ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಸಾರ್ವಜನಿಕ ಸಭೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೆಟಿಸಿ ನಗರದಲ್ಲಿ ಭಾರೀ ಗಮನ ಸೆಳೆದಿತು. ಪಾಲಯಂಕೊಟ್ಟೈ ಕ್ಷೇತ್ರದಲ್ಲಿ ನಡೆದ ಈ ಸಮಾವೇಶದಲ್ಲಿ ಮಾತನಾಡಿದ ವಿಜಯ್, “ನನ್ನ ಹೃದಯದಲ್ಲಿ ವಾಸಿಸುವ ತಿರುನಲ್ವೇಲಿಯ ಜನರಿಗೆ ನಮಸ್ಕಾರ” ಎಂದು ಮಾತು ಆರಂಭಿಸಿದರು.

ಸಭೆಯಲ್ಲಿ ಅವರು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಡಿಎಂಕೆ ಸಂಪೂರ್ಣ ಅಧಿಕಾರದಲ್ಲಿದ್ದರೆ, ಈ ಕಾರ್ಯಕ್ರಮವನ್ನೇ ತಡೆಯಲು ಪ್ರಯತ್ನಿಸುತ್ತಿದ್ದರು” ಎಂದು ಆರೋಪಿಸಿದರು. ಜೊತೆಗೆ, ಡಿಎಂಕೆ ಮತ್ತು ಬಿಜೆಪಿ ವಿಭಿನ್ನ ಪಕ್ಷಗಳಂತೆ ಕಾಣಿಸಿಕೊಂಡರೂ, ತಮ್ಮ ವಿರುದ್ಧ ಒಂದಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ರಾಜಕೀಯ ಪ್ರವಾಸದಲ್ಲಿ ಕೆಲವರು ಅಡ್ಡಿಪಡಿಸಲು ಯತ್ನಿಸಿದರೂ ಅದು ಫಲಕಾರಿಯಾಗಿಲ್ಲ ಎಂದು ಹೇಳಿದ ವಿಜಯ್, “ನನ್ನ ಮೇಲೆ ಹಲವು ರೀತಿಯ ಒತ್ತಡ ತಂದು ನಿಲ್ಲಿಸಲು ಪ್ರಯತ್ನಿಸಿದರೂ, ಯಾವ ಪ್ರಯತ್ನವೂ ಯಶಸ್ವಿಯಾಗಿಲ್ಲ” ಎಂದು ಹೇಳಿದರು.
ಈ ವೇಳೆ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಮೇಲೂ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಅವರು, ಕುಟುಂಬದ ಬೆಂಬಲದ ಮಹತ್ವವನ್ನು ಉಲ್ಲೇಖಿಸಿದರು. “ನನ್ನ ವೈಯಕ್ತಿಕ ಬದುಕಿನ ಮೇಲೆ ದಾಳಿ ಮಾಡಲು ಕಾಯುತ್ತಿದ್ದರೂ, ಅದೂ ವಿಫಲವಾಗಿದೆ. ನನ್ನನ್ನು ಅಥವಾ ಈ ಚಳುವಳಿಯನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ” ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ವಿಜಯ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ವೈಯಕ್ತಿಕ ಜೀವನದ ಕುರಿತು ನಡೆದಿರುವ ಬೆಳವಣಿಗೆಗಳಿಗೂ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.







