ಆರೋಗ್ಯ ಸೇತು ಮೊಬೈಲ್ ಆ್ಯಪ್ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಸರ್ಕಾರಗಳ ಯಾವುದೇ ಅಂಗಸಂಸ್ಥೆಗಳು ನಾಗರೀಕರಿಗೆ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಅನಿವಾರ್ ಎ ಅರವಿಂದ್ ಎಂಬುವವರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಅಭಯ್ ಓಕಾ ಮತ್ತು ಜಸ್ಟಿಸ್ ಅಶೋಕ್ ಎಸ್ ಕಿನ್ನಗಿ ಅವರಿದ್ದ ಪೀಠವು, ಈ ಆದೇಶವನ್ನು ನೀಡಿದೆ. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಎರಡು ಕೋರಿಕೆಗಳನ್ನು ಮುಂದಿಟ್ಟಿದ್ದರು. ಒಂದು, ಆರೋಗ್ಯ ಸೇತು ಮೊಬೈಲ್ ಆ್ಯಪ್ ಇಲ್ಲದ ಕಾರಣಕ್ಕೆ ಸರ್ಕಾರದಿಂದ ಲಭಿಸುವ ಯಾವುದೇ ಸೌಲಭ್ಯ ಅಥವಾ ಸೇವೆಗಳನ್ನು ನಿರಾಕರಿಸಬಾರದು. ಎರಡನೇಯದು, ಈ ಅರ್ಜಿಯ ವಿಚಾರಣೆ ನಡೆಯುವವರೆಗೂ ಆರೋಗ್ಯ ಸೇತು ಮೊಬೈಲ್ ಆ್ಯಪ್ಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಸರ್ಕಾರಗಳು ಮುಂದುವರೆಸಬಾರದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯಗೊಳಿಸುವುದು, ಸಂವಿಧಾನದ 14ನೇ, 19ನೇ ಮತ್ತು 21ನೇ ವಿಧಿಗಳಿಗೆ ವಿರುದ್ದವಾದದ್ದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Also Read: ಆರೋಗ್ಯ ಸೇತು: ಭಾರತದ 9 ಕೋಟಿ ಜನರ ಗೌಪ್ಯ ಮಾಹಿತಿ ಅಪಾಯದಲ್ಲಿ
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ನ್ಯಾಯವಾದಿ ಎಂ ಎನ್ ಕುಮಾರ್ ಅವರು, ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅರ್ಜಿದಾರರ ಪರ ವಕೀಲ ಕಾಲಿನ್ ಗೊನ್ಸಾಲ್ವಿಸ್, ಈ ವಿಚಾರಣೆಯು ಹಲವಾರು ಬಾರಿ ಮುಂದೂಡಲ್ಪಟ್ಟಿದೆ. ಸಿಬ್ಬಂದಿ ತರಬೇತಿ ಇಲಾಖೆಯು ಆರೋಗ್ಯ ಸೇತು ಮೊಬೈಲ್ ಆ್ಯಪ್ ಹೊಂದಿರುವುದು ಕಡ್ಡಾಯ ಎಂದು ಈಗಲೂ ತನ್ನ ಸುತ್ತೋಲೆಯಲ್ಲಿ ನಮೂದಿಸುತ್ತಿದೆ ಎಂದು ಹೇಳಿದರು.
Also Read: ಪ್ರಧಾನಿ ಮೋದಿ ಆಪ್ತ ಮುಖೇಶ್ ಅಂಬಾನಿ ತೆಕ್ಕೆಗೆ ದೇಶದ ಜನರ ‘ಆರೋಗ್ಯ ಸೇತು’ ಆಪ್ ಮಾಹಿತಿ!
ಎಲ್ಲಾ ಇಲಾಖೆಗಳು ರಾಷ್ಟ್ರೀಯ ಕಾರ್ಯಕಾರಿ ಸಮಿತಿ (National Executive Committee) ಯ ಆದೇಶಗಳಿಗೆ ಬದ್ದವಾಗಿರುತ್ತವೆ. NEC ಹೇಳಿರುವ ಪ್ರಕಾರ, ಆರೋಗ್ಯ ಸೇತು ಆ್ಯಪ್ ಕಡ್ಡಾಯವಲ್ಲ. ದೇಶದ ಇತರ ಯಾವುದೇ ಇಲಾಖೆಯು ಇದನ್ನು ಮೀರುವಂತಿಲ್ಲ, ಎಂದು ಕುಮಾರ್ ಅವರು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದರು.
ವಿಚಾರಣೆಯನ್ನು ಆಲಿಸಿದ ನ್ಯಾಯಾಲಯವು ಅರ್ಜಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನವೆಂಬರ್ 3ರ ವರೆಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
Also Read: ಮರೆತುಹೋದ ಜವಾಬ್ದಾರಿ: ಭಾರತದಲ್ಲಿ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ





