ದೇಶಾದ್ಯಂತ ಆತಂಕ ಸೃಷ್ಟಿಸಿರುವ “ಡಿಜಿಟಲ್ ಅರೆಸ್ಟ್” ಸೈಬರ್ ವಂಚನೆ ಇದೀಗ ಮತ್ತೊಮ್ಮೆ ಭಾರೀ ಸದ್ದು ಮಾಡಿದೆ. ಸಿಬಿಐ ಹಾಗೂ ಇಡಿ ಅಧಿಕಾರಿಗಳ ಹೆಸರಿನಲ್ಲಿ ಹಿರಿಯ ಮಹಿಳೆಯೊಬ್ಬರನ್ನು ಬೆದರಿಸಿ ಸುಮಾರು 24 ಕೋಟಿ ರೂಪಾಯಿ ವಂಚಿಸಿರುವ ಶಾಕ್ಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿನ್ನಲೆಯಲ್ಲಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ 74 ವರ್ಷದ ಲಕ್ಷ್ಮೀ ರಾಮಮೂರ್ತಿ ಎಂಬ ನಿವೃತ್ತ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ತಾವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ನಂಬಿಸಿದ್ದರು. “ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಳಸಲಾಗಿದೆ” ಎಂದು ಹೇಳಿ ಮಹಿಳೆಯನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದರು.

ಸೈಬರ್ ವಂಚಕರು ಮೊದಲು ಕರೆ ಮಾಡಿ, ಬಳಿಕ ವಿಡಿಯೊ ಕಾಲ್ ಮೂಲಕ ನಕಲಿ ಪೊಲೀಸ್ ಕಚೇರಿ, ಯೂನಿಫಾರ್ಮ್ ಮತ್ತು ನಕಲಿ ದಾಖಲೆಗಳನ್ನು ತೋರಿಸುತ್ತಾರೆ. “ನೀವು ತನಿಖೆಯಲ್ಲಿದ್ದೀರಿ”, “ನಿಮ್ಮ ಮೇಲೆ ಕೇಸ್ ದಾಖಲಾಗಿದೆ” ಎಂದು ಬೆದರಿಸಿ, ಯಾರೊಂದಿಗೂ ಮಾತನಾಡಬಾರದು ಎಂದು ಸೂಚಿಸುತ್ತಾರೆ. ಇದನ್ನೇ “ಡಿಜಿಟಲ್ ಅರೆಸ್ಟ್” ಎಂದು ಕರೆಯಲಾಗುತ್ತದೆ.

ಈ ಪ್ರಕರಣದಲ್ಲೂ ಮಹಿಳೆಯನ್ನು ತಿಂಗಳುಗಳ ಕಾಲ ಭಯಭೀತಗೊಳಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಫೆಬ್ರವರಿಯಿಂದ ಏಪ್ರಿಲ್ವರೆಗೆ ಒಟ್ಟು 26 ವ್ಯವಹಾರಗಳ ಮೂಲಕ 23 ಮ್ಯೂಲ್ ಖಾತೆಗಳಿಗೆ ಸುಮಾರು 24 ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ವಂಚಕರು ಮಹಿಳೆಯಿಂದ ಇನ್ನೂ 3 ಕೋಟಿ ರೂಪಾಯಿ ಪಡೆಯಲು ಚಿನ್ನದ ಸಾಲ ಮಾಡಿಸುವ ಯತ್ನದಲ್ಲಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತಕ್ಷಣ ಕರ್ನಾಟಕ ಸೈಬರ್ ಕಮಾಂಡ್ಗೆ ಮಾಹಿತಿ ನೀಡಲಾಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ ಮತ್ತಷ್ಟು ಹಣ ವರ್ಗಾವಣೆ ಆಗುವುದನ್ನು ತಡೆದಿದ್ದಾರೆ.
ಹಣದ ಹಾದಿ ಪತ್ತೆ ಹಚ್ಚಿದ ಪೊಲೀಸರು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಳಿಯಿಂದ ಮೊಬೈಲ್ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ 5 ಕೋಟಿಗೂ ಹೆಚ್ಚು ಹಣವನ್ನು ಫ್ರೀಜ್ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ದೇಶದಾದ್ಯಂತ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಜಾಲ ಕಾರ್ಯನಿರ್ವಹಿಸುತ್ತಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ
- ಸಿಬಿಐ, ಇಡಿ ಅಥವಾ ಪೊಲೀಸ್ ಇಲಾಖೆ ಎಂದಿಗೂ ವಿಡಿಯೊ ಕಾಲ್ ಮೂಲಕ “ಅರೆಸ್ಟ್” ಮಾಡುವುದಿಲ್ಲ
- OTP, ಬ್ಯಾಂಕ್ ವಿವರ ಅಥವಾ ಹಣ ವರ್ಗಾವಣೆ ಕೇಳುವುದಿಲ್ಲ
- ಬೆದರಿಕೆ ಕರೆ ಬಂದರೆ ತಕ್ಷಣ 1930 ಸೈಬರ್ ಸಹಾಯವಾಣಿ ಸಂಪರ್ಕಿಸಬೇಕು
- ಯಾವುದೇ ಅನುಮಾನಾಸ್ಪದ ಕರೆಗಳನ್ನು ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು
ಸೈಬರ್ ಅಪರಾಧಿಗಳು ಹೊಸ ಹೊಸ ತಂತ್ರಗಳನ್ನು ಬಳಸುತ್ತಿರುವ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದಿರುವುದು ಅತ್ಯಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ.






