ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧವೂ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಈಗಾಗಲೇ ವಾಯು ಹಾಗೂ ಕ್ಷಿಪಣಿಗಳ ದಾಳಿಯನ್ನು ನಿಲ್ಲಿಸಿ, ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದು ನಡೆದ ಸಂಧಾನ ಮಾತುಕತೆ ವಿಫಲವಾಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಮೆರಿಕದ ಮೊಂಡುತನದ ಬೇಡಿಕೆಗಳ ಹಿನ್ನೆಲೆಯಲ್ಲಿ ಇರಾನ್ ಸಂಧಾನದಿಂದ ಹಿಂದಕ್ಕೆ ಸರಿದಿದೆ. ಅಲ್ಲದೆ ಅಂತರರಾಷ್ಟ್ರೀಯ ಹಡಗುಗಳ ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸುವುದು ಕಾನೂನುಬಾಹಿರ ಕೃತ್ಯ ಮತ್ತು ಕಡಲ್ಗಳ್ಳತನಕ್ಕೆ ಸಮಾನವಾಗಿದೆ ಎಂದು ಇರಾನ್ನ ಸಶಸ್ತ್ರ ಪಡೆಗಳು ಅಮೆರಿಕದ ವಿರುದ್ಧ ಕಿಡಿಕಾರಿವೆ.
ಮುಖ್ಯವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ. ಇದರಿಂದ ಇರಾನಿನ ಬಂದರುಗಳನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲಾ ಸಮುದ್ರ ಸಂಚಾರವನ್ನು ನಿರ್ಬಂಧಿಸುವುದಾಗಿ ಅಮೆರಿಕ ಸೇನೆ ಹೇಳಿದೆ.
ಇದನ್ನೂ ಓದಿ : ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು
ಇನ್ನೂ ಅಮೆರಿಕ ಶಾಂತಿ ನೆಲೆಸುವ ಉದ್ದೇಶದಿಂದ ಸಂಧಾನಕ್ಕೆ ಬಂದಿರಲಿಲ್ಲ, ತಳಬುಡವಿಲ್ಲದ ಬೇಡಿಕೆಗಳೊಂದಿಗೆ ಆಗಮಿಸಿದ್ದ ಕಾರಣ ಪಾಕಿಸ್ತಾನದಲ್ಲಿ ಅಮೆರಿಕದೊಂದಿಗಿನ ಮಾತುಕತೆ ವಿಫಲವಾಯಿತು ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸಿ, ಮಾರೂಬ್ನಲ್ಲಿ ನಾಲ್ಕು ಜನರನ್ನು ಬಲಿ ಪಡೆದಿದೆ. ಹಿಜ್ಬೊಲ್ಲಾ ಉಗ್ರ ಸಂಘಟನೆ ಜೊತೆಗಿನ ಘರ್ಷಣೆಗಳು ಮುಂದುವರಿದಂತೆ ಇಸ್ರೇಲಿ ಸೈನಿಕರು ಬಿಂಟ್ ಜೆಬೈಲ್ ಪಟ್ಟಣದ ಎಲ್ಲಾ ಪ್ರವೇಶದ್ವಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯ ನಂತರ, ಇರಾನ್ನ ರೆಡ್ ಕ್ರೆಸೆಂಟ್ ಸೊಸೈಟಿ ತನ್ನ ರಕ್ಷಣಾ ತಂಡಗಳು ಅವಶೇಷಗಳಡಿಯಿಂದ 620 ಜನರನ್ನು ರಕ್ಷಿಸಿವೆ ಎಂದು ವರದಿಗಳು ಹೇಳಿವೆ.
ಇನ್ನೂ ದಾಳಿಯ ಪರಿಣಾಮವಾಗಿ ದೇಶಾದ್ಯಂತ ಒಟ್ಟು 125,630 ನಾಗರಿಕ ಪ್ರದೇಶದ ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಇದರಲ್ಲಿ ಸುಮಾರು 100,000 ವಸತಿ ಘಟಕಗಳು ಮತ್ತು ಸುಮಾರು 24,000 ವಾಣಿಜ್ಯ ಆಸ್ತಿಗಳು ಸೇರಿವೆ ಎಂಬ ಮಾಹಿತಿಯೂ ಹೊರಬಿದ್ದಿದೆ.






