ಬೆಂಗಳೂರು : 77ನೇ ಗಣರಾಜ್ಯೋತ್ಸವ(Republic Day) ಸಂಭ್ರಮ ಎಲ್ಲೆಡೆ ಸಂಭ್ರಮದಿಂದ ಕೂಡಿದ್ದು, ಮೈಸೂರಿನಲ್ಲಿಯೂ ಇದರ ಸಡಗರ ಜೋರಾಗಿದೆ. ಮೈಸೂರಿನ(Mysuru) ಬನ್ನೂರಿನಲ್ಲಿ(Bannor) ಕೂಡ ಗಣತಂತ್ರ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬನ್ನೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಆದಿ ಚುಂಚನಗಿರಿ ಬಾಲ ಜಗತ್ ಪ್ರೈಮರಿ ಹಾಗೂ ಹೈಸ್ಕೂಲ್ನಲ್ಲಿ ಸೇರಿದಂತೆ ಬನ್ನೂರಿನ ಮೂರು ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ಸೇವಕರು ಹಾಗೂ ಪಕ್ಷಿ ಪ್ರೇಮಿಗಳಾದ ಮಹೇಂದ್ರ ಸಿಂಗ್ ಕಾಳಪ್ಪ ರಾಜಪುರೋಹಿತ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರ ಧ್ವಜಾರೋಹಣದ ಬಳಿಕ ಅತಿಥಿಪರ ನುಡಿಗಳನ್ನಾಡಿದ ಅವರು, ಇಂದಿನ ಯುವ ಸಮೂಹದಲ್ಲಿ ಸಂವಿಧಾನದ ಅರಿವು ಮೂಡಬೇಕಿದೆ. ನಾವು ಭಾರತೀಯರು ನಾವೆಲ್ಲರೂ ಒಂದೇ. ನಮ್ಮಲ್ಲಿ ಯಾವುದೇ ಕಾರಣಕ್ಕೂ ಭೇದ ಭಾವ, ಒಡಕು ಮೂಡಿಸುವ ಕೆಲಸಗಳು ಆಗಬಾರದು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಾದರಿಯಾದ ಸಂವಿಧಾನ ರಚಿಸಿದ್ದಾರೆ. ನಾವೆಲ್ಲ ಒಂದೇ ತಾಯಿಯ ಮಕ್ಕಳು, ಹಿಂದೂ, ಕ್ರೈಸ್ತ, ಜೈನ ಎಲ್ಲರೂ ಒಂದಾಗಿರಬೇಕು ಎಂದು ಏಕತೆಯ ಸಂದೇಶ ನೀಡಿದರು.

ಮಹಾತ್ಮಾ ಗಾಂಧಿ ನಮಗೆ ಅಹಿಂಸೆಯ ತತ್ವವನ್ನು ಭೋದಿಸಿದ್ದಾರೆ. ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ರಚನೆಗೆ ಕಾರಣರಾದ ಮಹನೀಯರನ್ನು ನಾವು ಸ್ಮರಿಸಬೇಕು ಎಂದು ಮಹೇಂದ್ರ ಸಿಂಗ್ ಕಾಳಪ್ಪ ಕರೆ ನೀಡಿದರು. ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಯಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.

ಮುಖ್ಯವಾಗಿ ಮೈಸೂರಿನಲ್ಲಿ ಯಾವುದೇ ಸಾಮಾಜಿಕ ಕಾರ್ಯಗಳಿದ್ದರೆ ಅಲ್ಲಿ ಮಹೇಂದ್ರ ಸಿಂಗ್ ಕಾಳಪ್ಪ ಅವರ ಹೆಸರು ಇದ್ದೆ ಇರುತ್ತದೆ. ಅಷ್ಟರ ಮಟ್ಟಿಗೆ ತಮ್ಮ ಜೀವನವನ್ನು ಸಮಾಜಕ್ಕಾಗಿಯೇ ಮೀಸಲಿಟ್ಟಿರುವ ಅಪರೂಪದ ಸಮಾಜ ಸೇವಕರಾಗಿದ್ದಾರೆ. ಪತ್ರಕರ್ತರಿಗೆ ಅಗತ್ಯ ವಸ್ತುಗಳ ಕಿಟ್, ಕೋವಿಡ್ ಸಂಕಟದ ಸಮಯದಲ್ಲಿ ಸಾರ್ವಜನಿಕರಿಗೆ ದಿನಸಿ ಆಹಾರ ಪದಾರ್ಥಗಳು ಹಾಗೂ ವೈದ್ಯಕೀಯ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದರು. ಅಲ್ಲದೆ ಮಹೇಂದ್ರ ಸಿಂಗ್ ಕಾಳಪ್ಪ ಅವರು ಉತ್ತಮವಾದ ಜನಸಂಪರ್ಕ ಹೊಂದಿರುವ ಸಮಾಜ ಸೇವಕರಾಗಿದ್ದು, ಸಂಕಟ ಅಂತ ಬಂದರೆ ಅವರು ನೊಂದವರಿಗೆ ಬೆಂಬಲವಾಗಿ ಮುಂಚೂಣಿಯಲ್ಲಿರುತ್ತಾರೆ ಎನ್ನುವುದು ವಿಶೇಷ.







