ಪಶ್ಚಿಮ ಬಂಗಾಳ ವಿಧಾನಸಭಾ ಹೋರಾಟದ ಕೇಂದ್ರಬಿಂದುವಾದ ನಂದಿಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಭಾಷಣಗಳು ‘ಪಾಕಿಸ್ತಾನ’, ‘ಬೇಗಂ’ ಮತ್ತು ‘ಈದ್’ ಮುಂತಾದ ಪದಗಳನ್ನೇ ಕೇಂದ್ರೀಕರಿಸಿದೆ. ಈ ಮೂಲಕ ಬಿಜೆಪಿಯು ಸ್ಪಷ್ಟವಾಗಿ ಕೋಮು ಧ್ರುವೀಕರಣ ಮಾಡಿ ಬಂಗಾಳವನ್ನು ಗೆಲ್ಲಲು ಹೊರಟಂತಿದೆ.
ಮಾರ್ಚ್ 29 ಸೋಮವಾರ ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಅಭ್ಯರ್ಥಿ ಸುವೇಂದು ಅಧಿಕಾರಿ “ಬೇಗಂ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯವು ಮಿನಿ ಪಾಕಿಸ್ತಾನವಾಗಿ ಬದಲಾಗುತ್ತದೆ” ಎಂದಿದ್ದಾರೆ.
ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಯಾಗಿರುವ ಮಮತಾ ಬ್ಯಾನರ್ಜಿಯನ್ನು ಉಲ್ಲೇಖಿಸಿ ಬೇಗಂ ಎಂದು ಕರೆಯಲಾಗುತ್ತಿದೆ, ಮತ್ತು ಇದು ಮುಸ್ಲಿಂ ಮತದಾರರಿಗೆ ಬ್ಯಾನರ್ಜಿ ಅವರ ನಿಕಟತೆಯನ್ನು ಉಲ್ಲೇಖಿಸುತ್ತದೆ. ಕಳೆದ ಕೆಲವು ದಿನಗಳಿಂದಲೂ ಸುವೆಂದು ಅವರು ನಂದಿಗ್ರಾಮ್ ಮತ್ತು ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕ ಸಭೆಗಳಲ್ಲಿ, ಬ್ಯಾನರ್ಜಿಯನ್ನು ‘ಬೇಗಂ’ ಎಂದೇ ಉಲ್ಲೇಖಿಸುತ್ತಿದ್ದಾರೆ.

“ಮಮತಾ ನಿಯಮಿತವಾಗಿ ‘ಈದ್ ಮುಬಾರಕ್’ ಎಂದು ಹೇಳುತ್ತಾರೆ ಮತ್ತು ಅದು ಅವರ ಅಭ್ಯಾಸವಾಗಿ ಮಾರ್ಪಟ್ಟಿದೆ. ಎಷ್ಟರಮಟ್ಟಿಗೆಂದರೆ, ಡಾಲ್ (ಬಂಗಾಳದ ವಸಂತ ಹಬ್ಬ, ಸಾಮಾನ್ಯವಾಗಿ ಹೋಳಿಗೆ ಮುಂಚಿತವಾಗಿ ಆಚರಿಸಲಾಗುವ ಹಬ್ಬ)ಹಬ್ಬದಂದು ಅವರು ಎಲ್ಲರಿಗೂ ‘ಹೋಳಿ ಮುಬಾರಕ್’ ಎಂದು ಹಾರೈಸುತ್ತಾರೆ” ಎಂದು ಅಧಿಕಾರಿ ಅವರು ‘ಮಿನಿ-ಪಾಕಿಸ್ತಾನ’ ಎನ್ನುವ ಮೊದಲು ಹೇಳಿದ್ದರು.
“ಅವರು ಈಗ ಹಿಂದೂಗಳಂತೆ ವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಚಾರ ಮಾಡುತ್ತಿರುವ ಕ್ಷೇತ್ರಕ್ಕೆ ಅನುಗುಣವಾಗಿ ವರ್ತಿಸುತ್ತಾರೆ. ಎಗ್ರಾದಲ್ಲಿ ಪ್ರಚಾರ ಮಾಡುವಾಗ, ಅವರು ಖಲೀಮಾಗಳನ್ನು (ಇಸ್ಲಾಮಿಕ್ ನುಡಿಗಟ್ಟುಗಳು) ಪಠಿಸುತ್ತಿದ್ದರು. ನಂದಿಗ್ರಾಮದಲ್ಲಿ ಅವರು ತಪ್ಪಾದ ಚಂಡಿಪಾತ್ (ಹಿಂದೂ ಮಂತ್ರ) ಎಂದು ಜಪಿಸುತ್ತಿದ್ದರು” ಎಂದು ಸುವೆಂದು ಅಧಿಕಾರಿ ಸೋಮವಾರ ಹೇಳಿಕೆ ನೀಡಿದ್ದಾರೆ .
ಎರಡು ದಿನಗಳ ಹಿಂದೆ ಅಂದರೆ ಮಾರ್ಚ್ 27 ರಂದು ನಂದಿಗ್ರಾಮದ ದೌಡ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಸುವೆಂದು “ನಂದಿಗ್ರಾಮದಲ್ಲಿ ಪಾಕಿಸ್ತಾನಿಗಳ ಗೂಂಡಾಗಿರಿಯನ್ನು ನಾನು ಹಿಂದೆಂದೂ ನೋಡಿಲ್ಲ. ನಂದಿಗ್ರಾಮ ಒಂದು ನಿಲುವು ತೆಗೆದುಕೊಳ್ಳುವ ಅಗತ್ಯವಿದೆ. ನಂದಿಗ್ರಾಮ ಬೇಗಂಗೆ ಮತ ಹಾಕಲು ಅಂತಿಮವಾಗಿ ಸೂಫಿಯಾನ್ ಅನ್ನು ಬಲಪಡಿಸುತ್ತದೆಯೋ? ” ಎಂದು ಪ್ರಶ್ನಿಸಿದ್ದರು.

ಶೇಖ್ ಸೂಫಿಯಾನ್ ನಂದಿಗ್ರಾಮದ ಟಿಎಂಸಿ ಅನುಭವಿ ನಾಯಕ ಮತ್ತು 2007 ರಲ್ಲಿ ಈ ಪ್ರದೇಶದಲ್ಲಿ ಭೂಸ್ವಾಧೀನ ವಿರೋಧಿ ಆಂದೋಲನಕ್ಕೆ ನೇತೃತ್ವ ವಹಿಸಿದ್ದ ‘ಭೂಮಿ ಉಚೆಡ್ ಪ್ರತಿರೋಧ್ ಸಮಿತಿ’ಯ ಪ್ರಮುಖ ಮುಖಂಡರಲ್ಲಿ ಒಬ್ಬರು.
ಮಾರ್ಚ್ 20 ರಂದು, ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುವಾಗ, “ನಿಮಗೆ ಮೇದಿನಿಪುರದ ಮಣ್ಣಿನ ಮಗ ಬೇಕೇ ಅಥವಾ ಶೇಖ್ ಸೂಫಿಯಾನ್ ಕಣ್ಣುಗಳ ಮೂಲಕ ನಂದಿಗ್ರಾಮವನ್ನು ನೋಡಲು ನೀವು ಬಯಸುವಿರಾ? ಅವರು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣ ಸಣ್ಣ ಪಾಕಿಸ್ತಾನವನ್ನು ರಚಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಗೆದ್ದರೆ, ಅವರು ಪಟಾಕಿ ಸಿಡಿಸುತ್ತಾರೆ, ಸಿಹಿತಿಂಡಿಗಳನ್ನು ವಿತರಿಸುತ್ತಾರೆ ಮತ್ತು ಮಾಂಸವನ್ನು ತಿನ್ನುತ್ತಾರೆ. ನೀವು ಅವರಿಗೆ ನಂದಿಗ್ರಾಮ್ ಹಸ್ತಾಂತರಿಸಲು ಬಯಸುವಿರಾ?ಅದರ ಬಗ್ಗೆ ಯೋಚಿಸಿ” ಎಂದು ಕೇಳಿದ್ದರು.
ಟಿಎಂಸಿಯ ಮುಸ್ಲಿಂ ನಾಯಕರನ್ನು ಹೈಲೈಟ್ ಮಾಡಲು ಮತ್ತು ಕೋಮು ಧ್ರುವೀಕರಣ ಮಾಡಲು ಉತ್ಸುಕವಾಗಿರುವ ಅಧಿಕಾರಿ, ಮಮತಾ ಬ್ಯಾನರ್ಜಿಯವರು ನಂದಿ ಗ್ರಾಮದಲ್ಲಿ ಗೆದ್ದರೂ ಕೋಲ್ಕತ್ತಾಕ್ಕೆ ಮರಳುತ್ತಾರೆ ಎಂಬುವುದರ ಕಡೆಗೆ ಬೊಟ್ಟು ಮಾಡುತ್ತಾ “ಮೇಡಮ್ ಇಲ್ಲಿಂದ ಗೆದ್ದರೆ, ಕೋಲ್ಕತ್ತಾಗೆ ಮರಳುತ್ತಾರೆ. ನೀವು ಎಲ್ಲರೂ ಕಾಗದಪತ್ರಗಳಿಗಾಗಿ ಸೂಫಿಯಾನ್ ಮನೆಗೆ ಹೋಗಬೇಕಾಗುತ್ತದೆ. ಮಹಿಳೆಯರು ಸೂಫಿಯಾನ್ ಮನೆಗೆ ಹೋಗುವುದು ಸುರಕ್ಷಿತವೇ? ಅಥವಾ ಇತರರಿಗಾದರೂ ಇದು ಸುರಕ್ಷಿತವೇ? ” ಅಧಿಕಾರಿಯು ಮತ್ತೊಂದು ಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಬಿರುಲಿಯಾ ಗ್ರಾಮ ಪಂಚಾಯಿತಿಯ ಪಲ್ಲಬ್ ಜನ “ದೀದಿ ಗೆದ್ದರೆ ಅವರು ಮತ್ತೆ ಕೋಲ್ಕತ್ತಾಗೆ ಹೋಗುತ್ತಾರೆ. ಅವರು ಇಲ್ಲಿ ಉಳಿಯುವುದಿಲ್ಲ ಎಂಬುದು ಸ್ಪಷ್ಟ. ನಂತರ ಜಾತಿ ಪ್ರಮಾಣಪತ್ರವನ್ನು ಪಡೆಯಲು ಸಹ ನಾವು ಸೂಫಿಯಾನ್ ಮನೆಗೆ ಹೋಗಬೇಕು. ನಾವು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಬಿಜೆಪಿಯ ಅಭಿಯಾನಗಳಲ್ಲಿ ಸೂಫಿಯಾನ್ ಅವರ ಮುಸ್ಲಿಂ ಗುರುತನ್ನು ಆತಂಕ ಎಂದು ಚಿತ್ರಿಸಲಾಗಿದೆ. ಅಲ್ಲದೆ ಮಮತಾ ಬ್ಯಾನರ್ಜಿ ಹಿಜಾಬ್ ಧರಿಸಿ ಪ್ರಾರ್ಥನೆ ಸಲ್ಲಿಸುವ ತಿರುಚಿದ ಫೋಟೋಗಳೂ ವಾಟ್ಸಪ್ನಲ್ಲಿ ಹಂಚಲ್ಪಡುತ್ತಿದೆ.
ನಂದಿಗ್ರಾಮ್ ವಿಧಾನಸಭಾ ಕ್ಷೇತ್ರವನ್ನು ನಂದಿಗ್ರಾಮ್ 1 ಮತ್ತು ನಂದಿಗ್ರಾಮ್ 2 ಎಂದು ವಿಭಜಿಸಲಾಗಿದೆ. ನಂದಿಗ್ರಾಮ್ 1 ಬ್ಲಾಕ್ನಲ್ಲಿ ಒಟ್ಟು ಜನಸಂಖ್ಯೆಯ 34-35% ಮುಸ್ಲಿಮರು, ನಂದಿಗ್ರಾಮ್ 2ರಲ್ಲಿ ಈ ಸಂಖ್ಯೆ ಸುಮಾರು 10-12% ರಷ್ಟಿದೆ. ಒಟ್ಟಾರೆಯಾಗಿ, ನಂದಿಗ್ರಾಮ್ ಮತದಾರರಲ್ಲಿ ಕಾಲು ಭಾಗ ಮುಸ್ಲಿಮರು.

2019 ರ ಲೋಕಸಭಾ ಚುನಾವಣೆಯಲ್ಲಿ ನಂದಿಗ್ರಾಮ್ ವಿಧಾನಸಭೆ ವಿಭಾಗದಿಂದ ಬಿಜೆಪಿಗೆ 62,000 ಮತಗಳು ಬಂದಿದ್ದವು. ರಾಜಕೀಯ ವೀಕ್ಷಕರು ಬಿಜೆಪಿಗೆ ಹೋದ ಹೆಚ್ಚಿನ ಮತಗಳು ಬಿಜೆಪಿ ಪರವಾಗಿರುವುದಕ್ಕಿಂತ ಹೆಚ್ಚಾಗಿ ಟಿಎಂಸಿಯಲ್ಲಿದ್ದ ಸುವೇಂದು ಅಧಿಕಾರಿಯ ವಿರುದ್ಧ ಚಲಾಯಿಸಲ್ಪಟ್ಟ ಮತಗಳು ಎಂದು ಅಭಿಪ್ರಾಯ ಪಟ್ಟಿದ್ದರು.

ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿಯ ಈ ಬಾರಿಯ ಚುನಾವಣಾ ಅಭಿಯಾನದಲ್ಲಿ ಬಹಿರಂಗವಾಗಿ ಕೋಮುವಾದ ಗೋಚರಿಸುತ್ತಿದೆ. ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಹಲವು ಎಡಪಂಥೀಯ ಮತದಾರರು ಅವರಿಗೆ ವಿರುದ್ದವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. “ಹಾಗಾಗಿ ಅಧಿಕಾರಿ ಅವರು ಹಿಂದೊಮ್ಮೆ ಮತದಾರರು ತಮ್ಮ ವಿರುದ್ಧ ಇದ್ದರು ಎಂಬುವುದನ್ನು ಸಂಪೂರ್ಣ ಮರೆತುಬಿಡಬೇಕು ಎಂದು ಪಾಕಿಸ್ತಾನ, ಹಿಂದೂ-ಮುಸ್ಲಿಂ ಎಂದು ಮತ ಧ್ರುವೀಕರಣ ಮಾಡುತ್ತಿದ್ದಾರೆ” ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.





