ಉತ್ತರ ಪ್ರದೇಶದ ಚುನಾವಣೆ ಹತ್ತಿರಾದಷ್ಟು ಆಡಳಿತಾರೂಢ ಬಿಜೆಪಿಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತಹ ಘಟಾನುಘಟಿಗಳಿದ್ದರೂ ಬಿಜೆಪಿಯ ಗ್ರಾಫ್ ಮೇಲೇರುತ್ತಿಲ್ಲ. ಮುಖ್ಯ ವಾಹಿನಿ ಮಾಧ್ಯಮಗಳನ್ನು ಸಂಪೂರ್ಣವಾಗಿ ತಾನೇ ನಿರ್ವಹಿಸುತ್ತಿದ್ದರೂ ಸಮಾಜವಾದಿ ಪಕ್ಷದ ಪರ ಏಳುತ್ತಿರುವ ಅಲೆಯನ್ನು ತಡೆಯಲಾಗುತ್ತಿಲ್ಲ. ‘ಏನೆಲ್ಲಾ ಅಸ್ತ್ರ’ ಬಳಸಿದರೂ ಬಿಜೆಪಿ ನಾಯಕರು ಸಮಾಜವಾದಿ ಪಕ್ಷ ಸೇರುವುದನ್ನು ನಿಲ್ಲಿಸಲಾಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜಾತಿ ಸಮೀಕರಣ ಕೈಕೊಡುತ್ತಿದೆ.
ಇಷ್ಟು ವರ್ಷ ಮಾಡಿಕೊಂಡು ಬಂದಂತೆ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ, ಹಿಂದೂ-ಮುಸ್ಲೀಂ ಜಗಳ ಸೃಷ್ಟಿಸಿ ಮತ ಪಡೆಯುವುದು ಅಷ್ಟು ಸಲುಭವಾಗಿಲ್ಲ. ಉದಾಹರಣೆಗೆ ಇಂಥದೇ ಕೋಮು ಧ್ರುವೀಕರಣ ಮಾಡಲು ಯೋಗಿ ಆದಿತ್ಯನಾಥ್ ‘ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ 80% V/s 20%’ ಎಂದಿದ್ದರು. ಅಂದರೆ 80 ಪರ್ಸೆಂಟ್ ಹಿಂದುಗಳು ಹಾಗೂ 20 ಪರ್ಸೆಂಟ್ ಮುಸ್ಲಿಮರು ಎಂದು ಬಿಂಬಿಸಲು ಪ್ರಯತ್ನಪಟ್ಟರು. ಆದರೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಕೊಟ್ಟ ತಿರುಗೇಟಿಗೆ ಬಿಜೆಪಿ ತತ್ತರಿಸಿ ಹೋಗುವಂತಾಯಿತು. ಅಖಿಲೇಶ್ ಯಾದವ್ ‘ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ 85% V/s 15%’ ಎಂದು ಹೇಳಿದರು. ಅಂದರೆ 85 ಪರ್ಸೆಂಟ್ ಹಿಂದುಳಿದವರು ಮತ್ತು 15 ಪರ್ಸೆಂಟ್ ಮೇಲ್ಜಾತಿಯವರು ಎಂದು. ಬಿಜೆಪಿ ಧರ್ಮದ ರಾಜಕಾರಣ ಮಾಡಿದರೆ. ಅಖಿಲೇಶ್ ಯಾದವ್ ಜಾತಿಯ ಅಸ್ತ್ರ ಪ್ರಯೋಗಿಸಿದರು.
ಅಖಿಲೇಶ್ ಯಾದವ್ ಜಾತಿ ಅಸ್ತ್ರ ಹೂಡುತ್ತಿದ್ದಂತೆ ಬಿಜೆಪಿ ಇನ್ನಷ್ಟು ಚಿಂತಾಕ್ರಾಂತವಾಗಿದೆ. ಬಿಜೆಪಿ ಚಿಂತೆಗೆ ಇನ್ನೂ ಒಂದು ಪ್ರಮುಖ ಕಾರಣವೂ ಇದೆ. ಅದೇನೆಂದರೆ ಮೊದಲ (ಫೆಬ್ರವರಿ 10) ಮತ್ತು ಎರಡನೇ (ಫೆಬ್ರವರಿ 14) ಹಂತದ ಮತದಾನ ನಡೆಯುವುದು ಪಶ್ಚಿಮ ಉತ್ತರ ಪ್ರದೇಶದಲ್ಲಿ. ಈ ಎರಡೂ ಹಂತಗಳಲ್ಲಿ ನಡೆಯುವ 136 ಕ್ಷೇತ್ರಗಳಲ್ಲಿ ಮುಸ್ಲಿಮ್ ಹಾಗೂ ಜಾಟ್ ಸಮುದಾಯದ ಮತಗಳೇ ನಿರ್ಣಾಯಕ. 2014 ಮತ್ತು 2019ರ ಲೋಕಸಭಾ ಹಾಗೂ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಾಟ್ ಸಮುದಾಯವನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟಿತ್ತು. ಪರಿಣಾಮವಾಗಿ ಈ ಭಾಗದಲ್ಲಿ ಲಾಭವನ್ನೂ ಮಾಡಿಕೊಂಡಿತ್ತು. ಆದರೆ ಪರಿಸ್ಥಿತಿ ಈ ಬಾರಿ ಬಿಜೆಪಿಗೆ ಪೂರಕವಾಗಿಲ್ಲ.
ಮೊದಲಿಗೆ ಕೇಂದ್ರ ಸರ್ಕಾರ ತಂದಿದ್ದ ಮೂರು ಕೃಷಿ ಕಾಯಿದೆಗಳು ರೈತರಿಗೆ ಅಂದರೆ ಇಲ್ಲಿ ಜಾಟ್ ಸಮುದಾಯಕ್ಕೆ ಮಾರಕವಾಗಿವೆ. ಇದರಿಂದ ಜಾಟ್ ಸಮುದಾಯ ಬಿಜೆಪಿ ಬಗ್ಗೆ ಆಕ್ರೋಶಗೊಂಡಿತ್ತು. ಇದಾದ ಬಳಿಕ ಕೃಷಿ ಕಾಯಿದೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಜಾಟ್ ಮುಖಂಡರ ಮೇಲೆ ಉತ್ತರ ಪ್ರದೇಶ ಸರ್ಕಾರ ಹಲವಾರು ಕಠಿಣ ಕಾಯ್ದೆಗಳ ಅಡಿ ಮೊಕದ್ದಮೆ ದಾಖಲಿಸಿದೆ. ಭಾರತೀಯ ಕಿಸಾನ್ ಯೂನಿಯನ್ ಸಂಚಾಲಕ ರಾಕೇಶ್ ಟಿಕಾಯತ್ ಕಣ್ಣೀರು ಹಾಕುವಂತೆ ಮಾಡಿತ್ತು.

ಇದೆಲ್ಲದಕ್ಕೂ ಮೀರಿ ಸಮಾಜವಾದಿ ಪಕ್ಷ ಮತ್ತು ಆರ್ ಎಲ್ ಡಿ ಮೈತ್ರಿ ಆಗಬಹುದು ಎಂಬ ಅಂದಾಜು ಮಾಡದೆ ಜಾಟ್ ಸಮುದಾಯವನ್ನು ಕಡೆಗಣಿಸಲು ಜಾಟರ ಸಾಂಪ್ರದಾಯಿಕ ಎದುರಾಳಿಗಳಾದ ಗುಜ್ಜರ್ ಮತದಾರರನ್ನು ಓಲೈಸಲು ಬಿಜೆಪಿ ಪ್ರಯತ್ನಿಸಿತು. ಗುಜ್ಜಾರ್ ಮತದಾರರನ್ನು ಬಿಜೆಪಿಗೆ ಸೆಳೆಯುವ ಏಕಮಾತ್ರ ಉದ್ದೇಶದಿಂದ 9ನೇ ಶತಮಾನದ ದೊರೆ, ‘ಗುರ್ಜರ್–ಪ್ರತಿಹಾರ್’ ಸಮುದಾಯದ ಮಿಹಿರ್ಭೋಜಾ ಅವರ ಗೌರವಾರ್ಥ ಗೌತಮ ಬುದ್ಧ ನಗರದ ಪದವಿ ಕಾಲೇಜು ಆವರಣದಲ್ಲಿ ಮಿಹಿರ್ಭೋಜಾ ಅವರ 12 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಗುಜ್ಜರ್ ಮತದಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಖುದ್ದು ಯೋಗಿ ಆದಿತ್ಯನಾಥ್ ಅವರೇ ಕಾರ್ಯಕ್ರಮ ಆಯೋಜಿಸಿದ್ದರು. ಈ ಎಲ್ಲಾ ಸಂಗತಿಗಳಿಂದ ಜಾಟ್ ಸಮುದಾಯ ಬಿಜೆಪಿ ಬಗ್ಗೆ ಭಾರೀ ಆಕ್ರೋಶಗೊಂಡಿದೆ.
ಮೊದಲ ಮತ್ತು ಎರಡನೇ ಹಂತದ ಮತದಾನ ನಡೆಯುವ 136 ಕ್ಷೇತ್ರಗಳ ಪೈಕಿ ಜಾಟ್ ಸಮುದಾಯದ ಪಕ್ಷ ಎಂದೇ ಹೇಳಿಕೊಳ್ಳುವ ರಾಷ್ಟ್ರೀಯ ಲೋಕದಳ 36 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದ 100 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಹುರಿಯಾಳುಗಳು ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳು ಸ್ಥಳೀಯ ಸಾಮರ್ಥ್ಯದ ಅನುಸಾರ ಅಭ್ಯರ್ಥಿಗಳನ್ನೂ ಅದಲು-ಬದಲು ಮಾಡಿಕೊಂಡಿವೆ. ಅಂದರೆ ಮೈತ್ರಿ ಅಷ್ಟರಮಟ್ಟಿಗೆ ಗಟ್ಟಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದು-ಮುಸ್ಲೀಂ ರಾಜಕಾರಣ ಮಾಡಲು ಬಿಜೆಪಿಗೆ ಅವಕಾಶ ಮಾಡಿಕೊಡಬಾರದೆಂದು ಕಳೆದ ಬಾರಿಗಿಂತ ಕಡಿಮೆ ಸಂಖ್ಯೆಯ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಈ ಎಲ್ಲದರ ಪರಿಣಾಮ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ಜಾಟ್ ಮತಗಳು ಮತ್ತು ರಾಷ್ಟ್ರೀಯ ಲೋಕದಳದ ಅಭ್ಯರ್ಥಿಗಳಿಗೆ ಮುಸ್ಲಿಮ್ ಮತಗಳು ವರ್ಗವಾಗುವುದು ಖಚಿತ ಎನ್ನಲಾಗುತ್ತಿದೆ.
ಪರಿಸ್ಥಿತಿ ಹೀಗೆ ಒಂದೇ ಏಟಿಗೆ ತಮಗೆ ವಿರುದ್ಧವಾಗಿ ನಿರ್ಮಾಣವಾಗಿರುವುದರಿಂದ ಬಿಜೆಪಿ ಆತಂಕಗೊಂಡಿದೆ. ಮೊದಲ ಮತ್ತು ಎರಡನೇ ಹಂತದ ಮತದಾನದ ವೇಳೆ ಬಿಜೆಪಿ ಪರವಾದ ವಾತಾವರಣ ಇಲ್ಲ ಎಂಬ ಸಂದೇಶ ರವಾನೆಯಾಗಿಬಿಟ್ಟರೆ ಮುಂದಿನ ಹಂತಗಳ ಮೇಲೂ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಈಗ ಖುದ್ದು ಅಮಿತ್ ಶಾ ಅಖಾಡಕ್ಕೆ ಇಳಿದಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ನಿವಾಸದಲ್ಲಿ ಸುಮಾರು 200 ಜಾಟ್ ಪ್ರಭಾವಿಗಳು, ಪಂಚಾಯತ್ ಮತ್ತು ಜಿಲ್ಲಾ ಮಟ್ಟದ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬಿಜೆಪಿ ಮತ್ತು ಜಾಟ್ ಸಮುದಾಯದ ಬಾಂಧವ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಬಿಜೆಪಿಯಂತೆ ಜಾಟರು 650 ವರ್ಷಗಳ ಕಾಲ ಮೊಘಲರ ವಿರುದ್ಧ ಹೋರಾಡಿದ್ದಾರೆ. ಆದರೆ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೂ ಬಿಜೆಪಿಗೆ ಜಾಟ್ ಸಮುದಾಯದ ಬಗ್ಗೆ ಪ್ರಿತಿ ಇದೆ. ಆದ್ದರಿಂದ ಚುನಾವಣೋತ್ತರ ಮೈತ್ರಿಯನ್ನಾದರೂ ಮಾಡಿಕೊಳ್ಳುವಂತೆ ಸಮುದಾಯದ ಮುಖಂಡರು ಜಯಂತ್ ಚೌಧರಿಗೆ ತಿಳಿಸಿ ಎಂದು ಕೇಳಿಕೊಂಡಿದ್ದಾರೆ.
ಅಲ್ಲದೆ ಕಬ್ಬಿನ ಬಾಕಿ ಪಾವತಿ ಮತ್ತು ಉದ್ಯೋಗಗಳಲ್ಲಿ ಜಾಟ್ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬೇಕೆಂಬ ಸಮುದಾಯದ ಬೇಡಿಕೆಗಳನ್ನು ಬಿಜೆಪಿ ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ಭರವಸೆ ನೀಡಿದ್ದಾರೆ. ನಾನು ಯುಪಿಯಿಂದ ರಾಷ್ಟ್ರೀಯ ರಾಜಕೀಯ ಪ್ರಾರಂಭಿಸಿದೆ. ನಾನು ಎದುರಿಸಿದ ಮೂರು ಚುನಾವಣೆಗಳಲ್ಲೂ ಜಾಟ್ ಸಮುದಾಯ ನನ್ನನ್ನು ತುಂಬು ಹೃದಯದಿಂದ ಬೆಂಬಲಿಸಿದೆ. ಏಕೆಂದರೆ ಜಾಟ್ಗಳು ಬಿಜೆಪಿಯಂತೆ ಸ್ವಾರ್ಥಕ್ಕಾಗಿ ಯೋಚಿಸುವುದಿಲ್ಲ. ಜಾಟ್ ಸಮುದಾಯ ಕೂಡ ದೇಶದ ಭದ್ರತೆಗಾಗಿ ಯೋಚಿಸುತ್ತದೆ. ಬಿಜೆಪಿ 3 ಜಾಟ್ ರಾಜ್ಯಪಾಲರು ಮತ್ತು 9 ಸಂಸದರು ಇರುವಂತೆ ನೋಡಿಕೊಂಡಿದೆ ಎಂದು ಭಾವನಾತ್ಮಕವಾಗಿ ಜಾಟರನ್ನು ಸೆಳೆಯುವ ಮಾತನ್ನಾಡಿದ್ದಾರೆ.
ಹೀಗೆ ಅಮಿತ್ ಶಾ ಜಾಟ್ ಸಮುದಾಯವನ್ನು ಸೆಳೆಯಲು ಪ್ರಯತ್ನಿಸಿ ಚುನಾವಣೋತ್ತರ ಮೈತ್ರಿ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಅವರು ‘ನಿಮ್ಮ ಈ ಆಹ್ವಾನ ರೈತ ಆಂದೋಲನದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಹೋಗಬೇಕಿತ್ತು. ನನಗಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ರಾಕೆಶ್ ಟಿಕಾಯತ್ ಅವರು ‘ಯೋಗಿ ಆದಿತ್ಯನಾಥ್ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ನೋಡುವ ಆಸೆ’ ಎಂದು ವ್ಯಂಗ್ಯವಾಡಿದ್ದಾರೆ. ಜಾಟ್ ಸಮುದಾಯವನ್ನು ಸೆಳೆಯುವ ಬಿಜೆಪಿಯ ಕಡೆ ಗಳಿಗೆಯ ಪ್ರಯತ್ನ ಕೈಗೂಡುತ್ತಾ ಎನ್ನುವುದು ಮಾರ್ಚ್ 10ರಂದು ಗೊತ್ತಾಗಲಿದೆ.






