ಡಾ.ಬಿ.ಆರ್.ಅಂಬೇಡ್ಕರ್ ಗೆ (Dr B R Ambedkar) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವಮಾನ ಮಾಡಿದ್ದಾರೆ ಎಂದು ಖಂಡಿಸಿ ಇಂದು ಮಂಡ್ಯ ನಗರ ಬಂದ್ ಗೆ ಕರೆನೀಡಲಾಗಿದೆ. ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಸ್ವಯಂ ಪ್ರೇರಿತ ಮಂಡ್ಯ ಬಂದ್ ಗೆ ಕರೆ ನೀಡಲಾಗಿತ್ತು.
ಆದ್ರೆ ಮೊದ ಮೊದಲಿಗೆ ಬಂದ್ ಗೆ ಮಂಡ್ಯದಲ್ಲಿ ಬೆಂಬಲ ನೀಡದ ಜನರು, ಬಂದ್ ನಿಂದ ದೂರ ಉಳಿದಿದ್ದರು. ಕೇವಲ ಪ್ರತಿಭಟನೆ, ಬೈಕ್ ರ್ಯಾಲಿಗೆ ಮಂಡ್ಯ ಬಂದ್ ಸೀಮಿತವಾಗಿತ್ತು.

ಆದ್ರೆ ಗಂಟೆ ಬಳಿಕ ಪ್ರತಿಭಟನೆ ಚುರುಕುಗೊಂಡಿದೆ.ಮಂಡ್ಯ ನಗರದಾದ್ಯಂತ ಬೈಕ್ ರ್ಯಾಲಿ (Bike rally) ನಡೆಸಲಾಗಿದ್ದು,ಅಂಗಡಿ-ಮುಂಗಟ್ಟು ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.ಇನ್ನು ಕೆಲವೆಡೆ ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಲು ಯತ್ನ ಮಾಡಲಾಗಿದೆ.
ಈ ವೇಳೆ ನಗರದಾದ್ಯಂತ ಬೈಕ್ ರ್ಯಾಲಿ ನಡೆಸುತ್ತಿದ್ದ ಪ್ರತಿಭಟನಾಕಾರರು,ಬನ್ನೂರು ರಸ್ತೆಯ (Bannur road) ಅಂಗಡಿಯೊಂದರ ಬಾಗಿಲು ಮುಚ್ಚಿಸಲು ಯತ್ನಿಸಿದ್ದಾರೆ.ಈ ವೇಳೆ ಅಂಗಡಿ ಬಂದ್ ಮಾಡಲು ಮಾಲೀಕ ನಕಾರ ವ್ಯಕ್ತಪಡಿಸಿದ ಹಿನ್ನಲೆ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ಹಾಗೂ ಅಂಗಡಿ ಮಾಲೀಕನ ನಡುವೆ ಜಟಾಪಟಿ ನಡೆದಿದೆ.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರಿಗೆ ವಾರ್ನಿಂಗ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಲವಂತವಾಗಿ ಅಂಗಡಿ ಮುಚ್ಚಿಸದಂತೆ ತಾಕೀತು ಮಾಡಲಾಗಿದೆ. ಆ ಬಳಿಕ ಪ್ರತಿಭಟನಾಕಾರರನ್ನ ಪೊಲೀಸರು ಅಲ್ಲಿಂದ ಮುಂದೆ ಕಳುಹಿಸಿದ್ದಾರೆ.