ಇವತ್ತು ಶ್ರೀರಾಮ ನವಮಿ, ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪಾನಕ, ಮಜ್ಜಿಗೆ, ಕೊಸಂಬರಿ ಹಂಚಿಕೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಶ್ರೀರಾಮ ನವಮಿ ಆಚರಣೆಗೆ ಅಡ್ಡಗಾಲು ಹಾಕಿದೆ ಚೀನಾ ಜನಿತ ಕರೊನಾ ವೈರಸ್ . ಕರೊನಾ ವೈರಸ್ ತಡೆಯಲು ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಿರುವ ಕಾರಣ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲೂ ಸಾಂಪ್ರದಾಯಿಕ ಆಚರಣೆ ಹೊರತುಪಡಿಸಿ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಿದೆ. ಅದೂ ಅಲ್ಲದೆ ಅಯೋಧ್ಯೆ ಶ್ರೀರಾಮನಿಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪಿತ್ತ ಬಳಿಕ ಮೊದಲ ಬಾರಿಗೆ ಬಂದಿರುವ ಶ್ರೀರಾಮ ನವಮಿಯನ್ನು ಆಚರಣೆ ಮಾಡಲು ರಾಮಭಕ್ತರಿಗೆ ಸಾಧ್ಯವಾಗಿಲ್ಲ ಎನ್ನುವುದು ಮಾತ್ರ ವಿಪರ್ಯಾಸ. ಇದರ ಜೊತೆಗೆ ಉತ್ತರ ಪ್ರದೇಶದಲ್ಲಿ ಕೋವಿಡ್ – 19 ಮಹಾಮಾರಿ ದಿನದಿಂದ ದಿನಕ್ಕೆ ಉತ್ತಂಗದತ್ತ ಸಾಗುತ್ತಿದೆ. ಈ ಕರೋನಾ ವೈರಸ್ ಮಹಾಮಾರಿ ತಡೆಯಲು ಯೋಗಿ ಆದಿತ್ಯನಾಥದ ಕೇಳಿಕೊಂಡಿರುವುದು ಅದೇ ಶ್ರೀರಾಮನ ಬಳಿ. ಆದರೆ ಅಯೋಧ್ಯೆ ಶ್ರೀರಾಮನಲ್ಲ, ಕರುನಾಡ ಶ್ರೀರಾಮನನ್ನು ಎನ್ನುವುದು ಅಚ್ಚರಿಯ ವಿಚಾರ.
ಮಂಡ್ಯ ಜಿಲ್ಲೆ ನಾಗಮಂಗಲದ ಲಾಳನಕೆರೆ ಗ್ರಾಮದವರಾದ ಸುಹಾಸ್ ಲಾಳನಕೆರೆ ಯತಿರಾಜ್ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ. ಕ್ರೀಡಾಪಟುವಾಗಿರುವ ಸುಹಾಸ್ ಲಾಳನಕೆರೆ ಯತಿರಾಜ್, ಬ್ಯಾಡ್ಮಿಂಟನ್
ವಿಶ್ವ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದೀಗ ಇದೇ ಸುಹಾಸ್ ಲಾಳನಕೆರೆ ಯತಿರಾಜ್ , ಉತ್ತರ ಪ್ರದೇಶದಲ್ಲಿ ಕರೋನಾ ವೈರಸ್ ತಡೆಗಟ್ಟಲು ನೇಮಕವಾಗಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳ ಯಶಸ್ಸಿನ ಹಿಂದಿನ ರೂವಾರಿ ಸುಹಾಸ್ ಲಾಳನಕೆರೆ ಯತಿರಾಜ್ . ಜಿಲ್ಲಾಧಿಕಾರಿ ಆಗಿದ್ದ ಸುಹಾಸ್
ಲಾಳನಕೆರೆ ಯತಿರಾಜ್ , ಕುಂಭಮೇಳದಲ್ಲಿ ಯಾವುದೇ ಕುಂದುಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಿದ್ದರು. ಆ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಗಮನ ಸೆಳೆದಿದ್ದರು. ಇದೀಗ ಕರೋನಾ ಪೀಡಿತ ಜಿಲ್ಲೆ ಎನಿಸಿಕೊಂಡಿರುವ ಗೌತಮ ಬುದ್ಧ ನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕರೊನಾ ವೈರಸ್ ಹೆಮ್ಮಾರಿ ಹರಡುವುದನ್ನು ಸುಹಾಸ್ ಲಾಳನಕೆರೆ ಯತಿರಾಜ್ ತಡೆಯುತ್ತಾರೆ ಎನ್ನುವ ವಿಶ್ವಾಸ ಯೋಗಿ ಆದಿತ್ಯನಾಥ್ ಅವರದ್ದು.
ಭಾರತದಾದ್ಯಂತ ಲಗಾಮು ಇಲ್ಲದ ಕುದುರೆ ಓಟಕ್ಕಿಂತಲೂ ಜೋರಾಗಿ ಓಡುತ್ತಿದೆ ಕೊರೊನಾ ಮಹಾಮಾರಿ. ಈ ಹೆಮ್ಮಾರಿ ಕರೋನಾ ಸೋಂಕು ತಡೆಗಟ್ಟಲು ಶ್ರೀರಾಮನ ರೂಪದಲ್ಲಿ ಉತ್ತರಪ್ರದೇಶದಲ್ಲಿ ಕಾಣಿಸಿರುವುದು ಮಂಡ್ಯದ ಗಂಡು ಸುಹಾಸ್
ಲಾಳನಕೆರೆ ಯತಿರಾಜ್ ಅವರು. ಶಿವಮೊಗ್ಗದ ಸೇಕ್ರೇಡ್ ಹಾರ್ಟ್ ಚರ್ಚ್ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ಬಳಿಕ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ನಂತರ ಸೂರತ್ಕಲ್ ನಲ್ಲಿ ಎಂಜಿನಿಯರ್ ಪದವಿಯನ್ನು ಮುಗಿಸಿದ್ದರು. ಆ ಬಳಿಕ 2007ರಲ್ಲಿ ಮೊದಲ ಬಾರಿಗೆ ಭಾರತೀಯ ಆಡಳಿತಾತ್ಮಕ ಪರೀಕ್ಷೆ ಎದುರಿಸಿದ ಸುಹಾಸ್
ಲಾಳನಕೆರೆ ಯತಿರಾಜ್ , ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿ ಆಯ್ಕೆಯಾದರು. ಆಗ್ರಾದಲ್ಲಿ ಪ್ರೊಬೆಷನರಿ ಅವಧಿ ಮುಗಿಸಿದ ಸುಹಾಸ್ ಲಾಳನಕೆರೆ ಯತಿರಾಜ್
ಅವರು, ಅಜಮ್ ಘಡ, ಮಥುರಾ, ಅಲಹಾಬಾದ್ ನಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಕಳೆದ ವರ್ಷ ಪ್ರಯಾಗ್ ರಾಜ್ ಜಿಲ್ಲಾಧಿಕಾರಿಯಾಗಿ ಯಶಸ್ವಿ ಕುಂಭಮೇಳ ಆಯೋಜಿಸಿದ ಬಳಿಕ ಸುಹಾಸ್ ಕಾರ್ಯವೈಖರಿ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.

ವೃತ್ತಿಪರ ಪ್ಯಾರಾ ಅಥ್ಲೆಟಿಕ್ ಆಗಿರುವ ಸುಹಾಸ್ ಲಾಳನಕೆರೆ ಯತಿರಾಜ್
, ಬ್ಯಾಡ್ಮಿಂಟನ್ ವಿಶ್ವ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. 2016ರಲ್ಲಿ ಚೀನಾದ ಬೀಜಿಂಗ್ ನಲ್ಲಿ ನಡೆದ ಏಷ್ಯಾ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬ್ರೆಜಿಲ್ ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಪರ ಚಿನ್ನದ ಪದಕ ಗಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವವ ಯಶ್ ಭಾರತಿಗೆ ಭಾಜನರಾಗಿರುವ ಸುಹಾಸ್ ಲಾಳನಕೆರೆ ಯತಿರಾಜ್ , ಇದೀಗ ಗೌತಮಬುದ್ಧ ನಗರ ಜಿಲ್ಲಾಧಿಕಾರಿಯಾಗಿ ಸವಾಲು ಸ್ವೀಕಾರ ಮಾಡಿದ್ದಾರೆ. ಭಾರತದಲ್ಲಿ 2072 ಕರೋನಾ ಸೋಂಕಿತರು ಇದ್ದು, ಉತ್ತರ ಪ್ರದೇಶದಲ್ಲಿ 117 ಪಾಸಿಟಿವ್ ಕೇಸ್
ಗಳು ಪತ್ತೆಯಾಗಿದ್ದು, ಗೌತಮಬುದ್ಧ ನಗರದಲ್ಲೇ ಅತಿಹೆಚ್ಚು 34 ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಶ್ರೀರಾಮನ ಹುಟ್ಟೂರು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಕರೋನಾ ವೈರಸ್ ಸೋಂಕು ತಡೆಯಲು ಮಂಡ್ಯದ ಗಂಡು ಸುಹಾಸ್ ಲಾಳನಕೆರೆ ಯತಿರಾಜ್ ಶ್ರೀರಾಮ ರೂಪದಲ್ಲೇ ಗೌತಮಬುದ್ಧ ನಗರಕ್ಕೆ ಧಾವಿಸಿದ್ದಾರೆ. ಇದು ಕನ್ನಡಿಗರ ಹೆಮ್ಮೆ.






