ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ನಾಡಗೀತೆ **’ಜಯ ಭಾರತ ಜನನಿಯ ತನುಜಾತೆ’**ಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ನಾಡಗೀತೆಗೆ 100 ವರ್ಷಗಳು ಪೂರ್ಣಗೊಂಡಿರುವ ಬೆನ್ನಲ್ಲೇ, ಮೂಲ ಗೀತೆಯಲ್ಲಿ ಇದ್ದು ನಂತರ ಕೈಬಿಟ್ಟಿದ್ದ ‘ಬೌದ್ಧ’ ಎಂಬ ಪದವನ್ನು ಮರು ಸೇರ್ಪಡೆಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ, ಪ್ರಸ್ತುತ ನಾಡಗೀತೆಯಲ್ಲಿರುವ ‘ಜೈನರುದ್ಯಾನ’ ಎಂಬ ಪದವನ್ನು ‘ಜೈನಬೌದ್ಧರುದ್ಯಾನ’ ಎಂದು ಪರಿಷ್ಕರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ಏಕೆ ಈ ಬದಲಾವಣೆ?
ಕುವೆಂಪು ಅವರು ರಚಿಸಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಉಲ್ಲೇಖ ಇದ್ದರೂ, ಕಾಲಕ್ರಮೇಣ ಆ ಪದ ಬಳಕೆಯಿಂದ ಹೊರಗುಳಿದಿತ್ತು. ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಲ್ಲಿ ಬೌದ್ಧ ಧರ್ಮಕ್ಕೂ ಮಹತ್ವದ ಸ್ಥಾನವಿರುವುದರಿಂದ, ಮೂಲ ಆಶಯವನ್ನು ಪುನಃ ಪ್ರತಿಬಿಂಬಿಸುವ ಉದ್ದೇಶದಿಂದ ಈ ಪದವನ್ನು ಮರು ಸೇರ್ಪಡೆಗೊಳಿಸುವಂತೆ ಸಮಿತಿ ಅಭಿಪ್ರಾಯಪಟ್ಟಿದೆ.
ಪದ ಬದಲಾವಣೆ ಮಾತ್ರವಲ್ಲದೆ, ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ ಜನಪ್ರಿಯ ರಾಗ ಮತ್ತು ಧಾಟಿಯಲ್ಲೇ ‘ಜೈನಬೌದ್ಧರುದ್ಯಾನ’ ಎಂಬ ಪದವನ್ನು ಅಳವಡಿಸಿ ನಾಡಗೀತೆಯನ್ನು ಮರು ಸಂಯೋಜಿಸುವ ಪ್ರಸ್ತಾವನೆಯೂ ಇದೆ. ಈ ಕಾರ್ಯಕ್ಕಾಗಿ ರಚಿಸಲಾದ ಸಮಿತಿಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಚಿದಾನಂದ ಗೌಡ, ಪ್ರೊ. ಕಾಳೇಗೌಡ ನಾಗವಾರ, ಎಸ್.ಜಿ. ಸಿದ್ದರಾಮಯ್ಯ, ಡಾ. ಮೂಡ್ನಕೂಡು ಚಿನ್ನಸ್ವಾಮಿ, ಡಾ. ಸಿ.ಎಸ್. ದ್ವಾರಕನಾಥ್, ಡಾ. ಮೀನಾಕ್ಷಿ ಬಾಳಿ ಹಾಗೂ ಡಾ. ಎಂ.ಎಸ್. ಆಶಾದೇವಿ ಸೇರಿದಂತೆ ಹಲವು ಗಣ್ಯರು ಸದಸ್ಯರಾಗಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ಕೇವಲ 20ನೇ ವಯಸ್ಸಿನಲ್ಲಿ, 1924ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಈ ನಾಡಗೀತೆಯನ್ನು ರಚಿಸಿದ್ದರು. ಬಳಿಕ ಅದು ‘ಕೊಳಲು’ ಕವನ ಸಂಕಲನದ ಮೂಲಕ ಜನಪ್ರಿಯಗೊಂಡಿತು. ಇತ್ತೀಚೆಗೆ ಈ ಗೀತೆಗೆ ಶತಮಾನೋತ್ಸವ ಆಚರಿಸಲಾಗಿದ್ದು, ಅದರ ಬೆನ್ನಲ್ಲೇ ಕುವೆಂಪು ಅವರ ಮೂಲ ಆಶಯಕ್ಕೆ ಅನುಗುಣವಾಗಿ ನಾಡಗೀತೆಯನ್ನು ಪರಿಷ್ಕರಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.ಸಮಿತಿಯ ಶಿಫಾರಸಿನ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಂಡ ಬಳಿಕವೇ ಪರಿಷ್ಕೃತ ನಾಡಗೀತೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು.






