![](https://pratidhvani.com/wp-content/uploads/2024/06/WhatsApp-Image-2024-06-19-at-08.45.59-1024x575.jpeg)
ದೇಶದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರ್ತಿದ್ದ ಹಾಗೆ ನೀಟ್ ಹಗರಣ ಬೆಳಕಿಗೆ ಬಂದಿದೆ. ಈ ಹಿಂದಿನ ಸರ್ಕಾರ ಅಥವಾ ಚುನಾವಣೆ ಘೋಷಣೆ ಆದ ಬಳಿಕ ಅಧಿಕಾರಿಗಳು ಮಾಡಿದ ಹಗರಣ ಎನ್ನಬಹುದು. ಆದರೆ ಆ ಸರ್ಕಾರದ ಮಂತ್ರಿಗಳು ಸೇರಿದಂತೆ ಪ್ರಮುಖ ನಾಯಕರಿಗೆ ಮಾಹಿತಿಯೇ ಇಲ್ಲದೆ ಈ ಹಗರಣ ನಡೆದಿದ್ಯಾ..? ಅಂದ್ರೆ ಸ್ಪಷ್ಟವಾಗಿ ಹೇಳುವುದು ಕಷ್ಟ ಸಾಧ್ಯ. ಆದರೆ ನೀಟ್ನಲ್ಲಿ ಅಕ್ರಮ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದಿದ್ದ NTA ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹಾಗು ಅಧಿಕಾರಿಗಳು ಮmತ್ತು ರಾಜಕಾರಣಿಗಳು ಆ ಬಳಿಕ ಅಕ್ರಮ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಪ್ರತಿ ಬಾರಿಯಂತೆ ಮೂರನೇ ಅವಧಿಯಲ್ಲಿ ಪ್ರಧಾನಿ ಆಗಿರುವ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದಾರೆ.
![](https://pratidhvani.com/wp-content/uploads/2024/06/WhatsApp-Image-2024-06-19-at-08.46.01.jpeg)
ನೀಟ್ ಹಗರಣದಿಂದ ದೇಶಾದ್ಯಂತ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಡ್ತಿದ್ದಾರೆ. ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶೇಕಡ 0.001 ನಿರ್ಲಕ್ಷ್ಯವಾಗಿದ್ರೂ ಸುಮ್ಮನಿರಲ್ಲ ಅಂತ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ಮೂಲಕಲ ಇಡೀ ದೇಶಾದ್ಯಂತ 2024ರ ನೀಟ್ ಪರೀಕ್ಷೆ ಫಲಿತಾಂಶ ಸಂಚಲನ ಸೃಷ್ಟಿಸಿದೆ. ಅದೂ ಅಲ್ಲದೆ ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶದ ನಡುವೇ, ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿಯೇ ಫಲಿತಾಂಶ ಹೊರಬಿದ್ದಿದ್ದು, ಗೋಲ್ಮಾಲ್ ಮಾಡುವ ಉದ್ದೇಶದಿಂದಲೇ ಎನ್ನುವ ಬಗ್ಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜೂನ್ 4ರಂದು ಫಲಿತಾಂಶ ಪ್ರಕಟ ಆದ ಬಳಿಕ ಪರ-ವಿರೋಧಗಳು ಚರ್ಚೆ ತಾರಕಕ್ಕೇರಿದವು. ದೇಶಾದ್ಯಂತ ಬೃಹತ್ ಹೋರಾಟ ಕೂಡ ನಡೀತು. NEET ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಅರ್ಜಿ ವಿಚಾರಣೆ ನಡೀತು. ಈ ವೇಳೆ ಸುಪ್ರೀಂಕೋರ್ಟ್ ಮತ್ತೆ NTAಗೆ ಚಾಟಿ ಬೀಸಿದೆ.
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ಕೊಟ್ಟಿದ್ದು, ಪರೀಕ್ಷೆಯಲ್ಲಿ ಶೇಕಡ 0.001 ನಿರ್ಲಕ್ಷ್ಯವಿದ್ರೂ ಒಪ್ಪಿಕೊಂಡು ಸರಿಪಡಿಸಿ. ಪರೀಕ್ಷಾ ಸಂಸ್ಥೆಯಾಗಿ ನ್ಯಾಯಯುತವಾಗಿ ವರ್ತಿಸಿ. ಏನಾದರೂ ತಪ್ಪಿದ್ದರೆ, ಇದು ತಪ್ಪು ಎಂದು ಹೇಳಿ ಎಂದಿದೆ. ಇನ್ನು ಪರೀಕ್ಷೆಗಳಲ್ಲಿ ಅಕ್ರಮ ಎಸಗಿದಾತ ವೈದ್ಯನಾದ್ರೆ ಮುಂದಿನ ದಿನಗಳಲ್ಲಿ ಕಷ್ಟ ಮತ್ತು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಿಮಿಸುತ್ತಾನೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ವರ್ಷಗಟ್ಟಲೆ ಶ್ರಮ ಹಾಕಿರುತ್ತಾರೆ ಎಂದಿರುವ ಸುಪ್ರೀಂಕೋರ್ಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ವಿವರಣೆ ನೀಡಲು NTA ಹಾಗೂ ಕೇಂದ್ರಕ್ಕೆ ಸುಪ್ರೀಕೋರ್ಟ್ ಸೂಚನೆ ನೀಡಿ ನೋಟಿಸ್ ಜಾರಿ ಮಾಡಿದೆ.
![](https://pratidhvani.com/wp-content/uploads/2024/06/1200-675-21657502-thumbnail-16x9-neetexam-1-1024x576.jpg)
ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅನ್ನೋ ಅನುಮಾನ ದಟ್ಟವಾಗಿದೆ. 67 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳು 718, 719 ಅಂಕ ಗಳಿಸಿದ್ದಾರೆ. ಇದು ನೀಟ್ ಅಂಕಗಳ ಯೋಜನೆ ಪ್ರಕಾರ ಅಸಾಧ್ಯ. ಅದೂ ಅಲ್ಲದೆ ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ 6 ಜನ ಅಭ್ಯರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. ಇನ್ನು ನಿಗದಿತ ದಿನಾಂಕಕ್ಕಿಂತ 10 ದಿನ ಮೊದಲೇ ಫಲಿತಾಂಶ ಪ್ರಕಟ ಮಾಡಿದ್ದೂ ಕೂಡ ಅನುಮಾನ ಉಂಟಾಗುವಂತೆ ಮಾಡಿದೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ತಮಿಳುನಾಡು ಮಾದರಿಯಂತೆ ರಾಜ್ಯದಲ್ಲೂ ನೀಟ್ ಎಕ್ಸಾಂಗೆ ಅವಕಾಶ ನೀಡಬೇಕು ಎಂದಿದ್ದಾರೆ.
![](https://pratidhvani.com/wp-content/uploads/2024/06/WhatsApp-Image-2024-06-19-at-08.46.01-1.jpeg)
ನೀಟ್ ಪರೀಕ್ಷೆ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನ ಮುರಿದಿದ್ದು, ನೀಟ್ ಪರೀಕ್ಷೆಯಲ್ಲಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಮೌನಕ್ಕೆ ಶರಣಾಗಿದ್ದಾರೆ ಅಂತ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಜುಲೈ 6ರಂದು ಕೌನ್ಸೆಲಿಂಗ್ ನಡೆಯಲಿದೆ. ಹೀಗಾಗಿ ಈ ಪ್ರಕರಣದ ಕುರಿತಾದ ತನಿಖೆ ಯಾವ ಹಂತಕ್ಕೆ ಬಂದಿದೆ ಅನ್ನೋದನ್ನ ತಿಳಿಯೋದು ಮುಖ್ಯ ಅಂತ ಅರ್ಜಿದಾರರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ತುಟಿ ಬಿಚ್ಚದೆ ಇರುವುದು ಯುವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡೂ ಅವಧಿಯಲ್ಲೂ ಪ್ರಧಾನಿ ಗಂಭೀರವಾದ ವಿಚಾರಗಳ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗುವುದು. ಚುನಾವಣೆ ಬಂದಾಗ ಮಾತ್ರ ಅಬ್ಬರಿಸುವುದು ಎನ್ನುವಂತಿದ್ದರು. ಈ ಅವಧಿಯಲ್ಲೂ ಅದೇ ಮುಂದುವರಿದೆ ಎನ್ನಬಹುದು.
ಕೃಷ್ಣಮಣಿ