
ಆದ ಸುದ್ದಿ ನಿರೂಪಕಿಗೆ ಹುಡುಕಾಟ ನಡೆಸುತ್ತಿರುವ ಪೋಲೀಸರು
ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು ; ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನನ್ನು ಬೆದರಿಸಿ 15 ಲಕ್ಷ ರೂಪಾಯಿ ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧಿಸಿದಂತೆ ಪೋಲೀಸರು ಈರ್ವರನ್ನು ಬಂಧಿಸಿದ್ದಾರೆ. ‘ರಾಜ್ ನ್ಯೂಸ್’ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆರ್ ವೆಂಕಟೇಶ್ ಮತ್ತು ಅದೇ ಚಾನೆಲ್ ನಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತಿದ್ದ ದಿವ್ಯಾ ವಸಂತ ಎಂಬಾಕೆಯ ಸಹೋದರ ಸಂದೇಶ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ 3 ಮೊಬೈಲ್ ಜಪ್ತಿ ಮಾಡಲಾಗಿದೆ.

ಆದರೆ ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ನಿರೂಪಕಿ ದಿವ್ಯ ವಸಂತ ಮತ್ತು ಆಕೆಯ ಸಹಚರರಾದ , ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಕಳೆದ ವಾರ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲರ್ ನ ವ್ಯವಸ್ಥಾಪಕ ಶಿವಶಂಕರ ಅವರ ಪಾರ್ಲರ್ ಗೆ ತೆರಳಿದ್ದ ಈ ಪತ್ರಕರ್ತರ ಸೋಗಿನ ಸುಲಿಗೆ ಗ್ಯಾಂಗ್ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ಯತ್ನಿಸಿತ್ತು. ಆದರೆ ಇವರು ಕೇಳಿದ ಮೊತ್ತ 15 ಲಕ್ಷ ಆಗಿದ್ದು ಅದನ್ನು ನೀಡಲು ಮಾಲೀಕ ನಿರಾರಿಸಿದಾಗ ಕನಿಷ್ಟ 8 ಲಕ್ಷ ನೀಡುವಂತೆ ತಂಡ ಬೆದರಿಕೆ ಒಡ್ಡಿತ್ತು. ಆದರೆ ಮಾಲೀಕ ತಾನು ಯಾವುದೇ ವೇಶ್ಯಾವಾಟಿಕೆ ನಡೆಸುತ್ತಿಲ್ಲ ಆದರೂ ಒಂದು ಲಕ್ಷ ನೀಡುವುದಾಗಿ ತಿಳಿಸಿದ್ದರೂ ಈ ತಂಡ ನಿರಾಕರಿಸಿ ವರದಿ ಪ್ರಸಾರ ಮಾಡುವುದಾಗಿ ಬೆದರಿಸಿ ತೆರಳಿತ್ತು. ಆದರೆ ನಿರಪರಾಧಿ ಆಗಿದ್ದ ಪಾರ್ಲರ್ ಮಾಲೀಕ ಸುದ್ದಿ ಪ್ರಸಾರಗೊಂಡರೆ ವ್ಯವಹಾರಕ್ಕೆ ತೊಂದರೆ ಆಗುತ್ತೆ ಕೆಟ್ಟ ಹೆಸರು ಬರುತ್ತೆ ಎಂಬ ಕಾರಣದಿಂದ ಪೋಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೆತ್ತಿಕೊಂಡ ಸಿಸಿಬಿ ಈ ಪ್ರಕರಣದ ಕೂಲಂಕುಷ ತನಿಖೆ ನಡೆಸುತ್ತಿದೆ.

ತಮ್ಮ ಸುಲಿಗೆ ಕೃತ್ಯಗಳಿಗೆ ವಾಟ್ಸ್ ಆಪ್ನಲ್ಲಿ ‘ಸೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ಅನ್ನು ರಾಜ್ ನ್ಯೂಸ್ ನ ವೆಂಕಟೇಶ್ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ಗ್ರೂಪ್ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ.
ಆರ್ಥಿಕವಾಗಿ ಕೆಳ ಮದ್ಯಮ ವರ್ಗದಿಂದ ಬಂದಿದ್ದು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು. ಅಲ್ಲದೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ರೀಲ್ಸ್ಗಳ ಮೂಲಕ ಆಕೆ ಖ್ಯಾತಿ ಪಡೆದಿದ್ದಳು. ಖಾಸಗಿ ಸುದ್ದಿವಾಹಿನಿಯಲ್ಲಿ 30 ಸಾವಿರ ರೂಪಾಯಿ ಸಂಬಳ ಇದ್ದರೆ, ಮನರಂಜನಾ ವಾಹಿನಿ ಯಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದ ಆಕೆಗೆ ವಾರಕ್ಕೆ 6 ರಿಂದ 7 ಸಾವಿರ ರು. ಸಂಭಾವನೆ ಸಿಗುತ್ತಿತ್ತು. ಇಷ್ಟು ಹಣ ಗಳಿಸಿಯೂ ಐಷಾರಾಮಿ ಜೀವನದ ಚಟಕ್ಕೆ ಬಿದ್ದಿದ್ದ ದಿವ್ಯಾ, ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ಹಿಡಿದಿದ್ದಳು.
ಈ ತಂಡವು ನಗರದ ಶ್ರೀಮಂತ ಸ್ಪಾಗಳಿಗೆ ತಮ್ಮದೇ ಗ್ಯಾಂಗಿನ ಯುವತಿಯೊಬ್ಬಳನ್ನು ಕೆಲಸಕ್ಕೆ ಸೇರಿಸುತಿತ್ತು. ನಂತರ ಇದೇ ಗ್ಯಾಂಗಿನವನೊಬ್ಬ ಆ ಸ್ಪಾ ಗೆ ತೆರಳಿ ನಿರ್ದಿಷ್ಟ ಯುವತಿಯ ಹೆಸರು ಹೇಳಿ ಆಕೆಯಿಂದಲೇ ಮಸಾಜ್ ಸೇವೆ ಪಡೆಯುತಿದ್ದ . ಆ ಸಂದರ್ಬದಲ್ಲಿ ಇದೇ ಗ್ಯಾಂಗಿನ ಇಬ್ಬರ ನಡುವೆ ಪೂರ್ವ ಯೋಜಿತ ಯೋಜನೆಯಂತೆ ಲೈಂಗಿಕ ಸಂಪರ್ಕ ನಡೆಸಲಾಗುತಿತ್ತು. ಅದು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತಿದ್ದರು. ಕೆಲ ದಿನಗಳ ನಂತರ ಆ ಯುವತಿ ಕೆಲಸ ಬಿಡುತಿದ್ದಳು. ಇದೆಲ್ಲ ಒಂದೇ ತಿಂಗಳಿನಲ್ಲಿ ನಡೆಯುತಿತ್ತು.

ನಂತರ ಈ ಗ್ಯಾಂಗ್ ಫೀಳ್ಡಿಗಿಳಿಯುತಿತ್ತು. ಸದರಿ ಮಸಾಜ್ ಸೆಂಟರ್ ನ ಮಾಲೀಕರ ಬಳಿ ಹೋಗಿ ವೀಡಿಯೋ ತೋರಿಸಿ ಬೆದರಿಕೆ ಒಡ್ಡಿ ಲಕ್ಷಗಟ್ಟಲೆ ರೂಪಾಯಿ ಹಣ ಸುಲಿಗೆ ಮಾಡುತಿದ್ದರು. ಇದೇ ರೀತಿ ಕಳೆದ ಅನೇಕ ತಿಂಗಳುಗಳಿಂದ ಮಾಡಿದ್ದಾರೆ ಎನ್ನಲಾಗಿದೆ.
ವೆಂಕಟೇಶ್ ತಂಡವು ಕೆಲ ದಿನಗಳ ಹಿಂದೆ ಇಂದಿರಾನಗರದ ಶ್ರೀ ಸ್ಪಾ ಆಯಂಡ್ ಬ್ಯೂಟಿ ಪಾರ್ಲರ್ ಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸೋದರ ಸಂದೇಶ್ ತೆರಳಿದ್ದ. ಈ ಮೊದಲೇ ಸ್ಪಾನಲ್ಲಿ ಕೆಲಸದಲ್ಲಿದ್ದ ತನ್ನ ಗ್ಯಾಂಗ್ನ ಯುವತಿ ಬಳಿಯೇ ಮಸಾಜ್ಗೆ ಗೊತ್ತುಪಡಿಸಿದ್ದ. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಸಲುಗೆಯಿಂದಿರುವ ದೃಶ್ಯಾವಳಿಗಳನ್ನು ಸಂದೇಶ್ ಚಿತ್ರೀಕರಿಸಿಕೊಂಡಿದ್ದ. ಇದಾದ ಬಳಿಕ ತನ್ನ ನ್ಯೂಸ್ ಚಾನೆಲ್ನ ವರದಿಗಾರ್ತಿಯನ್ನು ಆ ಸ್ಪಾಗೆ ಕಳುಹಿಸಿ ವೆಂಕಟೇಶ್ ಹಣ ಸುಲಿಗೆಗೆ ಯತ್ನಿಸಿದ್ದನು.
ವೆಂಕಟೇಶ ರಾಜ್ ನ್ಯೂಸ್ ವಾಹಿನಿ ಸೇರುವ ಮುನ್ನ ಯೂಟ್ಯೂಬ್ನಲ್ಲಿ ತನ್ನದೇ ಚಾನಲ್ ಅನ್ನು ವೆಂಕಟೇಶ್ ಮಾಡಿಕೊಂಡಿದ್ದ. ಆ ಸಂದರ್ಭದಲ್ಲಿ ಸಂದರ್ಶನಕ್ಕಾಗಿ ದಿವ್ಯಾಳನ್ನು ಆತ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲೇ ಇಬ್ಬರು ಸುಲಿಗೆ ಕೃತ್ಯಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಸಾಜ್ ಪಾರ್ಲರ್ ಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ ಎನ್ನಲಾಗಿದೆ.

ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರೂಪಾಯಿವರೆಗೆ ಆನ್ಲೈನ್ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಬಂಧನ ಭೀತಿಗೊಳಗಾದ ದಿವ್ಯಾ ವಸಂತ, ಮನೆಯಲ್ಲಿದ್ದ ಕ್ಯಾಮೆರಾ, ಲ್ಯಾಪ್ಟಾಪ್ ಸೇರಿ ಕೆಲ ವಸ್ತು ಗಳನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಈ ಸುಲಿಗೆ ಯತ್ನ ಪ್ರಕರಣದಲ್ಲಿ ತಮ್ಮ ಇಬ್ಬರೂ ಮಕ್ಕಳು ಸಿಕ್ಕಿಬಿದ್ದರಿಂದ ತೀವ್ರವಾಗಿ ನೊಂದಿರುವ ದಿವ್ಯಾ ತಾಯಿ, ಜಿ.ಬಿ.ನಗರ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ತಾನು ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದೇನೆ. ವೆಂಕಟೇಶ್ನಿಂದಲೇ ದಿವ್ಯಾ ತಪ್ಪು ದಾರಿ ತುಳಿದಿದ್ದಾಳೆ ಎಂದು ಅವರು ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ.

ಈಗಾಗಲೇ ಈರ್ವರನ್ನು ಬಂಧಿಸಲಾಗಿದ್ದು ರಾಜ್ ನ್ಯೂಸ್ ನ ಮುಖ್ಯಸ್ಥ ವೆಂಕಟೇಶ್ ಎಂಬಾತನನ್ನು ಕೋರ್ಟು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಸಂದೇಶ್ ಎಂಬಾತನನ್ನು ಪೋಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿರುವುದಾಗಿ ಜೀವನ ಭಿಮಾ ನಗರದ ಇನ್ಸ್ ಪೆಕ್ಟರ್ ವೆಂಕಟೇಶ್ ಪ್ರತಿಧ್ವನಿಗೆ ತಿಳಿಸಿದರು.






