ಕಲಬುರಗಿ: ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕುಖ್ಯಾತ ಆರೋಪಿ ಮೇಲೆ ನಗರ ಪೊಲೀಸರು ಗುಂಡಿನ ದಾಳಿ ನಡೆಸಿ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಲಿಗೆ ಗುಂಡು ತಗುಲಿ ಗಾಯಗೊಂಡ ದರೋಡೆಕೋರ ಅವತಾರ್ ಸಿಂಗ್ ನನ್ನುಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಕಲಬುರಗಿಯ ವಿವಿಧ ಠಾಣೆಗಳಲ್ಲಿ ದಾಖಲಾದ ಹಲವು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಅಗತ್ಯವಾಗಿದ್ದ.
ಕಾಲಿಗೆ ಗುಂಡು ಹೊಡೆದ ಇನ್ಸ್ಪೆಕ್ಟರ್ ಸಂತೋಷ್:ಕಾರ್ಯಾಚರಣೆ ವೇಳೆ ಅವತಾರ್ ಸಿಂಗ್ ಬಲಗಾಲಿಗೆ ಗುಂಡು ಹೊಡೆದ ಸಬ್ ಅರ್ಬನ್ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ತಟ್ಟೆಪಲ್ಲಿ ಒಂದು ಸುತ್ತು ಗಾಳಿಯಲ್ಲಿ ಗುಂಡಿ ಹಾರಿಸಿ, ಬಳಿಕ ತನ್ನ ಆತ್ಮರಕ್ಷಣೆಗಾಗಿ ಅವತಾರ್ ಸಿಂಗ್ ಕಾಲಿಗೆ ಫೈರಿಂಗ್ ನಡೆಸಿದ್ದಾರೆ.ಈ ಹಿಂದೆ ಬೀದರ್ ನಲ್ಲಿ ರೌಡಿಯೊಬ್ಬ ಚಾಕುವಿನಿಂದ ಇರಿದ ಸಂದರ್ಭದಲ್ಲಿ ತಟ್ಟೆಪಲ್ಲಿ ಅವರು ಗುಂಡು ಹಾರಿಸಿದ್ದರು.
ಅವತಾರ್ ಸಿಂಗ್ ಮೇಲೆ ವಿವಿಧ ಠಾಣೆಗಳಲ್ಲಿ ದರೋಡೆ ಸೇರಿ 13 ಪ್ರಕರಣಗಳು ದಾಖಲಾಗಿವೆ. ನಗರದ ಹೊರವಲಯದ ಡಾಬಾವೊಂದರ ದರೋಡೆ ಕೇಸ್ ನಲ್ಲಿ ಪೊಲೀಸರಿಗೆ ಅವತಾರ ಸಿಂಗ್ ಅವಶ್ಯಕವಿದ್ದ. ಕಳೆದ ಮೂರು ದಿನಗಳಿಂದ ಅವತಾರ ಸಿಂಗ್ ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಶನಿವಾರ ಉಪಳಾಂವ ಕ್ರಾಸ್ ಬಳಿಯಲ್ಲಿ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದರು. ಆದರೆ ಈ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿಗೆ ಮುಂದಾದಾಗ ಫೈರಿಂಗ್ ನಡೆಸಲಾಗಿದೆ.
ಇಬ್ಬರು ಪೊಲೀಸರಿಗೆ ಗಾಯ: ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಕಲಬುರಗಿ ನಗರ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಭೇಟಿ ನೀಡಿ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.