿಕೆಯಾಗಿದೆ. ನಗದು ಹಾಗೂ ಬ್ಯಾಂಕ್ ಠೇವಣಿಗಳು ಸೇರಿ ₹30-40 ಲಕ್ಷವಿದ್ದು, ಶೇರು-ಬಾಂಡ್ಗಳಲ್ಲಿ ₹6.35 ಲಕ್ಷ ಹೂಡಿಕೆ ಮಾಡಿದ್ದಾರೆ. ₹1.32 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹೊಂದಿದ್ದು, ಅವರ ಹೆಸರಿನಲ್ಲಿ ಯಾವುದೇ ಸ್ಥಿರ ಆಸ್ತಿ ಇಲ್ಲ ಎಂದು ಘೋಷಿಸಲಾಗಿದೆ.

2023ರಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ವಿವಾಹವಾದ ಚಡ್ಡಾ, ಕುಟುಂಬದ ಒಟ್ಟು ಆಸ್ತಿ ಮೌಲ್ಯದಲ್ಲಿ ದೊಡ್ಡ ವ್ಯತ್ಯಾಸವಿದೆ. ವರದಿಗಳ ಪ್ರಕಾರ, ಪರಿಣಿತಿ ಚೋಪ್ರಾ ಅವರ ಆಸ್ತಿ ಸುಮಾರು ₹74 ಕೋಟಿ ಆಗಿದ್ದು, ಮುಂಬೈ ಬಾಂದ್ರಾದಲ್ಲಿ ಐಷಾರಾಮಿ ನಿವಾಸ ಮತ್ತು ಹೈ-ಎಂಡ್ ಕಾರುಗಳನ್ನು ಹೊಂದಿದ್ದಾರೆ. ಇವರಿಬ್ಬರ ಒಟ್ಟು ಆಸ್ತಿ ಮೌಲ್ಯವು ₹74.5 ಕೋಟಿ ಅಂದಾಜಿಸಲಾಗಿದೆ.






