ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ಕಾಣುವ ಪದ ʼನಾಯಿ ಇದೆ ಎಚ್ಚರಿಕೆʼ. ಈಗ ಇದೇ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರಕ್ಕೆ ಈ ಶೀರ್ಷಿಕೆ ಏಕೆ? ಎಂಬದನ್ನು ಸಿನಿಮಾದಲ್ಲೇ ನೋಡಬೇಕು. ಲಾವಣ್ಯ ಗದೆ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ನಾಯಕನಾಗಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಲಿಲಾ ಮೋಹನ್ ಪಿವಿಆರ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಕಲಿ ಗೌಡ ಅವರು ನಿರ್ದೇಶಿಸಿದ್ದಾರೆ.

ನನಗೂ ಚಿತ್ರರಂಗಕ್ಕೂ ಹದಿನೈದು ವರ್ಷಗಳ ನಂಟು. ಈ ಹಿಂದೆ ʼತನಿಖೆʼ ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ʼನಾಯಿ ಇದೆ ಎಚ್ಚರಿಕೆʼ ಚಿತ್ರ ಶೀರ್ಷಿಕೆಯಲ್ಲಿ ಎಷ್ಟು ಕುತೂಹಲ ಮೂಡಿಸಿದೆಯೊ, ಅಷ್ಟೇ ಕುತೂಹಲ ಸಿನಿಮಾದಲ್ಲೂ ಇರುತ್ತದೆ. ಯಾರು ಊಹಿಸದ ರೋಚಕ ಸನ್ನಿವೇಶಗಳು ಈ ಚಿತ್ರದ ಹೈಲೆಟ್. ನಾಯಿ ನೀಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನೀಯತ್ತು ಕಡಿಮೆ ಆಗಲ್ಲ ಎಂಬದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವ ಭರವಸೆ ಇದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನವೆಂಬರ್ 28 ರಂದು ನಿಮ್ಮ ಮುಂದೆ ಬರಲಿದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ದೇಶಕ ಕಲಿ ಗೌಡ ಹೇಳಿದ್ದಾರೆ.

ಇನ್ನು ಚಿತ್ರದ ನಾಯಕ ಲೀಲಾ ಮೋಹನ್ ಮಾತನಾಡಿ, ʼನಾನು ವೃತ್ತಿಯಲ್ಲೂ ವೈದ್ಯ. ಈ ಚಿತ್ರದಲ್ಲೂ ವೈದ್ಯ. ಇದರಲ್ಲೂ ನನ್ನ ಹೆಸರು ಲೀಲಾ ಅಂತಲೇ.. ಇನ್ನೂ ಇದು ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತಾದ ಸಿನಿಮಾ. ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳನ್ನು ತೋರಿಸಿರುವ ಸಿನಿಮಾ ಕೂಡ ಹೌದು. ಇದರ ಜೊತೆಗೆ ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಜೊಂಬಿ(zombie) ಚಿತ್ರ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿʼ ಎಂದು ಸಿನಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.

ಡಾ.ಲೀಲಾಮೋಹನ್ ಪಿವಿಆರ್, ಪ್ರಮೋದ್ ಶೆಟ್ಟಿ, ಬಲ ರಾಜ್ ವಾಡಿ, ದಿವ್ಯಶ್ರೀ, ಮಾನಸ ಗೌಡ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಜಗಪ್ಪ, ಅನಿರುದ್ಧ್ ಮಹೇಶ್, ಪ್ರಬಿಕ್ ಮೊಗವೀರ್, ಚಂದನ, ರಿಷಿ, ಸೀನು ಮುಂತಾದವರು ತಾರಾಬಳಗದಲ್ಲಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಯುವ ಗಂಗಾಧರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳು ಹಾಗೂ ಶ್ರೀರಸ್ತು ಶುಭಮಸ್ತು, ನನ್ನರಸಿ ರಾಧೆ ಸೇರಿದಂತೆ ಅನೇಕ ಧಾರಾವಾಹಿಗಳ ಮೂಲಕ ಯುವ ಗಂಗಾಧರ್ ಜನಪ್ರಿಯರಾಗಿದ್ದಾರೆ. ಎ.ಜೆ.ಕುಮಾರ್ ಛಾಯಾಗ್ರಹಣ ಹಾಗೂ ರವೀಶ್ ಆತ್ಮರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.







