ಬದುಕಿನಲ್ಲಿ ಸ್ಪಷ್ಟ ಗುರಿ.. ಸಾಧಿಸುವ ಛಲ.. ದೂರದೃಷ್ಟಿಯ ಯೋಚನೆ, ನಿಖರವಾದ ಯೋಜನೆ, ತಾನು ಮಾಡುವ ಕೆಲಸದಲ್ಲಿ ಶಿಸ್ತು, ಬದ್ಧತೆಯನ್ನು ಮೈಗೂಡಿಸಿಕೊಂಡಾಗ ಏನು ಬೇಕಾದ್ರೂ ಸಾಧಿಸಬಹುದು. ಯಾವುದು ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ ಪ್ರಸನ್ನ ಎಡಿಕೇರಿ.

ಹೌದು, ಪ್ರಸನ್ನ ಒಬ್ಬ ಯಶಸ್ವಿ ಉದ್ಯಮಿ. ಭಾರತದ ಕಾರ್ಪೋರೇಟ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ. ಸುಮಾರು ೨೫ ವರ್ಷಗಳ ಹಿಂದೆ ಪದವಿ ಶಿಕ್ಷಣ ಮುಗಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮಾಯನಗರಿ ಬೆಂಗಳೂರಿಗೆ ಕಾಲಿಟ್ಟಾಗ ಗೊತ್ತು ಗುರಿ ಇರಲಿಲ್ಲ. ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ ಪ್ರಸನ್ನ ಅವರು, ಉದಯನಗರದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಲೆಕ್ಕಪಾಲಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

ನಂತರ ತಮ್ಮ ಆಸಕ್ತಿ ಮತ್ತು ಸಾಮರ್ಥದ ಆಧಾರದ ಮೇಲೆ ಮಾರ್ಕೆಟಿಂಗ್ ಮತ್ತು ಜಾಹೀರಾತು ರಂಗಕ್ಕೆ ಪ್ರವೇಶಿಸಿದ್ರು. ಸುಮಾರು ೧೩ ವರ್ಷಗಳ ಕಾಲ ವಿವಿಧ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರತಿಯೊಂದು ಅನುಭವ ಕೂಡ ಪ್ರಸನ್ನ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿತ್ತು. ಜಾಹೀರಾತು ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದ ಪ್ರಸನ್ನ ತನ್ನದೇ ಸಂಸ್ಥೆಯೊಂದನ್ನು ಕಟ್ಟುವ ಸಾಹಸಕ್ಕೆ ಕೈ ಹಾಕಿದರು. ಆಗ ಅವರಿಗೆ ಬೆಂಬಲವಾಗಿ ನಿಂತಿದ್ದು ಪತ್ನಿ ದೀಪ್ತಿ ಕೆದಂಬಾಡಿ.
View this post on Instagram
೨೦೧೩ರಲ್ಲಿ ಬೆಂಗಳೂರು ಅನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಸಂಸ್ಥೆ ಈಗ ದೇಶದ ಪ್ರಮುಖ ಜಾಹೀರಾತು ಸಂಸ್ಥೆಯಾಗಿ ಹೊರಹೊಮ್ಮಿದೆ. ಕರ್ನಾಟಕ, ಚೆನ್ನೈ,ಹೈದ್ರಬಾದ್, ಕೊಲ್ಕತ್ತಾ ಸೇರಿ ದೇಶದ ೨೫ ರಾಜ್ಯಗಳಲ್ಲಿ ಅಡ್ವರ್ಟೈಸಿಂಗ್ ಸಂಸ್ಥೆಯಾಗಿ ತನ್ನ ನೆಟ್ವರ್ಕ್ ಅನ್ನು ವಿಸ್ತರಿಸಿದೆ. ಕಳೆದ ೧೩ ವರ್ಷಗಳಿಂದ ಪ್ಯಾನ್ ಇಂಡಿಯಾ ನೆಟ್ ವರ್ಕ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಲೀಡಿಂಗ್ ಎಡ್ಜ್ ಸಂಸ್ಥೆಯು ಡೈರೆಕ್ಟ್ ಮತ್ತು ಇನ್ ಡೈರೆಕ್ಟ್ ಕ್ಲೆಂಟ್ಗಳನ್ನು ಹೊಂದಿದೆ. ಅಲ್ಲದೆ ವೃತ್ತಿಪರ ಹಾಗೂ ಅನುಭವಿ ಸಿಬ್ಬಂದಿಗಳ ಮೂಲಕ ಗ್ರಾಹಕರ ಮನ ಗೆಲ್ಲಲು ಸಫಲವಾಗಿದೆ. ಉತ್ಪನ್ನಗಳ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಲು, ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಲು ಯೋಜನೆಗಳನ್ನು ನಿರ್ಮಿಸುವುದು ಮತ್ತು ಅದನ್ನು ಅನುಷ್ಠಾನಗೊಳಿಸುವುದರಲ್ಲಿ ಲೀಡಿಂಗ್ ಎಡ್ಜ್ ಮುಂಚೂಣಿಯಲ್ಲಿದೆ. ಹಾಗೇ ಮನೆಗಳ ಮೇಲೆ ಜಾಹೀರಾತು, ಸಿನಿಮಾಗಳಲ್ಲಿ ಜಾಹೀರಾತು, ಮಾಲ್ ಮೀಡಿಯಾ ಅಡ್ವರ್ಟೈಸಿಂಗ್, ಬಿಟಿಎಲ್ ಆಕ್ಟಿವಿಟೀಸ್, ಈವೆಂಟ್ಸ್ & ಡೆಕೋರ್, ಕ್ರಿಯೇಟಿವ್ ಏಜೆನ್ಸಿಗಳ ಸೇವೆಗಳನ್ನು ನೀಡುತ್ತಿದೆ.

ಪ್ರಸನ್ನ ಎಡಿಕೇರಿ ಅವರು, ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಳ್ಳಮಾವತಿ ಗ್ರಾಮದವರು. ಸೇನಾ ಕುಟುಂಬದಲ್ಲಿ ಜನಿಸಿದ್ದ ಇವರು, ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದ ಕುಶಾಲಪ್ಪ ಮತ್ತು ರಾಧಾ ಕುಶಾಲಪ್ಪ ದಂಪತಿಗಳ ಏಕೈಕ ಪುತ್ರ. ತಂದೆಯ ಸೇನಾ ಜೀವನದ ಶಿಸ್ತು, ಶ್ರಮ ಹಾಗೂ ತಾಯಿಯಿಂದ ಪಡೆದ ಸಂಸ್ಕಾರಗಳು ಅವರ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ರೂಪಿಸಿದೆ. ತನ್ನ ಪ್ರತಿ ಹೆಜ್ಜೆಯಲ್ಲೂ ನೆರಳಾಗಿ ನಿಂತಿರುವ ಪತ್ನಿ ದೀಪ್ತಿ ಕೆದಂಬಾಡಿ ಅವರು, ಕೊಡಗಿನ ಚೆಟ್ಟಿಮಾನಿ ಜಯಪ್ರಕಾಶ್ ಕೆದಂಬಾಡಿ ಮತ್ತು ಚೊಂಡಮ್ಮ ದಂಪತಿಯ ಪುತ್ರಿ. ಇವರಿಗೆ ಪರಿನಿತ್ ಎಡಿಕೇರಿ ಎಂಬ ಪುತ್ರನಿದ್ದು, ಬೆಂಗಳೂರು ಉತ್ತರದ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ದ್ವಿತೀಯ ಪಿಯೂಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲಿ ರಾಷ್ಟ್ರೀಯ ಶೂಟಿಂಗ್ ಶಿಬಿರದಲ್ಲಿ ಸೇರ್ಪಡೆಗೊಂಡಿರುವ ಪರಿನಿತ್ ಒಲಿಂಪಿಕ್ಸ್ನಲ್ಲಿ ಸ್ಪರ್ಧೆ ಮಾಡಿ ಪದಕ ಗೆಲ್ಲಬೇಕು ಎಂಬ ಮಹಾದಾಸೆಯನ್ನಿಟ್ಟುಕೊಂಡಿದ್ದಾರೆ.
View this post on Instagram
ಸಮಾಜ ಸೇವೆ
ಕೊಡಗಿನ ಕುಗ್ರಾಮವೊಂದರಿಂದ ಬರಿಗೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರಸನ್ನ ಅವರು, ಇಂದು ನೂರಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಉದ್ಯಮದ ಜೊತೆಗೆ ಸಮಾಜ ಸೇವೆ, ಧಾರ್ಮಿಕ ಸೇವೆ, ಕ್ರೀಡಾ ಕ್ಷೇತ್ರಕ್ಕೂ ಸತತವಾಗಿ ಪ್ರೋತ್ಸಾಹ, ಬೆಂಬಲವನ್ನು ನೀಡುತ್ತಿದ್ದಾರೆ. ಅದರಲ್ಲೂ ೨೦೧೮ರಲ್ಲಿ ತನ್ನೂರಿನಲ್ಲಿ ಸಂಭವಿಸಿದ್ದ ಜಳಪ್ರಳಯದಿಂದ ಸಂತ್ರಸ್ಥ ಕುಟುಂಬಗಳಿಗೆ ನೆರವಿನ ಹಸ್ತ ನೀಡಿದ್ರು. ಸಮಾಜ ಸೇವೆಯ ಮಹತ್ವವನ್ನು ಅರಿತುಕೊಂಡ ಪ್ರಸನ್ನ ಅವರು ತಮ್ಮ ಆದಾಯ ಒಂದು ಭಾಗವನ್ನು ಸಮಾಜ ಸೇವೆಗಾಗಿಯೇ ಮುಡುಪಾಗಿಟ್ಟಿದ್ದಾರೆ. ಹಾಗೇ ಕೊಡಗಿನಲ್ಲಿ ನಡೆಯುವ ಸಮುದಾಯದ ಕ್ರೀಡಾಕೂಟ, ಇನ್ನಿತರ ಕ್ರೀಡಾಕೂಟಗಳಿಗೂ ಉತ್ತೇಜನ ನೀಡುತ್ತಿದ್ದಾರೆ. ಎಲೈಟ್ ಕ್ರಿಕೆಟ್ ಕ್ಲಬ್ ಮೂಲಕ ಯುವ ಆಟಗಾರರ ಪ್ರತಿಭೆ ಅನಾರವಣಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೀಗ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ನ ಮಾಲೀಕರಾಗಿದ್ದಾರೆ.
View this post on Instagram
ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಪ್ರಸನ್ನ ಎಡಿಕೇರಿ ಅವರು ಜ್ಞಾನ, ಅನುಭವ, ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜ, ಸಮುದಾಯದ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ. ವ್ಯವಹಾರದ ಯಶಸ್ಸು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಮತೋಲನದಲ್ಲಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನನಾಯಕನಾಗಬೇಕು ಎಂಬ ಸ್ಪಷ್ಟ ಗುರಿಯನ್ನಿಟ್ಟುಕೊಂಡಿದ್ದಾರೆ. ೨೦೨೮ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿರುವ ಪ್ರಸನ್ನ ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಧಾರ್ಮಿಕ ಸೇವಕನಾಗಿ, ಕ್ರೀಡಾ ಪ್ರೋತ್ಸಾಹಕನಾಗಿ ಗುರತಿಸಿಕೊಂಡಿರುವ ಪ್ರಸನ್ನ ಎಡಿಕೇರಿ ಜನಸೇವಕನಾಗಿ ಬೆಳೆಯಲಿ.






